ಸಾರಾಂಶ
ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ ವಾರ್ಷಿಕ ಸಮ್ಮೇಳನ ನ. 22ರಿಂದ 24ರ ವರೆಗೆ ಕೋಟೇಶ್ವರ ಯುವ ಮೆರಿಡಿಯನ್ನಲ್ಲಿ ನಡೆಯಲಿದೆ.
ಕನ್ನಡಪ್ರಭ ವಾರ್ತೆ ಉಡುಪಿ
ಕರ್ನಾಟಕ ರಾಜ್ಯ ನೇತ್ರ ತಜ್ಞರ ಸಂಘದ 42ನೇ ವಾರ್ಷಿಕ ಸಮ್ಮೇಳನ ಕೆಓಎಸ್ಸಿಓಎನ್ - 2024 ನ.22ರಿಂದ ನ. 24ರ ವರೆಗೆ ಇಲ್ಲಿನ ಕೋಟೇಶ್ವರದ ಯುವ ಮೆರಿಡಿಯನ್ ನಲ್ಲಿ ಉಡುಪಿ ನೇತ್ರ ತಜ್ಞರ ಸಂಘ, ಐ ಬೀಚ್ ಫಿಲ್ಮ್ ಫೆಸ್ಟಿವಲ್ ಮತ್ತು ಮಾಹೆ ಮಣಿಪಾಲ ಸಂಯುಕ್ತ ಆಶ್ರಯದಲ್ಲಿ ನಡೆಯಲಿದೆ.ಈ ಬಗ್ಗೆ ಕರ್ನಾಟಕ ನೇತ್ರ ತಜ್ಞರ ಸಂಘದ ಅಧ್ಯಕ್ಷ ಡಾ.ಕೃಷ್ಣಪ್ರಸಾದ್ ಕೊಡ್ಲು ಅವರು ಸುದ್ದಿಗೋಷ್ಠಿಯಲ್ಲಿ ಮಾಹಿತಿ ನೀಡಿದರು.
ಈ ಸಮ್ಮೇಳನದಲ್ಲಿ 7 ಅಂತಾರಾಷ್ಟ್ರೀಯ, 30 ರಾಷ್ಟ್ರೀಯ ಮತ್ತು 600 ರಾಜ್ಯ ಮಟ್ಟದ ತಜ್ಞರು ಭಾಗವಹಿಸಲಿದ್ದು, 150ಕ್ಕೂ ಹೆಚ್ಚು ಪ್ರಸ್ತುತಿಗಳು, 100ಕ್ಕೂ ಹೆಚ್ಚು ಸಂಶೋಧನಾ ಪ್ರಬಂಧಗಳು, 75ಕ್ಕೂ ಹೆಚ್ಚು ಚರ್ಚಾಗೋಷ್ಠಿಗಳು ನಡೆಯಲಿವೆ. 2000ಕ್ಕೂ ಅಧಿಕ ಮಂದಿ ಪ್ರತಿನಿಧಿಗಳು ಸಮ್ಮೇಳನದಲ್ಲಿ ಭಾಗವಹಿಸಲಿದ್ದಾರೆ ಎಂದರು.ಸಂಜೆ ನಡೆಯುವ ಸಮಾರಂಭದಲ್ಲಿ ಕೇಂದ್ರ ಸರ್ಕಾರದ ಶಕ್ತಿ ಮತ್ತು ನವೀಕರಿಸಬಹುದಾದ ಇಂಧನ ಖಾತೆ ಸಚಿವ ಶ್ರೀಪಾದ ಯಸ್ಸೊ ನಾಯಕ್ ಸಮ್ಮೇಳನವನ್ನು ಉದ್ಘಾಟಿಸಲಿದ್ದಾರೆ. ಮಾಹೆಯ ಸಹಕುಲಾಧಿಪತಿ ಡಾ.ಎಚ್.ಎಸ್.ಬಲ್ಲಾಳ್, ಸಂಸದ ಕೋಟ ಶ್ರೀನಿವಾಸ ಪೂಜಾರಿ, ಶಾಸಕ ಕಿರಣ್ ಕೊಡ್ಗಿ ಮತ್ತು ಯಶ್ಪಾಲ್ ಸುವರ್ಣ, ಮಾಜಿ ಕ್ರಿಕೆಟಿಗ ಸೈಯ್ಯದ್ ಕಿರ್ಮಾನಿ ಮುಂತಾದವರು ಭಾಗವಹಿಸಲಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಸಮ್ಮೇಳನದ ಸಂಘಟನಾ ಅಧ್ಯಕ್ಷ ಡಾ.ಯೋಗೀಶ್ ಕಾಮತ್, ಸಂಘಟನಾ ಕಾರ್ಯದರ್ಶಿಗಳಾದ ಡಾ.ಶಮಂತ್ ಶೆಟ್ಟಿ ಮತ್ತು ಡಾ.ಶೈಲಜಾ ಎಸ್. ಉಪಸ್ಥಿತರಿದ್ದರು.