ಸಾರಾಂಶ
ಮುಂಡರಗಿ: ತಾಲೂಕಿನ ಕಲಕೇರಿ, ಬಸಾಪುರ ಗ್ರಾಮಗಳಲ್ಲಿ ರೈತರ ಟ್ರ್ಯಾಕ್ಟರ್ಗಳು (ಎಂಜಿನ್, ಟ್ರೇಲರ್) ಕಳ್ಳತನವಾಗಿ ತಾಲೂಕಿನಾದ್ಯಂತ ತೀವ್ರ ಆತಂಕಕ್ಕೆ ಕಾರಣವಾಗಿತ್ತು. ಕಳ್ಳತನವಾಗಿದ್ದ ಎಲ್ಲಾ ವಸ್ತುಗಳನ್ನು ಮುಂಡರಗಿ ಪೊಲೀಸ್ ಠಾಣೆಯ ಸಿಬ್ಬಂದಿಗಳು ಪತ್ತೆ ಮಾಡಿದ್ದು, ಇಬ್ಬರನ್ನು ಬಂಧಿಸಿದ್ದಾರೆ. ಪೊಲೀಸ್ ಸಿಬ್ಬಂದಿಗೆ ಎಸ್ಪಿ ಅವರು ನಗದು ಬಹುಮಾನ ಘೋಷಣೆ ಮಾಡಿದ್ದಾರೆ.
ಗುರುವಾರ ಸಂಜೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬಿ.ಎಸ್. ನೇಮಗೌಡ ಮಾಹಿತಿ ನೀಡಿ ತಮ್ಮ ನೇತೃತ್ವದಲ್ಲಿ ಹೆಚ್ಚುವರಿ ಪೊಲೀಸ್ ಅಧೀಕ್ಷಕ ಎಂ.ಬಿ. ಸುಂಕದ, ನರಗುಂದ ಡಿವೈಎಸ್ಪಿ ಪ್ರಭುಗೌಡ ಕಿರೇದಳ್ಳಿ ಹಾಗೂ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್ ಹಾಗೂ ಪೊಲೀಸ್ ತಂಡ ರಚನೆ ಮಾಡಿ ಟ್ರ್ಯಾಕ್ಟರ್ ಕಳ್ಳತನ ಮಾಡಿದ ಆರೋಪಿಗಳಾದ ಕಲಕೇರಿ ಗ್ರಾಮದ ವಿಶ್ವನಾಥ ವಿರೂಪಾಕ್ಷಪ್ಪ ತಾಮ್ರಗುಂಡಿ, ಮುಂಡರಗಿಯ ಗಣೇಶ ಕಂಚಗಾರ ಅವರನ್ನು ಬಂಧಿಸಿ ಕ್ರಮ ಕೈಗೊಳ್ಳಲಾಗಿದೆ, ಟ್ರ್ಯಾಕ್ಟರ್, ಎಂಜಿನ್ ಟ್ರೇಲರ್ ದಾವಣಗೆರೆಯ ತಿಪ್ಪೇಶರಾವ್, ಸೂರವೇ ಅವರಿಗೆ ಆರೋಪಿಗಳು ಮಾರಾಟ ಮಾಡಿದ್ದು, ಅವರಿಂದ 9 ಲಕ್ಷ ಮೌಲ್ಯದ ಎರಡು ಟ್ರ್ಯಾಕ್ಟರ್ ವಶಪಡಿಸಿಕೊಳ್ಳಲಾಗಿದೆ. ಟ್ರ್ಯಾಕ್ಟರ್ ಬಿಡಿಭಾಗಗಳನ್ನು ಮಾರಾಟ ಮಾಡುವ ಪ್ರಯತ್ನ ನಡೆಸಿದ್ದರು ಎಂದು ವಿವರಿಸಿ ಹೆಚ್ಚಿನ ತನಿಖಾ ಕಾರ್ಯ ನಡೆದಿದೆ ಎಂದು ತಿಳಿಸಿದರು.ಈ ಕಳ್ಳತನ ಬೇಧಿಸಿದ ಮುಂಡರಗಿ ಸಿಪಿಐ ಮಂಜುನಾಥ ಕುಸುಗಲ್, ಪಿಎಸ್ಐ ಸುಮಾ ಗೊರಬಾಳ, ಯೋಸೆಫ್ ಜಮುಲಾ, ಎಎಸ್ಐ ಕಡುಬಿ, ವಿ.ವೈ. ತಂಟ್ರಿ ಹಾಗೂ ಆರಕ್ಷಕ ಜೆ.ಐ. ಬಚ್ಚೇರಿ, ಮಹೇಶ ಗೊಳಗೊಳಕಿ, ಮಲ್ಲಿಕಾರ್ಜುನ ಬನ್ನಿಕೊಪ್ಪ, ಎಂ.ಆರ್. ಬಾರಕೇರ, ಐ.ಎ. ಮದರಂಗಿ, ಮಹೇಶ ಹೂಗಾರ, ಅವಿನಾಶಸಿಂಗ ಬ್ಯಾಳಿ, ಹನುಮಂತ ಡಂಬಳ, ಬಸವರಾಜ ಬಣಕಾರ, ನಿಂಗಪ್ಪ ಪೂಜಾರ, ಎಚ್.ಕೆ. ನದಾಫ್, ಮುತ್ತಾಳಮಠ, ಸೌಳಬಾವಿ, ಮುಕ್ಕಣ್ಣ ಪೂಜಾರ, ಪರಸುರಾಮ ಧಾರವಾಡ ಅವರಿಗೆ ಎಸ್ಪಿ ನ್ಯಾಮಗೌಡರ ಬಹುಮಾನ ಘೋಷಣೆ ಮಾಡಿದರು, ಹಾಗೆ ಪ್ರಶಂಸಾ ಪತ್ರ ನೀಡಲಾಗುವುದು ಎಂದರು. ಇದೇ ಸಂದರ್ಭದಲ್ಲಿ ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಇಟಗಿ ಸೇರಿದಂತೆ ದೃವ ಹೂಗಾರ, ಆಶ್ವಿನಿ ಗೌಡರ, ಗಣೇಶ ಭರಮಕ್ಕನರ ಸೇರಿದಂತೆ ಅನೇಕರು ಪೊಲೀಸ್ ತಂಡವನ್ನು ಹಸಿರು ಶಾಲು ಹೊದಿಸಿ ಸನ್ಮಾನಿಸಿದರು.
ಗದಗ ಸೇರಿದಂತೆ ಮುಂಡರಗಿಯಲ್ಲಿ ಹೆಲ್ಮೆಟ್ ಹಾಕಿಕೊಳ್ಳುವ ಉದ್ದೇಶ ಸಾರ್ವಜನಿಕ ಜೀವ ರಕ್ಷಣೆ ವಿನಃ ಉದ್ದೇಶಪೂರ್ವಕವಾಗಿ ದಂಡ ಹಾಕಬೇಕು ತೊಂದರೆ ಕೊಡುವುದಲ್ಲ. ಹೀಗಾಗಿ ಆಯಕಟ್ಟಿನ ಜಾಗೆಯಲ್ಲಿ ಥರ್ಡ್ ಐ ಸಿಸಿ ಕ್ಯಾಮೆರಾ ಅಳವಡಿಸಲಾಗಿದೆ, ಪಟ್ಟಣದಲ್ಲಿ ಇನ್ನು ಅನೇಕ ಕಡೆಗೆ ಕ್ಯಾಮೆರಾ ಅಳವಡಿಸಲಾಗುವುದು, ಅಪಘಾತಗಳಾದಾಗ ಬಹುತೇಕ ತಲೆಗೆ ಪೆಟ್ಟು ಸಾವು ನೋವುಗಳಾಗಿವೆ. ಇದನ್ನು ತಪ್ಪಿಸಲು ಇಂತಹ ಕಾನೂನು ಕ್ರಮ ಜರುಗಿಸಲಾಗುವುದು. ಹೀಗಾಗಿ ಸಾರ್ವಜನಿಕರು ಸಹಕರಿಸಬೇಕು ಇದಕ್ಕೆ ಜಿಲ್ಲಾ ಉಸ್ತುವಾರಿ ಸಚಿವರು ಸೇರಿದಂತೆ ಉಳಿದ ಶಾಸಕರು ಕೂಡಾ ಸಕಾರಾತ್ಮಕವಾಗಿ ಸ್ಪಂದಿಸಿದ್ದಾರೆ ಎಂದು ಎಸ್ಪಿ ಬಿ.ಎಸ್. ನೇಮಗೌಡ ಹೇಳಿದರು.