ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಗಳನ್ನು ಆಡಿಸಬಹುದಾದಂತಹ ಮಹಾತ್ಮ ಗಾಂಧಿ ಹಾಕಿ ಟರ್ಫ್ ಗ್ರೌಂಡ್, ಕ್ರಿಕೆಟ್ ನೆಟ್ ಪ್ರಾಕ್ಟಿಸ್ ಗ್ರೌಂಡ್, 4 ಈಜುಕೊಳಗಳು ಈಗಾಗಲೇ ಕ್ರೀಡಾಪಟುಗಳಿಗೆ ಸದ್ಬಳಕೆಯಾಗುತ್ತಿವೆ.

ಗದಗ: ಜಿಲ್ಲೆಯಿಂದ ಅಂತಾರಾಷ್ಟ್ರೀಯ ಮತ್ತು ರಾಷ್ಟ್ರೀಯ ಮಟ್ಟದ ಹಾಕಿ, ಕ್ರಿಕೆಟ್, ಕುಸ್ತಿ, ವಾಲಿಬಾಲ್ ಮತ್ತು ಅಥ್ಲೆಟಿಕ್ಸ್ ಕ್ರೀಡಾಪಟುಗಳು ಹೊರಹೊಮ್ಮಿದ್ದು, ಇಂತಹ ಗದಗ ಜಿಲ್ಲೆಯಲ್ಲಿ ರಾಜ್ಯಮಟ್ಟದ ಪಪೂ ಕಾಲೇಜು ವಿದ್ಯಾರ್ಥಿಗಳ ಟೆನ್ನಿಕಾಯಿಟ್ ಪಂದ್ಯಾವಳಿಗಳು ನಡೆಯುತ್ತಿರುವುದು ಸ್ವಾಗತರ್ಹ. ಜಿಲ್ಲೆಯಿಂದ ಅನೇಕ ರಾಷ್ಟ್ರಮಟ್ಟದ ಟೆನ್ನಿಕಾಯಿಟ್ ಕ್ರೀಡಾಪಟುಗಳು ಹೊರಹೊಮ್ಮಲೆಂದು ಜಿಲ್ಲಾ ಉಸ್ತುವಾರಿ ಸಚಿವ ಡಾ. ಎಚ್.ಕೆ. ಪಾಟೀಲ ಹಾರೈಸಿದರು.ನಗರದ ಕೆ.ಎಚ್. ಪಾಟೀಲ ಕ್ರೀಡಾಂಗಣದಲ್ಲಿ ಜಿಲ್ಲಾಡಳಿತ, ಜಿಪಂ, ಜಿಲ್ಲಾ ಶಾಲಾ ಶಿಕ್ಷಣ ಇಲಾಖೆ(ಪಪೂ), ಪಪೂ ಕಾಲೇಜುಗಳ ಪ್ರಾಚಾರ್ಯರ ಸಂಘ, ರಾಜ್ಯ ಪಪೂ ಮಹಾವಿದ್ಯಾಲಯಗಳ ನೌಕರರ ಸಂಘ, ರಾಜ್ಯ ಪಪೂ ಕಾಲೇಜುಗಳ ಉಪನ್ಯಾಸಕರ ಸಂಘ, ದೈಹಿಕ ಶಿಕ್ಷಣ ಉಪನ್ಯಾಸಕರ ಸಂಘ, ಪ.ಪೂ.ಶಿ. ಇಲಾಖೆ ಬೋಧಕೇತರ ಸಂಘಗಳ ಆಶ್ರಯದಲ್ಲಿ ನಡೆದ ಪಪೂ ಕಾಲೇಜು ವಿದ್ಯಾರ್ಥಿಗಳ ರಾಜ್ಯಮಟ್ಟದ ಟೆನ್ನಿಕಾಯಿಟ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.

ರಾಜ್ಯ ಸರ್ಕಾರದಿಂದ ಜಿಲ್ಲೆಯಲ್ಲಿ ಕ್ರೀಡಾಪಟುಗಳಿಗೆ ಅನುಕೂಲವಾಗುವ ರೀತಿಯಲ್ಲಿ ಅನೇಕ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗಿದೆ. ರಾಷ್ಟ್ರೀಯ ಮಟ್ಟದ ಹಾಕಿ ಪಂದ್ಯಾಟಗಳನ್ನು ಆಡಿಸಬಹುದಾದಂತಹ ಮಹಾತ್ಮ ಗಾಂಧಿ ಹಾಕಿ ಟರ್ಫ್ ಗ್ರೌಂಡ್, ಕ್ರಿಕೆಟ್ ನೆಟ್ ಪ್ರಾಕ್ಟಿಸ್ ಗ್ರೌಂಡ್, 4 ಈಜುಕೊಳಗಳು ಈಗಾಗಲೇ ಕ್ರೀಡಾಪಟುಗಳಿಗೆ ಸದ್ಬಳಕೆಯಾಗುತ್ತಿವೆ ಎಂದರು.

ಶೀಘ್ರದಲ್ಲಿಯೇ ಕಳಸಾಪುರ ರಸ್ತೆಯಲ್ಲಿರುವ ಒಳಾಂಗಣ ಕ್ರೀಡಾಂಗಣದಲ್ಲಿ ವುಡನ್ ಕೋರ್ಟನ್ನು ಸಿದ್ಧಪಡಿಸಲಾಗುವುದು. ಕೆ.ಎಚ್. ಪಾಟೀಲ ಸ್ಟೇಡಿಯಂನಲ್ಲಿ ಪುಟ್‌ಬಾಲ್ ಟರ್ಫ್ ಮೈದಾನ ಮತ್ತು ಪೆಡ್‌ಲೈಟ್ ವ್ಯವಸ್ಥೆಗಳನ್ನು ಕಲ್ಪಿಸಲಾಗುವುದು. ಈ ಎಲ್ಲ ಕ್ರೀಡಾ ಸೌಲಭ್ಯಗಳನ್ನು ಸದುಪಯೋಗಪಡಿಸಿಕೊಂಡು ಜಿಲ್ಲೆಯ ಕ್ರೀಡಾಪಟುಗಳು ರಾಷ್ಟ್ರಮಟ್ಟದಲ್ಲಿ ಸಾಧನೆಗೈಯಬೇಕು. ಐತಿಹಾಸಿಕ ಗದಗ-ಬೆಟಗೇರಿ ಮತ್ತು ಲಕ್ಕುಂಡಿಯ ದೇವಾಲಯ ಮತ್ತು ಐತಿಹಾಸಿಕ ಸ್ಮಾರಕಗಳನ್ನು ಕ್ರೀಡಾಪಟುಗಳು ವೀಕ್ಷಿಸಬೇಕೆಂದು ತಿಳಿಸಿದರು.ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರ ಮಾತನಾಡಿ, ಕ್ರೀಡಾಪಟುಗಳಿಗೆ ಮಾರ್ಗದರ್ಶನ ಮಾಡಲು ಸರ್ಕಾರವು ಪ್ರಾಥಮಿಕ, ಪ್ರೌಢ, ಪಪೂ ಮತ್ತು ಪದವಿ ಕಾಲೇಜುಗಳಲ್ಲಿ ದೈಹಿಕ ಶಿಕ್ಷಣ ಶಿಕ್ಷಕರು ಮತ್ತು ಉಪನ್ಯಾಸಕರ ನೇಮಕಾತಿ ಮಾಡಿಕೊಳ್ಳಬೇಕೆಂದು ಸರ್ಕಾರವನ್ನು ಆಗ್ರಹಿಸಿದರು.

ಈ ಸಂದರ್ಭದಲ್ಲಿ ಪ.ಪೂ.ಶಿ. ಇಲಾಖೆಯಲ್ಲಿ ಸಾಧನೆಗೈದ ಹಾಗೂ ಕ್ರೀಡಾಕೂಟಕ್ಕೆ ಸಹಾಯ, ಸಹಕಾರ ಸಲ್ಲಿಸಿದ ಮೇಜರ್ ಡಾ. ಪ್ರಾ. ಬಿ.ಎಸ್. ರಾಠೋಡ, ರಾಜೇಶ ಕುಲಕರ್ಣಿ, ಪ್ರಾ. ವಿ.ಎಸ್. ದಲಾಲಿ ಹಾಗೂ ರಾಜ್ಯಮಟ್ಟದಲ್ಲಿ ಸಾಧನೆಗೈದ ಜಿಲ್ಲೆಯ ಪಪೂ ಕಾಲೇಜು ವಿದ್ಯಾರ್ಥಿಗಳನ್ನು, ಅಂತಾರಾಷ್ಟ್ರೀಯ ಕ್ರೀಡಾಕೂಟಗಳಲ್ಲಿ ಪಾಲ್ಗೊಂಡ ಅಂಗವಿಕಲ ಕ್ರೀಡಾಪಟುಗಳನ್ನು ಮತ್ತು ಜಿಲ್ಲಾ ಹಾಗೂ ತಾಲೂಕು ಮಟ್ಟದ ಪಪೂ ಕಾಲೇಜುಗಳ ಕ್ರೀಡಾಕೂಟಗಳನ್ನು ಯಶಸ್ವಿಯಾಗಿ ಸಂಘಟಿಸಿದ ಪ್ರಾಚಾರ್ಯರನ್ನು ಸನ್ಮಾನಿಸಲಾಯಿತು.ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಅಕ್ಬರಸಾಬ ಬಬರ್ಚಿ, ಜಿಲ್ಲಾಧಿಕಾರಿ ಸಿ.ಎನ್. ಶ್ರೀಧರ, ಉಪವಿಭಾಗಾಧಿಕಾರಿ ಗಂಗಪ್ಪ ಎಂ., ಜಿಪಂ ಮಾಜಿ ಅಧ್ಯಕ್ಷ ವಾಸಣ್ಣ ಕುರುಡಗಿ, ಸಿದ್ದಲಿಂಗೇಶ ಪಾಟೀಲ, ಹಾಸನದ ಕೃಷ್ಣಪ್ಪ, ನಿರ್ಣಾಯಕರ ತಂಡದ ಮುಖ್ಯಸ್ಥ ನವೀನಕುಮಾರ, ಕ್ರೀಡಾ ಇಲಾಖೆಯ ಸಹಾಯಕ ನಿರ್ದೇಶಕ ಶರಣು ಗೋಗೇರಿ, ಸಿದ್ದಲಿಂಗ ಮಸನಾಯಿಕ, ಜಿ.ಎನ್. ಕುರ್ತಕೋಟಿ, ಗಿರಿತಮ್ಮಣ್ಣವರ, ಜೆ.ಎ. ಶಿರಸಿ, ಹಾದಿಮನಿ, ಅಶೋಕ ಅಂಗಡಿ ಸೇರಿದಂತೆ ಮುಂತಾದವರು ಇದ್ದರು.

ಸಂಜನಾ ತೆಂಬದಮನಿ ಹಾಗೂ ಸಂಗಡಿಗರ ನಾಡಗೀತೆ ಪ್ರಸ್ತುತಪಡಿಸಿದರು. ಪ್ರಾ. ಸಂಘದ ಅಧ್ಯಕ್ಷ ಎಂ.ಸಿ. ಕಟ್ಟಿಮನಿ ಸ್ವಾಗತಿಸಿದರು. ಡಾ. ದತ್ತಪ್ರಸನ್ನ ಪಾಟೀಲ, ಪ್ರೊ. ಪ್ರಿಯಾಂಕ ಬೊಮ್ಮಾಯಿನವರ ನಿರೂಪಿಸಿದರು. ಉಪನ್ಯಾಸಕರ ಸಂಘದ ಅಧ್ಯಕ್ಷ ಎಸ್.ಎಸ್. ಸೋಮಣ್ಣವರ ವಂದಿಸಿದರು. ರಾಜ್ಯದ 30 ಶೈಕ್ಷಣಿಕ ಜಿಲ್ಲೆಗಳಿಂದ 300ಕ್ಕೂ ಹೆಚ್ಚು ಬಾಲಕ ಮತ್ತು ಬಾಲಕಿಯರ ತಂಡದ ಕ್ರೀಡಾಪಟುಗಳು ಭಾಗವಹಿಸಿದ್ದರು.