ಸಾರಾಂಶ
ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಗೃಹ ಸಚಿವ ಡಾ. ಜಿ ಪರಮೇಶ್ವರ್ ಗೋ ಹತ್ಯೆ ಪ್ರಕಾರಣಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದರು.
ಕನ್ನಡಪ್ರಭ ವಾರ್ತೆ ಬೈಂದೂರು
ರಾಜ್ಯದಲ್ಲಿ ಗೋವು ಕಳ್ಳತನ, ಅಕ್ರಮ ಗೋವು ಸಾಗಾಟ ಮತ್ತು ಗೋ ಹತ್ಯೆ ಪ್ರಕಾರಣಗಳಲ್ಲಿ ಭಾಗಿಯಾದವರ ವಿರುದ್ಧ ಸೂಕ್ತ ಕಾನೂನು ಕ್ರಮ ಜರುಗಿಸಲಾಗುತ್ತಿದೆ ಎಂದು ಗೃಹ ಸಚಿವ ಡಾ. ಜಿ ಪರಮೇಶ್ವರ್ ವಿಧಾನಸಭೆಯಲ್ಲಿ ತಿಳಿಸಿದ್ದಾರೆ.ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಅವರ ಚುಕ್ಕೆ ಗುರುತಿಲ್ಲದ ಪ್ರಶ್ನೆಗೆ ಉತ್ತರಿಸಿದ ಸಚಿವರು, ರಾಜ್ಯದಲ್ಲಿ 2023-24ನೇ ಸಾಲಿನಲ್ಲಿ 447 ಗೋವು ಕಳ್ಳತನ ಪ್ರಕರಣಗಳು ಹಾಗೂ 657 ಅಕ್ರಮ ಗೋವು ಸಾಗಾಟ ಪ್ರಕರಣಗಳು ದಾಖಲಾಗಿವೆ. ಉಡುಪಿ ಜಿಲ್ಲೆಯಲ್ಲಿ 2023-24ರಲ್ಲಿ 8 ಗೋವು ಕಳ್ಳತನ ಹಾಗೂ 12 ಅಕ್ರಮ ಸಾಗಾಟ ಪ್ರಕರಣ ದಾಖಲಾಗಿವೆ ಎಂದರು.
ಗೋವು ಕಳ್ಳತನ, ಅಕ್ರಮ ಗೋವು ಸಾಗಾಟ ಮತ್ತು ಗೋ ಹತ್ಯೆ ಪ್ರಕಾರಣಗಳಲ್ಲಿ ಭಾಗಿಯಾದವರ ವಿರುದ್ಧ ಈ ಕೆಳಗಿನಂತೆ ಕ್ರಮ ಜಾರಿಗೊಳಿಸಲಾಗಿದೆ.ಗಡಿ ಭಾಗಗಳಲ್ಲಿ ಚೆಕ್ ಪೋಸ್ಟ್ಗಳನ್ನು ತೆರೆಯಲಾಗಿದ್ದು. ಅನುಮಾನಾಸ್ಪದ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ದನ ಕಳವು / ಸಾಗಾಟ ಪ್ರಕರಣಗಳಲ್ಲಿ ಭಾಗಿಯಾದ ಆರೋಪಿತರ ಪರೇಡನ್ನು ನಡೆಸಿದ್ದು ಅವರು ಮುಂದೆ ಇಂತಹ ಕೃತ್ಯಗಳಲ್ಲಿ ಭಾಗಿಯಾಗದಂತೆ ಕಟ್ಟುನಿಟ್ಟಿನ ಸೂಚನೆ ನೀಡಲಾಗುತ್ತದೆ. ಈ ಹಿಂದೆ ವರದಿಯಾದ ಪ್ರಕರಣಗಳಲ್ಲಿ ಆರೋಪಿತರಿಗೆ ಭದ್ರತಾ ಕಾಯ್ದೆಯಡಿ ಪ್ರಕರಣ ದಾಖಲಿಸಿ ಸೂಕ್ತ ಸಮಯದವರೆಗೆ ಬಾಂಡ್ ಪಡೆದುಕೊಳ್ಳಲಾಗುತ್ತಿದೆ.ಬೀಟ್ ಸಿಬ್ಬಂದಿಗೆ ಈ ಬಗ್ಗೆ ಸೂಕ್ತ ಸೂಚನೆಗಳನ್ನು ನೀಡಿದ್ದು, ಅವರ ಬೀಟ್ ವ್ಯಾಪ್ತಿಯಲ್ಲಿ ನಿಗಾ ಇಡಲು ಸೂಚಿಸಲಾಗಿದೆ. ರಾತ್ರಿ ಗಸ್ತು, ರಾತ್ರಿ ಬೀಟ್ ಕಡ್ಡಾಯವಾಗಿ ನಡೆಸಲಾಗುತ್ತಿದೆ ಎಂದು ಸಚಿವರು ಬೈಂದೂರು ಶಾಸಕರ ಪ್ರಶ್ನೆಗೆ ಉತ್ತರಿಸಿದ್ದಾರೆ.