ರೈಲು ಹಾಗೂ ಬಸ್‌ಗಳ ಮೂಲಕ ಒಂದು ವಾರದಿಂದ ಬಾಂಗ್ಲಾದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ನುಸುಳುಕೋರರು ಹುಬ್ಬಳ್ಳಿಗೆ ಆಗಮಿಸಿ ನಗರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ನೆಲೆಯೂರುತ್ತಿದ್ದಾರೆ. ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿರುವ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ ಎಂದು ಬಿಜೆಪಿ ಕಾರ್ಯಕರ್ತರು ಆಕ್ರೋಶ ವ್ಯಕ್ತಪಡಿಸಿದರು.

ಹುಬ್ಬಳ್ಳಿ:

ಕಾರ್ಮಿಕರ ಸೋಗಿನಲ್ಲಿ ಮಹಾನಗರವನ್ನು ಪ್ರವೇಶಿಸುತ್ತಿರುವ ಬಾಂಗ್ಲಾ ನುಸುಳುಕೋರರನ್ನು ಪತ್ತೆ ಹಚ್ಚಿ ಕಠಿಣ ಶಿಕ್ಷೆ ವಿಧಿಸುವಂತೆ ಒತ್ತಾಯಿಸಿ ಬುಧವಾರ ಬಿಜೆಪಿ ಕಾರ್ಯಕರ್ತರು ಶಹರ ಠಾಣೆಯ ಎದುರು ಪ್ರತಿಭಟನೆ ನಡೆಸಿದರು.

ರೈಲು ಹಾಗೂ ಬಸ್‌ಗಳ ಮೂಲಕ ಒಂದು ವಾರದಿಂದ ಬಾಂಗ್ಲಾದೇಶದಿಂದ ಸಾವಿರಾರು ಸಂಖ್ಯೆಯಲ್ಲಿ ನುಸುಳುಕೋರರು ಹುಬ್ಬಳ್ಳಿಗೆ ಆಗಮಿಸಿ ನಗರ ಸೇರಿದಂತೆ ಅಕ್ಕಪಕ್ಕದ ಜಿಲ್ಲೆಗಳಲ್ಲಿ ನೆಲೆಯೂರುತ್ತಿದ್ದಾರೆ. ಅಕ್ರಮ ನುಸುಳುಕೋರರನ್ನು ಪತ್ತೆ ಹಚ್ಚಿ ಕ್ರಮ ಕೈಗೊಳ್ಳಬೇಕಿರುವ ಪೊಲೀಸರು ಕೈಕಟ್ಟಿ ಕುಳಿತಿದ್ದಾರೆ. ಈಚೆಗೆ ಬಿಜೆಪಿ ಕಾರ್ಯಕರ್ತರೇ ಅಕ್ರಮ ನುಸುಳುಕೋರರನ್ನು ಪತ್ತೆ ಮಾಡಿ ಪೊಲೀಸರ ವಶಕ್ಕೆ ನೀಡಿದ್ದಾರೆ. ಆದರೆ, ಪೊಲೀಸರು ಅವರನ್ನು ಸರಿಯಾಗಿ ಪರಿಶೀಲಿಸದೆ ಕಾಟಾಚಾರಕ್ಕೆ ತಪಾಸಣೆ ಮಾಡಿದ್ದಾರೆ ಎಂದು ಆರೋಪಿಸಿದರು.

ಪ್ರತಿಭಟನಾ ನಿರತರನ್ನು ಉದ್ದೇಶಿಸಿ ಮಾತನಾಡಿದ ಎಸಿಪಿ ಯು.ಬಿ. ಚಿಕ್ಕಮಠ, ನಗರಕ್ಕೆ ಅಕ್ರಮ ನುಸುಳುಕೋರರು ಬರುತ್ತಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ರೈಲು ನಿಲ್ದಾಣ ಹಾಗೂ ಬಸ್‌ ನಿಲ್ದಾಣಗಳಲ್ಲಿ ಒಂದು ವಾರದಿಂದ ಅಗತ್ಯ ಪೊಲೀಸ್‌ ಸಿಬ್ಬಂದಿ ನಿಯೋಜಿಸಿ ಎಲ್ಲ ಪ್ರಯಾಣಿಕರನ್ನು ಪರಿಶೀಲಿಸಲಾಗುತ್ತಿದೆ. ಆ ರೀತಿಯ ಯಾವುದೇ ನುಸುಳುಕೋರರು ಈ ವರೆಗೆ ಕಂಡು ಬಂದಿಲ್ಲ. ಪ್ರತಿಭಟನಾಕಾರರ ಮನವಿ ಮೇರೆಗೆ ಇನ್ನೂ ಹೆಚ್ಚಿನ ಸಿಬ್ಬಂದಿ ನಿಯೋಜಿಸಿ ಪ್ರಯಾಣಿಕರ ಪರಿಶೀಲನೆಗೆ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.

ಕಳೆದೊಂದು ವಾರದಿಂದ ಹುಬ್ಬಳ್ಳಿಗೆ 2500ಕ್ಕೂ ಅಧಿಕ ಅಕ್ರಮ ನುಸುಳುಕೋರರು ಬಂದಿರುವ ಮಾಹಿತಿಯಿದೆ. ಈ ಕುರಿತು ಪರಿಶೀಲಿಸುವಂತೆ ಮನವಿ ಮಾಡಿದರೂ ಕಿವಿಗೊಡುತ್ತಿಲ್ಲ. ಇದೇ ರೀತಿ ನಿರ್ಲಕ್ಷ್ಯ ಧೋರಣೆ ಕಂಡುಬಂದಲ್ಲಿ ಮುಂದಿನ ದಿನಗಳಲ್ಲಿ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಚ್ಚರಿಕೆ ನೀಡಿದರು.ಈ ವೇಳೆ ಯುವ ಮೋರ್ಚಾ ಅಧ್ಯಕ್ಷ ಪ್ರವೀಣ ಕುಬುಸದ, ವಿಭಾಗದ ಪ್ರಭಾರಿ ಜಯತೀರ್ಥ ಕಟ್ಟಿ, ನಾರಾಯಣ ಜರತಾರಘರ, ಶಿವು ಮೆಣಸಿನಕಾಯಿ, ಪ್ರಿತಮ್ ಅರಕೇರಿ, ವೆಂಕಟೇಶ ಕಾಟವೆ, ಜಗದೀಶ ಬುಳ್ಳಣ್ಣವರ, ಹರೀಶ ಹಳ್ಳಿಕೇರಿ, ಹರೀಶ ಸರ್ವಳೆ, ನಾಗರತ್ನಾ ಬಳ್ಳಾರಿ, ಅಣ್ಣಪ್ಪ ಗೋಕಾಕ, ಮಾರುತಿ ಚಾಕಲಬ್ಬಿ, ರಾಜು ಕೋರ್ಯಾಣಮಠ ಸೇರಿದಂತೆ ಹಲವರಿದ್ದರು.