ಶಿವರಾತ್ರಿ: ಧರ್ಮಸ್ಥಳದಲ್ಲಿ ವಿದ್ಯುತ್‌ ದೀಪಾಲಂಕಾರ

| Published : Mar 08 2024, 01:52 AM IST

ಸಾರಾಂಶ

ಶಿವರಾತ್ರಿ ಹಿನ್ನೆಲೆಯಲ್ಲಿ ನಾಡಿನಾದ್ಯಂತದಿಂದ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ‌ ಭಕ್ತರು ಆಗಮಿಸುತ್ತಿದ್ದು ಸಂಭ್ರಮದ ಶಿವ ಪಂಚಾಕ್ಷರಿ ನಾಮಸ್ಮರಣೆ ಹಾಗೂ ಜಾಗರಣೆ ನಡೆಯಲಿದೆ. ಈಗಾಗಲೇ ಕ್ಷೇತ್ರಕ್ಕೆ 20 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದು ರಾತ್ರಿ ಲಕ್ಷ ಮಂದಿ ಭಕ್ತರು ಒಂದೆಡೆ ಸೇರುವ ನಿರೀಕ್ಷೆ ಇದೆ.

ಬೆಳ್ತಂಗಡಿ: ಮಹಾಶಿವರಾತ್ರಿ ಪ್ರಯುಕ್ತ ಶ್ರೀ ಕ್ಷೇತ್ರ ಧರ್ಮಸ್ಥಳ‌ ದೇವಳ‌ ಹಾಗೂ ಪ್ರವೇಶ ದ್ವಾರ ಸಹಿತ ಸುತ್ತ ಮುತ್ತ ವಿಶೇಷ ದೀಪಾಲಂಕಾರ ಮಾಡಲಾಗಿದೆ.

ಶಿವರಾತ್ರಿ ಹಿನ್ನೆಲೆಯಲ್ಲಿ ನಾಡಿನಾದ್ಯಂತದಿಂದ ಶ್ರೀ ಕ್ಷೇತ್ರಕ್ಕೆ ಲಕ್ಷಾಂತರ ಮಂದಿ‌ ಭಕ್ತರು ಆಗಮಿಸುತ್ತಿದ್ದು ಸಂಭ್ರಮದ ಶಿವ ಪಂಚಾಕ್ಷರಿ ನಾಮಸ್ಮರಣೆ ಹಾಗೂ ಜಾಗರಣೆ ನಡೆಯಲಿದೆ. ಈಗಾಗಲೇ ಕ್ಷೇತ್ರಕ್ಕೆ 20 ಸಾವಿರಕ್ಕೂ ಅಧಿಕ ಮಂದಿ ಪಾದಯಾತ್ರೆಯಲ್ಲಿ ಆಗಮಿಸುತ್ತಿದ್ದು ರಾತ್ರಿ ಲಕ್ಷ ಮಂದಿ ಭಕ್ತರು ಒಂದೆಡೆ ಸೇರುವ ನಿರೀಕ್ಷೆ ಇದೆ.ಪಾದಯಾತ್ರಿಗಳಿಗೆ ಸನ್ಮಾನ: ಶಿವರಾತ್ರಿ ಎಂಬುದು ತಾಳ್ಮೆ, ಸಂಯಮ, ಜಾಗರಣೆ, ಉಪವಾಸ, ವ್ರತ - ನಿಯಮಗಳ ಪಾಲನೆಯೊಂದಿಗೆ ಪಂಚೇಂದ್ರಿಯಗಳ ನಿಯಂತ್ರಣ ಮಾಡಿ ಎಲ್ಲರಿಗೂ ಮಾನಸಿಕ ಪರಿವರ್ತನೆಯ ಶುಭರಾತ್ರಿಯಾಗಲಿ ಎಂದು ಧರ್ಮಸ್ಥಳದ ಧರ್ಮಾಧಿಕಾರಿ ಡಿ. ವೀರೇಂದ್ರ ಹೆಗ್ಗಡೆ ಹಾರೈಸಿದರು.ಅವರು ಗುರುವಾರ ಧರ್ಮಸ್ಥಳದಲ್ಲಿ ಕಳೆದ 45 ವರ್ಷಗಳಿಂದ ಶಿವರಾತ್ರಿ ಸಂದರ್ಭ ಬೆಂಗಳೂರಿನಿಂದ ಧರ್ಮಸ್ಥಳಕ್ಕೆ ಪ್ರತಿವರ್ಷ ಪಾದಯಾತ್ರೆಯನ್ನು ವ್ಯವಸ್ಥಿತವಾಗಿ, ಶಿಸ್ತುಬದ್ಧವಾಗಿ ಆಯೋಜಿಸುತ್ತಿರುವ ಹನುಮಂತಪ್ಪ ಸ್ವಾಮೀಜಿ ಮತ್ತು ಅವರ ಶಿಷ್ಯರನ್ನು ಗೌರವಿಸಿ ಅಭಿನಂದಿಸಿದರು.ಮುಂದೆ ನಿರ್ದಿಷ್ಠ ಗುರಿ ಮತ್ತು ಹಿಂದೆ ಆದರ್ಶ ಗುರು ಇದ್ದಾಗ ಯಾವುದೇ ಕಾರ್ಯ ಯಶಸ್ವಿಯಾಗುತ್ತದೆ. ಪಾದಯಾತ್ರೆಯಲ್ಲಿ ಶ್ರದ್ಧಾ - ಭಕ್ತಿಯಿಂದ ಭಗವಂತನ ನಾಮಸ್ಮರಣೆಯೊಂದಿಗೆ ಕೆಟ್ಟ ಅಭ್ಯಾಸಗಳನ್ನು ಬಿಟ್ಟು ತ್ಯಾಗ ಮನೋಭಾವ ಮತ್ತು ಉತ್ತಮ ಸಂಸ್ಕಾರ ಮೈಗೂಡಿಸಿಕೊಳ್ಳಬೇಕು ಎಂದು ಅವರು ಸಲಹೆ ನೀಡಿದರು.

ಯುವಜನರು ಹೆಚ್ಚಾಗಿ ಪಾದಯಾತ್ರೆಯಲ್ಲಿ ಭಾಗವಹಿಸುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ ಎಂದು ಅವರು ಮೆಚ್ಚುಗೆ ವ್ಯಕ್ತ ಪಡಿಸಿದರು.

ಚಲನಚಿತ್ರ ನಿರ್ದೇಶಕ ಶಶಿಕುಮಾರ್, ನಾಗರಾಜ ರೆಡ್ಡಿ, ಕಮಲಾ, ಮೋಹನ ಗೌಡ, ಚಂದ್ರಪ್ಪ, ಹನುಂತರಾಯಪ್ಪ, ನರಸಿಂಹಪ್ಪ ಮತ್ತು ಮರಿಯಪ್ಪ ಅವರನ್ನು ಸನ್ಮಾನಿಸಲಾಯಿತು.

ಪಾದಯಾತ್ರಿಗಳ ಕ್ಷೇತ್ರ ದರ್ಶನ ಸುಗಮವಾಗಲು ಸಹಕರಿಸಿದ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಅವರನ್ನು ಗೌರವಿಸಲಾಯಿತು.