ಬಾಣಾವರದಲ್ಲಿ ಹಳ್ಳಿಕಾರ್ ಗೋತಳಿಯ ಸಂರಕ್ಷಣೆ ಹಾಗೂ ಗ್ರಾಮೀಣ ಜಾನಪದ ಕ್ರೀಡೆಗಳ ಉತ್ತೇಜನದ ಉದ್ದೇಶದಿಂದ ಹಳ್ಳಿಕರ್ ಬ್ರಿಗೇಡ್ ಹಾಗೂ ಕೋಟೆ ಆಂಜನೇಯ ಸ್ವಾಮಿ ಹಳ್ಳಿಕಾರ್ ಗೋತಳಿ ಪ್ರೇಮಿಗಳ ಸಂಘದ ವತಿಯಿಂದ ಮೇ 9 ಮತ್ತು 10ರಂದು ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಂಘದ ಪದಾಧಿಕಾರಿಗಳು, ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸ್ಪರ್ಧೆಯನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಕನ್ನಡಪ್ರಭ ವಾರ್ತೆ ಅರಸೀಕೆರೆ

ತಾಲೂಕಿನ ಬಾಣಾವರದಲ್ಲಿ ಹಳ್ಳಿಕಾರ್ ಗೋತಳಿಯ ಸಂರಕ್ಷಣೆ ಹಾಗೂ ಗ್ರಾಮೀಣ ಜಾನಪದ ಕ್ರೀಡೆಗಳ ಉತ್ತೇಜನದ ಉದ್ದೇಶದಿಂದ ಹಳ್ಳಿಕರ್ ಬ್ರಿಗೇಡ್ ಹಾಗೂ ಕೋಟೆ ಆಂಜನೇಯ ಸ್ವಾಮಿ ಹಳ್ಳಿಕಾರ್ ಗೋತಳಿ ಪ್ರೇಮಿಗಳ ಸಂಘದ ವತಿಯಿಂದ ಮೇ 9 ಮತ್ತು 10ರಂದು ರಾಜ್ಯ ಮಟ್ಟದ ಜೋಡಿ ಎತ್ತಿನ ಗಾಡಿ ಓಟ ಸ್ಪರ್ಧೆಯನ್ನು ಅದ್ಧೂರಿಯಾಗಿ ಆಯೋಜಿಸಲಾಗಿದೆ. ಈ ಕುರಿತು ಮಾಹಿತಿ ನೀಡಿದ ಸಂಘದ ಪದಾಧಿಕಾರಿಗಳು, ರಾಜ್ಯದ ವಿವಿಧ ಭಾಗಗಳಿಂದ ನೂರಾರು ಸ್ಪರ್ಧಾಳುಗಳು ಭಾಗವಹಿಸುವ ನಿರೀಕ್ಷೆ ಇದ್ದು, ಸ್ಪರ್ಧೆಯನ್ನು ಅತ್ಯಂತ ಶಿಸ್ತುಬದ್ಧ ಹಾಗೂ ಪಾರದರ್ಶಕವಾಗಿ ನಡೆಸಲು ಎಲ್ಲಾ ಸಿದ್ಧತೆಗಳನ್ನು ಮಾಡಲಾಗಿದೆ ಎಂದು ತಿಳಿಸಿದರು.

ಸ್ಪರ್ಧೆಯಲ್ಲಿ ಭಾಗವಹಿಸುವ ಸ್ಪರ್ಧಾಳುಗಳಿಗೆ 3,500 ಪ್ರವೇಶ ಶುಲ್ಕ ನಿಗದಿಪಡಿಸಲಾಗಿದ್ದು, ವಿಜೇತರಿಗೆ ಆಕರ್ಷಕ ಬಹುಮಾನಗಳನ್ನು ಘೋಷಿಸಲಾಗಿದೆ. ಪ್ರಥಮ ಬಹುಮಾನವಾಗಿ 1,11,111, ದ್ವಿತೀಯ ಬಹುಮಾನ 71,111, ತೃತೀಯ ಬಹುಮಾನ 51,111, ನಾಲ್ಕನೇ ಬಹುಮಾನ 31,111 ಹಾಗೂ ಐದನೇ ಬಹುಮಾನ 11,111 ನಿಗದಿಪಡಿಸಲಾಗಿದೆ.

ಸ್ಪರ್ಧೆಗೆ ಕೆಲವು ಕಟ್ಟುನಿಟ್ಟಿನ ನಿಯಮಾವಳಿಗಳನ್ನು ಜಾರಿಗೊಳಿಸಲಾಗಿದ್ದು, ಶುದ್ಧ ಹಳ್ಳಿಕಾರ್‌ ತಳಿಯ ಕಸಿರಾಸುಗಳಿಗೆ ಮಾತ್ರ ಅವಕಾಶ ನೀಡಲಾಗಿದೆ. ಜೋಡಿ ಹಳ್ಳಿಕಾರ್‌ ಎತ್ತುಗಳು ಅಥವಾ ಒಂದು ಹಳ್ಳಿಕಾರ್ ಹಾಗೂ ಒಂದು ಕಿಲಾರಿ ಎತ್ತಿನ ಜೋಡಿಗೆ ಮಾತ್ರ ಪ್ರವೇಶ ಇರಲಿದೆ. ಜಂಟಿ ಗೂಳಿ ಹಾಗೂ ಜೋಡಿ ಕಿಲಾರಿ ಎತ್ತುಗಳಿಗೆ ಅವಕಾಶ ಇರುವುದಿಲ್ಲ ಎಂದು ಸ್ಪಷ್ಟಪಡಿಸಿದರು. ಒಂದು ಗಾಡಿಗೆ ಗರಿಷ್ಠ ಎಂಟು ಜನರಿಗೆ ಮಾತ್ರ ಅವಕಾಶವಿದ್ದು, ಸ್ಪರ್ಧೆಯಲ್ಲಿ ಸೆನ್ಸಾರ್‌ ವ್ಯವಸ್ಥೆ ಅಳವಡಿಸಲಾಗುತ್ತದೆ. ತೀರ್ಪುಗಾರರ ನಿರ್ಧಾರವೇ ಅಂತಿಮವಾಗಿದ್ದು, ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಸೂಕ್ತ ಭದ್ರತಾ ಕ್ರಮಗಳನ್ನು ಕೈಗೊಳ್ಳಲಾಗಿದೆ ಎಂದು ಸಂಘದ ಪದಾಧಿಕಾರಿಗಳು ತಿಳಿಸಿದರು.

ಈ ಜಾನಪದ ಕ್ರೀಡಾಕೂಟವನ್ನು ವೀಕ್ಷಿಸಲು ಹಾಗೂ ರೈತರನ್ನು ಉತ್ತೇಜಿಸಲು ಶಾಸಕ ಕೆ.ಎಂ. ಶಿವಲಿಂಗೇಗೌಡ, ಹಾಸನ ಲೋಕಸಭಾ ಸದಸ್ಯ ಶ್ರೇಯಸ್ ಪಟೇಲ್, ಕನ್ನಡ ಚಿತ್ರರಂಗದ ನಟ ಧ್ರುವ ಸರ್ಜಾ, ಹಾಸ್ಯ ಕಲಾವಿದ ಧರ್ಮಣ್ಣ, ಅಂತರರಾಷ್ಟ್ರೀಯ ದೇಹದಾರ್ಢ್ಯ ಪಟು ಚೇತನ್ ಕೊಡಪ್ಪ, ಮಿಮಿಕ್ರಿ ಕಲಾವಿದ ಪ್ರವೀಣ್ ಕೆಂಪೇಗೌಡ ಸೇರಿದಂತೆ ಹಲವು ಗಣ್ಯರು ಭಾಗವಹಿಸುವ ಸಾಧ್ಯತೆ ಇದೆ ಎಂದು ತಿಳಿಸಿದರು.

ರಾಜ್ಯದ ನಾನಾ ಭಾಗಗಳಿಂದ ಸಾವಿರಾರು ರೈತರು, ಹಳ್ಳಿಕಾರ್‌ ತಳಿ ಅಭಿಮಾನಿಗಳು ಹಾಗೂ ಜಾನಪದ ಕ್ರೀಡೆ ಪ್ರೇಮಿಗಳು ಆಗಮಿಸುವ ನಿರೀಕ್ಷೆ ಇದ್ದು, ಸ್ಪರ್ಧೆಯನ್ನು ಯಶಸ್ವಿಗೊಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಮನವಿ ಮಾಡಿದರು.

ಹೆಚ್ಚಿನ ಮಾಹಿತಿಗಾಗಿ ಸಂಘದ ಪದಾಧಿಕಾರಿಗಳಾದ ಅಜಯ್ ಕುಮಾರ್, ಶರತ್, ಗುರುಪೇಟೆ, ಮಂಜು, ಸಂತು, ಮೋಹನ್, ದೀಪು, ರಾಕಿ ಹಾಗೂ ವಿಜಯ್ ಅವರನ್ನು ಸಂಪರ್ಕಿಸಿ ಹೆಸರು ನೋಂದಾಯಿಸಿಕೊಳ್ಳಬಹುದು ಎಂದು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.