ಸಾರಾಂಶ
ರಾಣಿಬೆನ್ನೂರು ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ರಾಣಿಬೆನ್ನೂರು: ತಾಲೂಕಿನಲ್ಲಿ ಮುಂಗಾರು ಹಂಗಾಮಿನಲ್ಲಿ ಅಗತ್ಯವಿರುವಷ್ಟು ಪ್ರಮಾಣದಲ್ಲಿ ಬೀಜ, ರಸಗೊಬ್ಬರ ದಾಸ್ತಾನು ಇದ್ದು, ರೈತರು ಆತಂಕಪಡುವ ಅಗತ್ಯವಿಲ್ಲ ಎಂದು ಶಾಸಕ ಪ್ರಕಾಶ ಕೋಳಿವಾಡ ಹೇಳಿದರು.
ನಗರದಲ್ಲಿ ಸೋಮವಾರ ಕೃಷಿ ಇಲಾಖೆ ಅಧಿಕಾರಿಗಳ ಜತೆ ವಿವಿಧ ಅಗ್ರೋ ಕೇಂದ್ರಗಳಿಗೆ ಭೇಟಿ ನೀಡಿದ ಆನಂತರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಕಳೆದ ವಾರ ಉತ್ತಮ ಮಳೆಯಾದ ಕಾರಣ ರೈತರು ಬಿತ್ತನೆ ಶುರು ಮಾಡಿಕೊಂಡಿದ್ದಾರೆ. ಆದರೆ ಕೃಷಿ ಅಧಿಕಾರಿಗಳ ಸಲಹೆ ಪ್ರಕಾರ ಜೂ. 1ರಿಂದ ಮಳೆಗಾಲ ಪ್ರಾರಂಭವಾಗುತ್ತದೆ. ಆಗ ಬಿತ್ತನೆ ಶುರು ಮಾಡಿದರೆ ಸೂಕ್ತ. ಎನ್.ಪಿ.ಕೆ. ಗೊಬ್ಬರಕ್ಕೆ ಪರ್ಯಾಯವಾಗಿ ಬೇರೆ ಗೊಬ್ಬರ ಹಾಗೂ ರೈತರ ಬೇಡಿಕೆಯ ಗೊಬ್ಬರ ಮಂಗಳವಾರ ಇಲ್ಲಿಗೆ ಆಗಮಿಸಲಿದೆ. ನಗರ ಹಾಗೂ ಗ್ರಾಮೀಣ ಭಾಗ ಸೇರಿದಂತೆ ತಾಲೂಕಿನ 7 ಕೇಂದ್ರಗಳಲ್ಲಿ ಬಿತ್ತನೆ ಬೀಜ, ಗೊಬ್ಬರ ಪೂರೈಕೆಯಾಗುತ್ತಿದೆ. ಬೀಜ, ಗೊಬ್ಬರ ಮಾರಾಟ ಮಾಡುವ ಎಲ್ಲ ಅಂಗಡಿಕಾರರು ದರದಲ್ಲಿ ಯಾವುದೇ ರೀತಿಯ ವ್ಯತ್ಯಾಸ ಮಾಡಬಾರದು. ಅಂಗಡಿಯಲ್ಲಿ ದಾಸ್ತಾನು ಹಾಗೂ ದರಪಟ್ಟಿ ಪ್ರದರ್ಶನ ಮಾಡಬೇಕು. ರೈತರು ಖರೀದಿ ಮಾಡಿದ ಬೀಜಕ್ಕೆ ಕಡ್ಡಾಯವಾಗಿ ರಶೀದಿ ತೆಗೆದುಕೊಳ್ಳಬೇಕು ಎಂದರು.ಜಂಟಿ ಕೃಷಿ ನಿರ್ದೇಶಕ ಮಂಜುನಾಥ ಅಂತರವಳ್ಳಿ, ಉಪ ನಿರ್ದೇಶಕ ರೇವಣಸಿದ್ಧನಗೌಡ, ಸಹಾಯಕ ನಿರ್ದೇಶಕಿ ಶಾಂತಮಣಿ ಜಿ., ನಗರ ಕಾಂಗ್ರೆಸ್ ಅಧ್ಯಕ್ಷ ಶೇರುಖಾನ್ ಕಾಬೂಲಿ, ಗ್ರಾಮೀಣ ಘಟಕದ ಅಧ್ಯಕ್ಷ ಮಂಜನಗೌಡ ಪಾಟೀಲ, ರವೀಂದ್ರಗೌಡ ಪಾಟೀಲ, ಇಕಾಲಸಾಬ್ ರಾಣಿಬೆನ್ನೂರು ಸುದ್ದಿಗೋಷ್ಠಿಯಲ್ಲಿದ್ದರು.