ಕನ್ನಡಪ್ರಭ ವಾರ್ತೆ ದಾವಣಗೆರೆ

ಕ್ಷೇತ್ರದ ವ್ಯಾಪ್ತಿಯ ಗ್ರಾಮೀಣ ಪ್ರದೇಶದ ರಸ್ತೆಗಳ ನಿರ್ಮಾಣಕ್ಕೆ ಆದ್ಯತೆ ನೀಡಲಾಗುತ್ತಿದೆ. ಸರ್ಕಾರದಿಂದ 5 ಕೋಟಿ ರು. ಅನುದಾನ ಬಿಡುಗಡೆಯಾಗಿದ್ದು, ಗುತ್ತಿಗೆದಾರರು, ಎಂಜಿನಿಯರ್ ಗುಣಮಟ್ಟದ ರಸ್ತೆಗಳನ್ನು ನಿರ್ಮಿಸಬೇಕು ಎಂದು ಶಾಸಕ ಕೆ.ಎಸ್.ಬಸವಂತಪ್ಪ ಸೂಚನೆ ನೀಡಿದರು.

ಮಾಯಕೊಂಡ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಗೋಪನಾಳು ಗ್ರಾಮದಲ್ಲಿ ಶನಿವಾರ ಲೋಕೋಪಯೋಗಿ ಇಲಾಖೆಯಿಂದ 2025-26ನೇ ಸಾಲಿನ 5054-04-337-0-01-154 ಯೋಜನೆ ಅಡಿಯಲ್ಲಿ ಸುಮಾರು 5 ಕೋಟಿ ರು. ವೆಚ್ಚದಲ್ಲಿ ಗೋಪನಾಳು ಗ್ರಾಮದಿಂದ ಲೋಕಿಕೆರೆ ಗ್ರಾಮ ಸಂಪರ್ಕಿಸುವ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಶನಿವಾರ ಭೂಮಿಪೂಜೆ ನೆರವೇರಿಸಿ ಅವರು ಮಾತನಾಡಿದ ಅವರು, ಗುತ್ತಿಗೆದಾರರು ಗುಣಮಟ್ಟದ ಕಾಮಗಾರಿಗೆ ಒತ್ತು ನೀಡಿದಾಗ ರಸ್ತೆಗಳು ಶಾಶ್ವತವಾಗಿ ಉಳಿಯಲು ಸಾಧ್ಯ. ಈ ನಿಟ್ಟಿನಲ್ಲಿ ಹೆಚ್ಚು ನೀಡಬೇಕೆಂದು ತಾಕೀತು ಮಾಡಿದರು.

ಸಾರ್ವಜನಿಕರು, ಗ್ರಾಮಸ್ಥರು, ರಸ್ತೆಗಳು ಸರಿ ಇಲ್ಲ ಎಂದು ದೂರುವುದು ಅಷ್ಟೇ ಕೆಲಸವಲ್ಲ, ರಸ್ತೆ ಕಾಮಗಾರಿಗಳು ನಡೆಯುವ ಸಂದರ್ಭದಲ್ಲಿ ನೀವು ನಿಗಾ ವಹಿಸಬೇಕು. ಒಂದು ವೇಳೆ ಗುತ್ತಿಗೆದಾರರು ಮತ್ತು ಇಂಜಿನಿಯರ್ ಗಳು ಗುಣಮಟ್ಟ ಕಾಮಗಾರಿ ಮಾಡದಿದ್ದರೆ ಕೂಡಲೇ ನಮ್ಮ ಗಮನಕ್ಕೆ ತರಬೇಕು. ಆಗ ನಾವು ಸಂಬಂಧಪಟ್ಟ ಗುತ್ತಿಗೆದಾರ ಮತ್ತು ಇಂಜಿನಿಯರ್ ವಿರುದ್ಧ ಕ್ರಮ ತೆಗೆದುಕೊಳ್ಳಲು ಸಾಧ್ಯ. ಹೀಗಾಗಿ ಅಧಿಕಾರಿಗಳು ಯಾವುದೇ ಕಳಪೆ ಕಾಮಗಾರಿಗೆ ಆಸ್ಪದ ಕೊಡದೇ ಗುಣಮಟ್ಟದ ಕಾಮಗಾರಿ ನಡೆಸಬೇಕೆಂದು ಸೂಚನೆ ನೀಡಿದರು.

ರೈತರು ಕೂಡ ರಸ್ತೆ ಕಾಮಗಾರಿ ನಡೆದ ಮೇಲೆ ರಸ್ತೆಯನ್ನು ಕಾಪಾಡಿಕೊಳ್ಳುವುದು ನಿಮ್ಮ ಜವಾಬ್ದಾರಿ. ಹೊಲ-ಗದ್ದೆಗಳಿಗೆ ಹೋಗುವ ಸಂದರ್ಭದಲ್ಲಿ ರೈತರು ಟ್ರಾಕ್ಟರ್ ನಲ್ಲಿ ರಂಟೆಯನ್ನು ತಾಗಿಸಿಕೊಂಡು ಹೋಗುತ್ತಾರೆ. ರಸ್ತೆ ಕಾಮಗಾರಿ ಮಾಡಿ ಮೂರ್ನಾಲ್ಕು ದಿನಗಳು ಕಳೆದಿರುವುದಿಲ್ಲ ಆಗಲೇ ರಸ್ತೆ ಹಾಳಾಗುತ್ತದೆ. ಯಾರೂ ಕೂಡ ಸರ್ಕಾರದ ಹಣ ಪೋಲು ಮಾಡಬಾರದು. ಗುಣಮಟ್ಟದ ರಸ್ತೆಗಳನ್ನು ಕಾಪಾಡಿಕೊಳ್ಳುವುದು ನಮ್ಮ ಜವಾಬ್ದಾರಿ ಎಂದು ರೈತರಿಗೆ ಕಿವಿಮಾತು ಹೇಳಿದರು.


ಈ ಸಂದರ್ಭದಲ್ಲಿ ಲೋಕೋಪಯೋಗಿ ಇಲಾಖೆ ಸಹಾಯಕ ಕಾರ್ಯಪಾಲಕ ಎಂಜಿನಿಯರ್ ಕುಮಾರ್ ನಾಯ್ಕ್, ಎಂಜಿನಿಯರ್ ಪರಮೇಶ್ವರಪ್ಪ, ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರಾದ ಲಿಂಗರಾಜ್, ನೂರುಲ್ಲಾ, ರಾಮಚಂದ್ರಪ್ಪ, ಪ್ರವೀಣ್ ಸೇರಿ ಗ್ರಾಮಸ್ಥರು ಹಾಜರಿದ್ದರು.

ಕಾಮಗಾರಿಗಳ ಸಂಪೂರ್ಣ ಜವಾಬ್ದಾರಿ ಗುತ್ತಿಗೆದಾರರ ಮೇಲಿದ್ದು, ಕಾಮಗಾರಿಯಿಂದ ಸಾರ್ವಜನಿಕರಿಗೆ ತೊಂದರೆಯಾದರೆ ಕಠಿಣ ಕ್ರಮ ಜರುಗಿಸಲಾಗುವುದಲ್ಲದೆ, ಜನರಿಗೆ ಅನುಕೂಲವಾಗುವಂತೆ ಗುತ್ತಿಗೆದಾರರು ಕಾಮಗಾರಿಗಳನ್ನು ಕೈಗೊಂಡು ಅವಧಿ ಒಳಗೆ ಕಾಮಗಾರಿ ಪೂರ್ಣಗೊಳಿಸಬೇಕು.

ಕೆ.ಎಸ್.ಬಸವಂತಪ್ಪ ಶಾಸಕ.