ಕೊಪ್ಪಳ: ಶಾಲೆಗಳಲ್ಲಿ ವಿದ್ಯಾರ್ಥಿಗಳಿಗೆ ನೀಡುವ ಬಿಸಿಯೂಟ ಆರೋಗ್ಯ, ಬೆಳವಣಿಗೆ ಹಾಗೂ ವಿದ್ಯಾಭ್ಯಾಸದ ಮೇಲೂ ಮಹತ್ವದ ಪರಿಣಾಮ ಬೀರುತ್ತದೆ ಎಂದು ತಾಪಂ ಅಕ್ಷರ ದಾಸೋಹದ ಸಹಾಯಕ ನಿರ್ದೇಶಕ ಎಸ್.ಬಿ.ಕುರಿ ಹೇಳಿದರು.

ತಾಲೂಕಿನ ಹಿರೇಸಿಂದೋಗಿ ಗ್ರಾಮದ ಕೆಪಿಎಸ್ ಶಾಲೆಯಲ್ಲಿ ಶನಿವಾರ ಹಮ್ಮಿಕೊಂಡಿದ್ದ ಪಿ.ಎಂ.ಪೋಷಣ್ ಶಕ್ತಿ ನಿರ್ಮಾಣ ಯೋಜನೆ ಯಶಸ್ವಿಯಾಗಿ ಮತ್ತು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಉದ್ದೇಶದಿಂದ ಬಿಸಿಯೂಟ ತಯಾರಿಸುವ ಸಿಬ್ಬಂದಿಗೆ ಒಂದು ದಿನದ ಕಾರ್ಯಾಗಾರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ವಿದ್ಯಾರ್ಥಿಗಳಿಗೆ ನೀಡುವ ಆಹಾರದಲ್ಲಿ ಪೌಷ್ಟಿಕಾಂಶ, ಸ್ವಚ್ಛತೆ ಮತ್ತು ಗುಣಮಟ್ಟಕ್ಕೆ ಹೆಚ್ಚಿನ ಆದ್ಯತೆ ನೀಡಬೇಕು. ಸರ್ಕಾರ ಜಾರಿಗೆ ತಂದಿರುವ ಪಿ.ಎಂ.ಪೋಷಣ್ ಯೋಜನೆಯ ಮುಖ್ಯ ಉದ್ದೇಶವು ಮಕ್ಕಳಲ್ಲಿ ಪೌಷ್ಟಿಕಾಂಶದ ಕೊರತೆ ನಿವಾರಿಸಿ ಆರೋಗ್ಯಕರ ಹಾಗೂ ಶಕ್ತಿಯುತ ವಿದ್ಯಾರ್ಥಿ ಸಮುದಾಯ ನಿರ್ಮಿಸುವುದಾಗಿದೆ. ಈ ಯೋಜನೆ ಯಶಸ್ವಿಯಾಗಿ ಜಾರಿಗೆ ತರಲು ಬಿಸಿಯೂಟ ತಯಾರಿಸುವ ಸಿಬ್ಬಂದಿ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ತಿಳಿಸಿದರು.

ಅಕ್ಷರ ದಾಸೋಹದ ಜಿಲ್ಲಾ ಸಹಾಯಕ ನಿರ್ದೇಶಕ ವೆಂಕಟೇಶ್ ಮಾತನಾಡಿ, ಸರ್ಕಾರದ ಪಿಎಂ ಪೋಷಣ್ ಯೋಜನೆ ಮಕ್ಕಳ ಆರೋಗ್ಯ ಮತ್ತು ಪೌಷ್ಟಿಕತೆಗೆ ನೀಡುತ್ತಿರುವ ಮಹತ್ವ ಪ್ರತಿಬಿಂಬಿಸುತ್ತದೆ. ಶಾಲೆಗಳಲ್ಲಿ ಆಹಾರ ತಯಾರಿಸುವ ಸಿಬ್ಬಂದಿ ಸರ್ಕಾರದ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ,ಆಹಾರದ ಸ್ವಚ್ಛತೆ, ಸುರಕ್ಷತೆ ಹಾಗೂ ಗುಣಮಟ್ಟ ಕಾಪಾಡಬೇಕು. ಈ ತರಬೇತಿ ಕಾರ್ಯಾಗಾರ ಸಿಬ್ಬಂದಿಗೆ ಅಗತ್ಯ ಜ್ಞಾನ ಹಾಗೂ ಕೌಶಲ್ಯ ನೀಡುವಲ್ಲಿ ಪ್ರಮುಖವಾಗಿವೆ ಎಂದು ಹೇಳಿದರು.

ಹನುಮಂತಪ್ಪ ಕುರಿ ಉಪನ್ಯಾಸ ನೀಡಿ, ವಿದ್ಯಾರ್ಥಿಗಳಿಗೆ ಸಮತೋಲನ ಪೌಷ್ಟಿಕ ಆಹಾರ ಒದಗಿಸುವ ಅಗತ್ಯತೆ,ಆಹಾರ ತಯಾರಿಕೆ ಸಂದರ್ಭದಲ್ಲಿ ಪಾಲಿಸಬೇಕಾದ ಸ್ವಚ್ಛತಾ ಕ್ರಮ, ಅಡುಗೆ ಮನೆಯ ಸ್ವಚ್ಛತೆ,ಆಹಾರ ಪದಾರ್ಥಗಳ ಸರಿಯಾದ ಸಂಗ್ರಹಣೆ ಮತ್ತು ಬಳಕೆ ಕುರಿತು ತಿಳಿಸಿದರು.


ಕಾರ್ಯಕ್ರಮದಲ್ಲಿ ಸುಭಾಸ್ ರೆಡ್ಡಿ, ಮರಳು ಸಿದ್ದಪ್ಪ ಹಾಗೂ ಮಂಜುಳಾ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದರು. ಮಲ್ಲಪ್ಪ ಗುಡದಣ್ಣವರ್ ಪ್ರಸ್ತಾವಿಕವಾಗಿ ಮಾತನಾಡಿದರು.

ಶಿಕ್ಷಕ ಬಸವರಾಜ್ ಸ್ವಾಗತಿಸಿದರು, ವೀರೇಶ್ ಬಡಿಗೇರ್ ಪ್ರಾರ್ಥಸಿದರು. ಗವಿಸಿದ್ದಪ್ಪ,ಮಹೇಶ್ ಉಪಸ್ಥಿತರಿದ್ದರು. ಅಳವಂಡಿ ವಲಯದ ವಿವಿಧ ಶಾಲೆಗಳ ಬಿಸಿಯೂಟ ತಯಾರಿಸುವ ಸಿಬ್ಬಂದಿ ಈ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಯೋಜನೆಯ ಅನುಷ್ಠಾನ ಕುರಿತು ಮಾಹಿತಿ ಪಡೆದುಕೊಂಡರು.