ಮೊಬೈಲ್ ಬಿಡಿ,ಪುಸ್ತಕ ಹಿಡಿ ಎಂಬ ಸಂದೇಶ ಅಳವಡಿಸಿಕೊಳ್ಳಿ, ಓದಿದಷ್ಟು ಅನುಭವ ಸಿದ್ದಿಯಾಗುತ್ತದೆ.ಆಗ ನಿಮ್ಮಲ್ಲಿರುವ ಭಾವನೆ ಸಾಹಿತ್ಯ ರೂಪವಾಗಿ ಉತ್ತಮ ಪದಲಾಲಿತ್ಯದಿಂದ ಅವಿರ್ಭಾವವಾಗಿ ಹೊರಹೊಮ್ಮುತ್ತದೆ.
ಸಿರುಗುಪ್ಪ: ಕನ್ನಡದ ಅಭಿವೃದ್ಧಿ ಕೇವಲ ಭಾಷೆಗೆ ಸೀಮಿತವಾಗಿಲ್ಲ,ಅದು ಭೂಮಿ ಮತ್ತು ಜನರ ಸಬಲೀಕರಣ ಒಳಗೊಂಡಿದೆ. ಸರ್ಕಾರವು ಗಡಿನಾಡು ಶಾಲೆಗಳನ್ನು ಉತ್ತೇಜಿಸುವ ಮೂಲಕ ಕನ್ನಡ ಬಲಪಡಿಸಬೇಕೆಂದು 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳನ ಅಧ್ಯಕ್ಷ ನರಸಿಂಹಮೂರ್ತಿ.ಜೆ ಹೇಳಿದರು.
ತಾಲೂಕಿನ ರಾವಿಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಸಾಪ ಘಟಕದಿಂದ ಬುಧವಾರ ನಡೆದ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದಲ್ಲಿ ಮಾತನಾಡಿದರು.ಮೊಬೈಲ್ ಬಿಡಿ,ಪುಸ್ತಕ ಹಿಡಿ ಎಂಬ ಸಂದೇಶ ಅಳವಡಿಸಿಕೊಳ್ಳಿ, ಓದಿದಷ್ಟು ಅನುಭವ ಸಿದ್ದಿಯಾಗುತ್ತದೆ.ಆಗ ನಿಮ್ಮಲ್ಲಿರುವ ಭಾವನೆ ಸಾಹಿತ್ಯ ರೂಪವಾಗಿ ಉತ್ತಮ ಪದಲಾಲಿತ್ಯದಿಂದ ಅವಿರ್ಭಾವವಾಗಿ ಹೊರಹೊಮ್ಮುತ್ತದೆ. ಗಡಿಭಾಗದ ಕನ್ನಡಿಗರ ಸಮಸ್ಯೆ ಹೆಚ್ಚಾಗಿದ್ದು, ಆ ಭಾಗದ ಶಾಲೆಗಳಿಗೆ ಜೂನ್ ತಿಂಗಳಲ್ಲೇ ಪಠ್ಯ ಪುಸ್ತಕಗಳು ದೊರೆಯುವಂತಾಗಿ, ಶಾಲೆಗಳಲ್ಲಿ ಉತ್ತಮ ಗ್ರಂಥಾಲಯ ಸೌಲಭ್ಯ ಒದಗಿಸಬೇಕೆಂದು ತಿಳಿಸಿದರು.
ತಾಲೂಕಿನ ರಾವಿಹಾಳ್ ಗ್ರಾಮದ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ತಾಲೂಕು ಕಸಾಪ ತಾಲೂಕು ಘಟಕದಿಂದ ಬುಧವಾರ ನಡೆದ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ರಾಷ್ಟ್ರಧ್ವಜವನ್ನು ತಹಸೀಲ್ದಾರ್ ಗೌಸಿಯಾ ಬೇಗಂ, ನಾಡಧ್ವಜವನ್ನು ಕಸಾಪ ತಾಲೂಕಾಧ್ಯಕ್ಷ ಡಾ. ಮಧುಸೂದರ್, ಪರಿಷತ್ತಿನ ಧ್ವಜವನ್ನು ಪ್ರಾಂಶುಪಾಲ ಮಂಜುನಾಥ ನೆರವೇರಿಸಿದರು.ತಾಲೂಕಿನ ರಾವಿಹಾಳ್ ಗ್ರಾಮದಲ್ಲಿ ಬುಧವಾರ ನಡೆದ 8ನೇ ತಾಲೂಕು ಕನ್ನಡ ಸಾಹಿತ್ಯ ಸಮ್ಮೇಳದ ಅಂಗವಾಗಿ ಸಮ್ಮೇಳನಾಧ್ಯಕ್ಷ ಜೆ. ನರಸಿಂಹ ಮೂರ್ತಿ ಮೆರವಣಿಗೆ ಗ್ರಾಮದ ಈಶ್ವರ ದೇವಸ್ಥಾನದಿಂದ ಆರಂಭವಾಗಿ ಗ್ರಾಮದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಸಮ್ಮೇಳನ ಸ್ಥಳಕ್ಕೆ ಆಗಮಿಸಿತು. ಮೆರವಣಿಗೆಯಲ್ಲಿ ಮಹಿಳೆಯರು ಕಳಸ ಕುಂಭ, ಡೊಳ್ಳುಕುಣಿತ, ತಮಟೆ ಹಾಗೂ ಕಹಳೆಯೊಂದಿಗೆ ಅದ್ಧೂರಿಯಾಗಿ ನಡೆಯಿತು.
ಸಮ್ಮೇಳನಾಧ್ಯಕ್ಷರು ಸರ್ಕಾರಕ್ಕೆ ಎಂಟು ಬೇಡಿಕೆ ಈಡೇರಿಸಲು ಹಕ್ಕೋತ್ತಾಯ ಮಾಡಿದರು. ಕನ್ನಡ ಮಾಧ್ಯಮದಲ್ಲಿ ಪ್ರಾಥಮಿಕ ಶಿಕ್ಷಣ ಕಡ್ಡಾಯಗೊಳಿಸುವುದರ ಜತೆಗೆ ಕನ್ನಡ ಶಾಲೆಗಳಿಗೆ ಪೂರ್ಣ ಶಿಕ್ಷಕರ ನೇಮಕಾತಿ ಮಾಡಿ ಗುಣಮಟ್ಟದ ಶಿಕ್ಷಣ ನೀಡುವುದು. ಖಾಸಗಿ ಕನ್ನಡ ಶಾಲೆಗಳಿಗೆ ಅನುದಾನ ನೀಡಿ ಶಿಕ್ಷಣ ಪ್ರೋತ್ಸಾಹಿಸಬೇಕು. ನೆಲದ ಸಮಸ್ಯೆ ಬಂದಾಗ ಸರ್ಕಾರವು ರಾಜೀಯಾಗಬಾರದು. ನಮ್ಮ ನೀರು ನಮ್ಮ ಹಕ್ಕು. ಕನ್ನಡ ದೇವಸ್ಥಾನ, ಸ್ಮಾರಕ, ಶಾಸನಗಳ ರಕ್ಷಣೆ, ಅಳಿಸಿ ಹೋಗುತ್ತಿರುವ ಪ್ರಾಚೀನ ಕನ್ನಡ ಕಲೆಗಳ ಪ್ರೋತ್ಸಾಹ ಮಾಡಬೇಕು. ಸಿರಗುಪ್ಪದಲ್ಲಿ ಸಾಹಿತ್ಯ ಭವನ ನಿರ್ಮಾಣ, ಪುಸ್ತಕ ಬಿಡುಗಡೆ ಮಾನದಂಡ ತೆಗೆದು ಕಲಾವಿದರಿಗೆ ಮಾಸಾಶನ ನೀಡಬೇಕು. ಪುಸ್ತಕ ಮುದ್ರಣಕ್ಕೆ ಆರ್ಥಿಕ ಸಹಾಯ ನೀಡಬೇಕು. ಕರ್ನಾಟಕದ ಏಕೀಕರಣಕ್ಕಾಗಿ ನೂರಾರು ಕನ್ನಡಿಗರು ಹೋರಾಟ ಮಾಡಿ ಅಖಂಡ ಕನ್ನಡನಾಡನ್ನು ಉಳಿಸಿದರು ನಮ್ಮನೆಲಕ್ಕೆ ಸೇರಬೇಕಾದ ಹಲವು ಊರುಗಳು, ಬೇರೆಯಾದರೂ ಕನ್ನಡನಾಡು, ಏಕೀಕರಣವಾಯಿತು. ಬೆಳಗಾವಿಯಿಂದ ಚಾಮರಾಜನಗರದವರೆಗೆ ಅಖಂಡ ಕರ್ನಾಟಕ ನನ್ನದಾಯಿತು. ಆದರೂ ಇಂದಿಗೂ ಬೆಳಗಾವಿ ಮತ್ತಿತರ ಕಡೆ ಕನ್ನಡಿಗರನ್ನ ಕೆಣಕುವ ಕೆಲಸವಾಗುತ್ತಿದ್ದರೂ ಕನ್ನಡಿಗರ ಏಕತೆ ಅದಕ್ಕೆ ಅವಕಾಶ ಕೊಟ್ಟಿಲ್ಲ ಎಂದು ಹೇಳಿದರು.ಪ್ರಗತಿ ಪರ ಕೃಷಿ ಮಹಿಳೆ ಡಾ. ಕವಿತಾ ಮಿಶ್ರಾ ಮಾತನಾಡಿ, ಮಣ್ಣು ನಂಬಿ ಕೆಟ್ಟವರಿಲ್ಲ ಮಣ್ಣನ್ನು ನಂಬಿದರೆ ಮಾತ್ರ ಬದುಕು ಉಳಿಯುತ್ತದೆ. ಮಣ್ಣಿನಲ್ಲಿ ದುಡಿಯುವುದು ನಮ್ಮ ಕೆಲಸವಾಗಬೇಕು. ಈ ಮನುಜ ಜನ್ಮ ಭಾರತದಲ್ಲಿ ಹುಟ್ಟಲು ಪುಣ್ಯಮಾಡಿರಬೇಕು ಅಲ್ಲದೆ ಕರ್ನಾಟಕದಲ್ಲಿ ಹುಟ್ಟಲು ತಪಸ್ಸು ಮಾಡಿರಬೇಕು ಎಂದರು.
ಕಸಾಪ ಜಿಲ್ಲಾಧ್ಯಕ್ಷ ನಿಷ್ಠಿರುದ್ರಪ್ಪ ಮಾತನಾಡಿ, ಅನೇಕ ಅಡೆತಡೆಗಳಿದ್ದರೂ ಮುಂದಿನ ದಿನಗಳಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಬಳ್ಳಾರಿಯಲ್ಲಿಯೇ ನಡೆಯಲಿದೆ ಎಂದು ಹೇಳಿದರು.ನಿಕಟ ಪೂರ್ವ ಸಮ್ಮೇಳನ ಅಧ್ಯಕ್ಷ ಡಾ. ಶಿವಕುಮಾರ್ ಬಳಿಗಾರ್ ಮಾತನಾಡಿ, ಗಡಿಭಾಗದ ಜೀವನಕ್ಕೆ ತನ್ನದೇ ಆದ ಸವಾಲುಗಳಿವೆ. ಪರಭಾಷೆಗಳ ಪ್ರಭಾವ ಕನ್ನಡ ಮಾಧ್ಯಮ ಶಿಕ್ಷಣದ ಕೊರತೆ ಉದ್ಯೋಗ, ವ್ಯಾಪಾರಕ್ಕಾಗಿ ಇತರೆ ಭಾಷೆಗಳ ಮೇಲಿನ ಅವಲಂಬನೆ ಹಾಗೂ ಆಡಳಿತಾತ್ಮಕ ಸೌಲಭ್ಯಗಳ ಸೀಮಿತತೆ ಇಲ್ಲಿನ ಕನ್ನಡಿಗರನ್ನು ಕಾಡುತ್ತಿದೆ ಎಂದು ಹೇಳಿದರು.
ಅಗಸನೂರಿನ ಶರಬಣ್ಣತಾತ, ನಾ.ಮಾ.ಬಸವರಾಜಯ್ಯಸ್ವಾಮಿ, ಪ್ರಾಂಶುಪಾಲ ಮಂಜುನಾಥ, ಆರ್ಯವೈಶ್ಯ ಮಹಾಸಭಾ ರಾಜ್ಯ ಕಾರ್ಯದರ್ಶಿ ಎಚ್.ಜೆ. ಹನುಮಂತಯ್ಯಶೆಟ್ಟಿ, ಹನುಮಂತರೆಡ್ಡಿ, ಬೀರಳ್ಳಿ ರಾಮರೆಡ್ಡಿ, ವೆಂಕಟರೆಡ್ಡಿ, ಪಂಪಾರೆಡ್ಡಿ, ಡಾ.ಅಚ್ಚುತ್ಕುಮಾರ್, ಎಚ್.ಬಿ. ಗಂಗಪ್ಪ, ಪಿಡಿಒ ಶಾಕೀರ್, ಕಸಾಪ.ಪದಾಧಿಕಾರಿ ಕೆ.ಎಂ. ಚಂದ್ರಕಾಂತ, ಕೆ.ವೆಂಕಟೇಶ, ನವೀನ ರೆಡ್ಡಿ, ಗಜೇಂದ್ರ ದೈಹಿಕ ಶಿಕ್ಷಕ ಉಪೇಂದ್ರ, ಬಿ ಈರಣ್ಣ ಹಾಗೂ ಗ್ರಾಮಸ್ಥರು ಇದ್ದರು.