ಶಾಂತಿಯುತ ಚುನಾವಣೆಗಾಗಿ ಕಟ್ಟುನಿಟ್ಟಿನ ಕ್ರಮ: ಬಿ.ಕೆ. ಸಪ್ತಶ್ರೀ

| Published : Mar 18 2024, 01:49 AM IST

ಸಾರಾಂಶ

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಭದ್ರತಾ ಕೊಠಡಿಯನ್ನಾಗಿ ಬಳಸಿಕೊಳ್ಳಲಾಗುವುದು. ೮೯೬ ಅಧಿಕಾರಿಗಳು ಚುನಾವಣಾ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ.

ಕನ್ನಡಪ್ರಭ ವಾರ್ತೆ ತಿಪಟೂರು

ತುಮಕೂರು ಜಿಲ್ಲಾ ತಿಪಟೂರು ವ್ಯಾಪ್ತಿಯ ಲೋಕಸಭಾ ಚುನಾವಣೆಯನ್ನು ಶಾಂತಿಯುತವಾಗಿ ನಡೆಸಲು ಕಟ್ಟುನಿಟ್ಟಿನ ಕ್ರಮಕೈಗೊಳ್ಳಲಾಗಿದ್ದು, ಪ್ರತಿಯೊಬ್ಬರೂ ಸಹಕರಿಸುವ ಮೂಲಕ ಯಶಸ್ವಿಗೊಳಿಸಬೇಕೆಂದು ಉಪವಿಭಾಗಾಧಿಕಾರಿ ಹಾಗೂ ಸಹಾಯಕ ಚುನಾವಣಾಧಿಕಾರಿಗಳಾದ ಬಿ.ಕೆ. ಸಪ್ತಶ್ರೀ ತಿಳಿಸಿದರು.

ನಗರದ ತಾಲೂಕು ಆಡಳಿತ ಸೌಧ ಆಡಳಿತ ಕಚೇರಿಯ ಸಭಾಂಗಣದಲ್ಲಿ ಲೋಕಸಬಾ ಕ್ಷೇತ್ರದ ಚುನಾವಣಾ ತಯಾರಿ ಬಗ್ಗೆ ಹಮ್ಮಿಕೊಂಡಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ತಾಲೂಕಿನಲ್ಲಿ ಒಟ್ಟು ೨೩೪ ಮತಗಟ್ಟೆಗಳಿದ್ದು, ೧೮ ಸೂಕ್ಷ್ಮ, ೫ ಮಹಿಳಾ ಮತಗಟ್ಟೆಗಳು, ೧ ವಿಕಲಚೇತನ ಮತಗಟ್ಟೆ, ೨ಯುವ ಅಧಿಕಾರಿಗಳ ಮತಗಟ್ಟೆಗಳನ್ನು ಗುರುತಿಸಲಾಗಿದೆ. ತಾಲೂಕಿನಲ್ಲಿ ಒಟ್ಟು ೧,೮೫,೬೨೭ ಮತದಾರರಿದ್ದು, ೮೯೮೫೭ ಪುರುಷರು, ೯೫೭೬೮ ಮಹಿಳೆಯರು, ೨ ಇತರೆ ಮತದಾರರಿದ್ದಾರೆ. ಇದರಲ್ಲಿ ೪೨೧೩ ಯುವ ಮತದಾರರಿದ್ದಾರೆ. ಅಂಗವಿಕಲರಿಗೆ ಮತ್ತು ೮೫ ವರ್ಷ ಮೇಲ್ಪಟ್ಟ ಮತದಾರರಿಗೆ ಅಂಚೆ ಮತಪತ್ರಗಳ ಮೂಲಕ ಮತದಾನ ಮಾಡಲು ಅವಕಾಶ ಕಲ್ಪಿಸಲಾಗುತ್ತಿದ್ದು, ವಿಕಲಚೇತನ ಮತದಾರರು ೨೩೩೯, ೮೫ ವರ್ಷದ ಮೇಲ್ಪಟ್ಟವರು ೨೩೫೬ ಮತದಾರರಿದ್ದು, ಇವರಿಗೆ ಮತಹಾಕಲು ಅನುಕೂಲವಾಗುವಂತೆ ನಮೂನೆ ೧೨ಡಿ ಮೂಲಕ ಅರ್ಜಿ ಸಲ್ಲಿಸಿ ಅಂಚೆ ಮತಪತ್ರಗಳನ್ನು ಪಡೆದು ಮತದಾನ ಮಾಡಲು ಅವಕಾಶ ಕಲ್ಪಿಸಲಾಗಿದೆ. ಬಿಎಲ್‌ಒಗಳು ಪಿಡಬ್ಲ್ಯೂಡಿ ಮತ್ತು ೮೫ವರ್ಷದ ಮೇಲ್ಪಟ್ಟ ಮತದಾರರಿಗೆ ಅವರ ಮನೆಗಳಿಗೆ ತರಳಿ ನಮೂನೆ ೧೨ಡಿಗಳನ್ನು ಹಂಚಿಕೆ ಮಾಡಲಿದ್ದಾರೆ.

ಬಾಲಕರ ಸರ್ಕಾರಿ ಪದವಿ ಪೂರ್ವ ಕಾಲೇಜನ್ನು ಮಸ್ಟರಿಂಗ್, ಡಿ ಮಸ್ಟರಿಂಗ್ ಹಾಗೂ ಭದ್ರತಾ ಕೊಠಡಿಯನ್ನಾಗಿ ಬಳಸಿಕೊಳ್ಳಲಾಗುವುದು. ೮೯೬ ಅಧಿಕಾರಿಗಳು ಚುನಾವಣಾ ಮತಗಟ್ಟೆ ಅಧಿಕಾರಿ ಹಾಗೂ ಸಿಬ್ಬಂದಿಯಾಗಿ ಕರ್ತವ್ಯ ನಿರ್ವಹಿಸಲಿದ್ದಾರೆ. ಚುನಾವಣಾ ವೆಚ್ಚಗಳ ದೂರುಗಳಿಗೆ ಸಂಬಂಧಿಸಿದಂತೆ ಎಲೆಕ್ಷನ್ ಎಕ್ಸ್‌ಪೆಂಡಿಚರ್ ಮಾನಿಟರಿಂಗ್ ಆ್ಯಪ್ ಬಳಸಲಾಗುತ್ತಿದ್ದು, ಕಾರ್ಯಕ್ರಮಗಳು, ರ‍್ಯಾಲಿ, ವಾಹನ, ಜಾತ್ರೆ ಇತ್ಯಾದಿಗಳ ಅನುಮತಿಗಾಗಿ ಸುವಿಧಾ ವೆಬ್ ಪೊರ್ಟಲ್ ಬಳಸಲಾಗುತ್ತದೆ. ಅಲ್ಲದೆ ಅನುಮತಿಗಳನ್ನು ತುರ್ತಾಗಿ ನೀಡುವ ಸಲುವಾಗಿ ಏಕ ಗವಾಕ್ಷಿ ಕೇಂದ್ರವನ್ನು ತಾಲೂಕು ಕಚೇರಿಯಲ್ಲಿ ತೆರೆಯಲಾಗಿದೆ. ಚುನಾವಣಾ ದೂರುಗಳಿಗೆ ಸಂಬಂಧಿಸಿದಂತೆ ಕಂಟ್ರೋಲ್ ರೂಂ ತೆರೆಯಲಾಗಿದ್ದು ೦೮೧೩೪-೨೫೧೦೩೯ಗೆ ಕರೆ ಮಾಡಬಹುದು.

ಮೂರು ಕಡೆ ಚೆಕ್‌ಪೋಸ್ಟ್ :

ತಾಲೂಕಿನ ಮೂರು ಕಡೆಗಳಲ್ಲಿ ಚೆಕ್‌ಪೋಸ್ಟ್‌ಗಳನ್ನು ತೆರೆಯಲಾಗಿದ್ದು, ಬನ್ನೀಹಳ್ಳಿಗೇಟ್, ಬಿದರೆಗುಡಿ ಹಾಗೂ ಗುಂಗುರಮಳೆ ಗೇಟ್‌ಗಳಲ್ಲಿ ಚೆಕ್ ಪೋಸ್ಟ್‌ಗಳನ್ನು ತೆರೆಯಲಾಗಿದೆ. ಪೂರ್ವಾನುಮತಿ ಪಡೆಯದೆ ಚುನಾವಣಾ ಸಂಬಂಧಿತ ಸಭೆ, ಸಮಾರಂಭಗಳನ್ನು ಆಯೋಜಿಸಲು ಹಾಗೂ ಚುನಾವಣಾ ಪ್ರಚಾರ ಸಾಮಗ್ರಿಗಳಾದ ಕರಪತ್ರ, ಬ್ಯಾನರ್ ಇತ್ಯಾದಿಗಳನ್ನು ಮುದ್ರಿಸಿ ಹಂಚಲು, ಜಾಹೀರಾತುಗಳನ್ನು ಪ್ರಸಾರ ಮಾಡಲು ಅವಕಾಶವಿರುವುದಿಲ್ಲ. ಯಾವುದೇ ಸಭೆ, ಸಮಾರಂಭಗಳಿಗೆ ಹಾಗೂ ಇತರೆ ರಾಜಕೀಯ ಕಾರ್ಯಕ್ರಮಗಳಿಗೆ ಕಡ್ಡಾಯವಾಗಿ ಚುನಾವಣಾಧಿಕಾರಿಗಳ ಅನುಮತಿ ಪಡೆಯಬೇಕು.

ಮಾರ್ಚ್ ೨೮ರಂದು ಚುನಾವಣಾ ಗೆಜೆಟ್ ಅಧಿಸೂಚನೆ ಹೊರಡಲಿದ್ದು, ಏಪ್ರಿಲ್ ೪ಕ್ಕೆ ನಾಮಪತ್ರ ಸಲ್ಲಿಕೆ ಕೊನೆದಿನ, ೫ಕ್ಕೆ ಪರಿಶೀಲನೆ, ೮ಕ್ಕೆ ನಾಮಪತ್ರ ಹಿಂಪಡೆಯುವಿಕೆ, ಮತದಾನ ಏಪ್ರಿಲ್ ೨೬ರಂದು ಮತ್ತು ಎಣಿಕೆ ಜೂನ್ ೪ರಂದು ನಡೆಯಲಿದ್ದು, ಈಗಾಗಲೆ ಚುನಾವಣಾ ನೀತಿ ಸಂಹಿತೆ ಜಾರಿಯಲ್ಲಿದೆ. ಜೂನ್ ೬ಕ್ಕೆ ಚುನಾವಣೆ ಪೂರ್ಣಗೊಳ್ಳಲಿದೆ. ಗೊಂದಲ, ಘರ್ಷಣೆಯಿಲ್ಲದಂತೆ ಯಶಸ್ವಿಯಾಗಿ ಚುನಾವಣೆ ನಡೆಯುವಂತೆ ಸಾರ್ವಜನಿಕರು ಸಹಕರಿಸಬೇಕೆಂದು ತಿಳಿಸಿದರು.

ಸುದ್ದಿಗೋಷ್ಠಿಯಲ್ಲಿ ತಹಸೀಲ್ದಾರ್ ಪವನ್‌ಕುಮಾರ್, ನಗರಸಭೆ ಪೌರಾಯುಕ್ತ ವಿಶ್ವೇಶ್ವರ ಬದರಗಡೆ ಸೇರಿ ಚುನಾವಣಾಧಿಕಾರಿಗಳು, ಸಿಬ್ಬಂದಿ ಭಾಗವಹಿಸಿದ್ದರು.