ಸಾರಾಂಶ
-ತಿಪ್ಪಾರೆಡ್ಡಿಹಳ್ಳಿ ಸರ್ಕಾರಿ ಶಾಲೆಯಲ್ಲಿ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮದಲ್ಲಿ ಪ್ರಭುದೇವ್ ಅಭಿಮತ
-----ಕನ್ನಡಪ್ರಭ ವಾರ್ತೆ ಚಳ್ಳಕೆರೆ
ಗ್ರಾಮೀಣ ಭಾಗದಲ್ಲಿ ಮಾಹಿತಿ ಕೊರತೆಯಿಂದ ಅನಾರೋಗ್ಯ ಪೀಡಿತರಾಗುತ್ತಾರೆ. ಸುತ್ತಲಿನ ನೈರ್ಮಲ್ಯ ಮತ್ತು ನಾವು ರೂಢಿಸಿಕೊಂಡ ಚಟಗಳು ನಮ್ಮ ಆರೋಗ್ಯವನ್ನು ಸುಸ್ಥಿತಿಯಲ್ಲಿಡಲು ಬಿಡುವುದಿಲ್ಲ. ವಿದ್ಯಾರ್ಥಿಗಳು ಜಾಗೃತರಾಗಬೇಕಲ್ಲದೆ, ಗ್ರಾಮೀಣ ಭಾಗದ ಜನರನ್ನು ಜಾಗೃತಿ ಮೂಡಿಸಿದಾಗ ಮಾತ್ರ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಯಶಸ್ಸು ಕಾಣಲು ಸಾಧ್ಯವೆಂದು ಜಿಲ್ಲಾ ತಂಬಾಕು ನಿಯಂತ್ರಣ ಮಂಡಳಿ ಜಿಲ್ಲಾ ಸಂಚಾಲಕ ಪ್ರಭುದೇವ್ ತಿಳಿಸಿದರು.ಅವರು, ಓಬಳಾಪುರ ಗ್ರಾ.ಪಂ ವ್ಯಾಪ್ತಿಯ ತಿಪ್ಪಾರೆಡ್ಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜಿಲ್ಲಾ ತಂಬಾಕು ನಿಯಂತ್ರಣಮಂಡಳಿ ಹಾಗೂ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಆಯೋಜಿಸಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ಇಂತಹ ಕಾರ್ಯಕ್ರಮಗಳು ಹೆಚ್ಚು ನಡೆದಲ್ಲಿ ಮಾತ್ರ ಜನರಲ್ಲಿ ಆತ್ಮವಿಶ್ವಾಸ ಹೆಚ್ಚುತ್ತದೆ. ಮದ್ಯಪಾನ, ದೂಮಪಾನದಂತಹ ಚಟಗಳಿಂದ ದೂರವಿರಲು ಗ್ರಾಮೀಣ ಜನರಿಗೆ ವಿದ್ಯಾರ್ಥಿಗಳು ಪ್ರೇರಣೆ ನೀಡಬೇಕೆಂದರು.
ವಲಯ ಮೇಲ್ವಿಚಾರಕ ಶಿವಕುಮಾರ್ ಮಾತನಾಡಿ, ಯಾವುದೇ ಉತ್ತಮ ಕಾರ್ಯ ಆರಂಭವಾಗಲು ದೃಢ ಸಂಕಲ್ಪ ಮುಖ್ಯ. ಇಂದು ನಾವೆಲ್ಲರೂ ಸೇರಿ ಮಕ್ಕಳ ದಿನಾಚರಣೆ, ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಶ್ರೀಕ್ಷೇತ್ರಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸಹಕಾರದೊಂದಿಗೆ ಆಯೋಜಿಸಿದ್ದು, ಸರ್ಕಾರ ಅನೇಕ ಜಾಗೃತಿ ಕಾರ್ಯಕ್ರಮದ ಮೂಲಕ ಮದ್ಯಪಾನ, ಧೂಮಪಾನ ಚಟಗಳಿಂದ ದೂರವಿರಲು ಜನರಿಗೆ ತಿಳುವಳಿಕೆ ನೀಡುತ್ತಿದೆ. ಹಾಗಯೇ ನಮ್ಮ ಸಂಸ್ಥೆಯಿಂದಲೂ ಇಂತಹ ಕಾರ್ಯಕ್ರಮಗಳಿಗೆ ಹೆಚ್ಚು ಸಹಕಾರ ನೀಡಲಾಗುತ್ತದೆ ಎಂದರು.ಮುಖ್ಯ ಶಿಕ್ಷಕ ಶ್ರೀನಿವಾಸ್ಮೂರ್ತಿ ಮಾತನಾಡಿ, ಪ್ರೌಢಶಾಲಾ ಹಂತದಲ್ಲಿ ವಿದ್ಯಾರ್ಥಿಗಳು ಯಾವುದೇ ಕಾರ್ಯ ಮಾಡಲು ಸಮರ್ಥವಿರುತ್ತಾರೆ. ಇಂದು ನಮ್ಮ ಶಾಲೆಯಲ್ಲಿ ಎರಡು ವಿಭಿನ್ನ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರೂ ಅವುಗಳ ಅನುಷ್ಠಾನದಿಂದ ಉತ್ತಮ ಸಮಾಜ ನಿರ್ಮಾಣಕ್ಕೆ ಸಹಕಾರಿಯಾಗುತ್ತದೆ ಎಂದರು.
ಕಾರ್ಯಕ್ರಮದಲ್ಲಿ ತಿಪ್ಪೇಸ್ವಾಮಿ, ವೆಂಕಟೇಶ್, ಶಿಕ್ಷಕರಾದ ಎಂ.ಶಿವಣ್ಣ, ಇರ್ಫಾನಾ, ರಾಧಮ್ಮ, ಧನಂಜಯ, ಆಶಾ, ನವೀನ್ಕುಮಾರ್ ಮುಂತಾದವರು ಉಪಸ್ಥಿತರಿದ್ದರು.------
ಪೋಟೋ: ಚಳ್ಳಕೆರೆ ತಾಲೂಕಿನ ತಿಪ್ಪಾರೆಡ್ಡಿಹಳ್ಳಿ ಸರ್ಕಾರಿ ಪ್ರೌಢಶಾಲೆಯಲ್ಲಿ ಹಮ್ಮಿಕೊಂಡಿದ್ದ ಸ್ವಾಸ್ಥ್ಯ ಸಂಕಲ್ಪ ಕಾರ್ಯಕ್ರಮವನ್ನು ಜಿಲ್ಲಾ ತಂಬಾಕು ನಿಯಂತ್ರಣಮಂಡಳಿ ಜಿಲ್ಲಾ ಸಂಚಾಲಕ ಪ್ರಭುದೇವ್ ಉದ್ಘಾಟಿಸಿದರು.------೧೭ಸಿಎಲ್ಕೆ೨