ರೆಹಮಾನ್‌ ಹತ್ಯೆಯಲ್ಲಿ ಬಜರಂಗದಳ ಪ್ರಮುಖರ ಸಿಲುಕಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆ

| Published : Jun 08 2025, 02:04 AM IST

ರೆಹಮಾನ್‌ ಹತ್ಯೆಯಲ್ಲಿ ಬಜರಂಗದಳ ಪ್ರಮುಖರ ಸಿಲುಕಿಸಿದರೆ ರಾಜ್ಯವ್ಯಾಪಿ ಪ್ರತಿಭಟನೆ
Share this Article
  • FB
  • TW
  • Linkdin
  • Email

ಸಾರಾಂಶ

ಮುಸ್ಲಿಮರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಹಿಂದೂ ಸಂಘಟನೆಯ ನಾಯಕರ, ಕಾರ್ಯಕರ್ತರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರವನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್‌ ಸೂರ್ಯ ಹೇಳಿದ್ದಾರೆ.

ಕನ್ನಡಪ್ರಭ ವಾರ್ತೆ ಮಂಗಳೂರು

ಬಂಟ್ವಾಳ ಕೊಳತ್ತಮಜಲು ರೆಹಮಾನ್‌ ಹತ್ಯೆ ಪ್ರಕರಣದಲ್ಲಿ ಬಜರಂಗದಳ ಪ್ರಮುಖರಾದ ಭರತ್‌ ಕುಮ್ಡೇಲ್‌ ಅವರನ್ನು ಸಿಲುಕಿಸುವ ಹುನ್ನಾರ ನಡೆಯುತ್ತಿದೆ. ಭರತ್‌ ಅವರು ಬಜರಂಗದಳ ಕಾರ್ಯಕರ್ತ ಎನ್ನುವ ಕಾರಣಕ್ಕೆ ಟಾರ್ಗೆಟ್‌ ಮಾಡಲಾಗಿದೆ. ರೆಹಮಾನ್‌ ಹತ್ಯೆ ಪ್ರಕರಣದಲ್ಲಿ ಭರತ್‌ ಕುಮ್ಡೇಲು ಅವರನ್ನು ಸಿಲುಕಿಸಿದರೆ ಬಜರಂಗದಳ ರಾಜ್ಯವ್ಯಾಪಿ ಪ್ರತಿಭಟನೆ ನಡೆಸಲಿದೆ ಎಂದು ಬಜರಂಗದಳ ಪ್ರಾಂತ ಸಂಯೋಜಕ ಪ್ರಭಂಜನ್‌ ಸೂರ್ಯ ಎಚ್ಚರಿಕೆ ನೀಡಿದ್ದಾರೆ.

ಶನಿವಾರ ಮಂಗಳೂರಿನ ವಿಶ್ವಹಿಂದು ಪರಿಷತ್‌ ಕಾರ್ಯಾಲಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಹಮಾನ್‌ ಹತ್ಯೆ ಪ್ರಕರಣದಲ್ಲಿ ಭರತ್‌ ಕುಮ್ಡೇಲ್‌ ಅವರನ್ನು ಸಿಲುಕಿಸಲು ಪೊಲೀಸ್‌ ಇಲಾಖೆ ಪ್ರಯತ್ನಿಸುತ್ತಿದೆ. ಈಗಾಗಲೇ ಅವರ ಮನೆಯ ಮೇಲೆ ದಾಳಿ ಮಾಡಿ ಶೋಧ ನಡೆಸಿದ್ದಾರೆ. ಮುಸ್ಲಿಮರ ಒತ್ತಡಕ್ಕೆ ಮಣಿದು ರಾಜ್ಯ ಸರ್ಕಾರ ಪೊಲೀಸ್‌ ಇಲಾಖೆಯನ್ನು ದುರ್ಬಳಕೆ ಮಾಡುತ್ತಿದೆ. ಹಿಂದೂ ಸಂಘಟನೆಯ ನಾಯಕರ, ಕಾರ್ಯಕರ್ತರ ಮೇಲೆ ಸುಳ್ಳು ದಾಖಲೆಗಳನ್ನು ಸೃಷ್ಟಿಸಿ ಹತ್ಯೆ ಪ್ರಕರಣದಲ್ಲಿ ಸಿಲುಕಿಸುವ ಹುನ್ನಾರವನ್ನು ಬಜರಂಗದಳ ತೀವ್ರವಾಗಿ ಖಂಡಿಸುತ್ತದೆ ಎಂದರು.

ಬಜರಂಗದಳ ವಿಭಾಗ ಸಂಯೋಜಕ ಪುನೀತ್‌ ಅತ್ತಾವರ, ಜಿಲ್ಲಾ ಸಂಯೋಜಕ ನವೀನ್‌ ಮೂಡುಶೆಡ್ಡೆ ಇದ್ದರು.------------------ಇದು ಯಾವ ನ್ಯಾಯ?ಪೊಲೀಸ್‌ ಇಲಾಖೆ ಗಡಿಪಾರು ನೋಟಿಸ್‌ ನೀಡಿದವರ ಪೈಕಿ ಹಿಂದುಗಳೇ ಅಧಿಕ ಸಂಖ್ಯೆಯಲ್ಲಿದ್ದಾರೆ. ಯಾವುದೇ ಪ್ರಕರಣ ಇಲ್ಲದವರು, ಸಣ್ಣ ಕೇಸ್‌ ಇದ್ದವವರಿಗೂ ಗಡಿಪಾರು ನೋಟಿಸ್‌ ನೀಡಲಾಗಿದೆ. ಸುಮಾರು 100 ಮಂದಿ ಹಿಂದು ಸಂಘಟನೆಗಳ ಕಾರ್ಯಕರ್ತರ ಮನೆಗೆ ಪೊಲೀಸರು ರಾತ್ರಿ ವೇಳೆ ತೆರಳಿ ಬೆದರಿಸಿದ್ದಾರೆ. ಇದು ಯಾವ ನ್ಯಾಯ? ಸಮಾಜದ ಕೆಲಸ ಮಾಡುವ ಸಂಘಟನೆಗಳ ಕಾರ್ಯಕರ್ತರಿಗೆ ಕಿರುಕುಳ ಸರಿಯಲ್ಲ ಎಂದು ಬಜರಂಗದಳ ಪ್ರಾಂತ ಸಹಸಂಯೋಜಕ ಭುಜಂಗ ಕುಲಾಲ್‌ ಹೇಳಿದರು.