ಸಾರಾಂಶ
ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖಂಡರು ಚರ್ಚಿಸಿದರು.
ಬಳ್ಳಾರಿ: ಕಾಂತರಾಜ್ ಆಯೋಗದ ವರದಿಯ ಜಾರಿಗೆ ಆಗ್ರಹಿಸಿ ಜ. 28ರಂದು ಚಿತ್ರದುರ್ಗದಲ್ಲಿ ನಡೆಯಲಿರುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶ ಹಿನ್ನೆಲೆಯಲ್ಲಿ ಶೋಷಿತ ಸಮುದಾಯಗಳ ಒಕ್ಕೂಟದ ಪ್ರಮುಖ ನಾಯಕರು ನಗರದಲ್ಲಿ ಪೂರ್ವಭಾವಿ ಸಭೆ ನಡೆಸಿದರು.
ಇಲ್ಲಿನ ಜಿಲ್ಲಾ ಗೊಲ್ಲರ ಸಂಘದ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ಜಿಲ್ಲೆಯ ಎಲ್ಲ ಸ್ಥಳೀಯ ಶಾಸಕರ ಸಹಕಾರದಿಂದ ತಾಲೂಕು ಮಟ್ಟದಲ್ಲಿ ಶೋಷಿತ ಸಮುದಾಯಗಳ ಮುಖಂಡರು ಹಾಗೂ ಪ್ರಗತಿಪರ ಹೋರಾಟಗಾರರನ್ನು ಸಂಪರ್ಕಿಸಿ ತಾಲೂಕು ಮಟ್ಟದ ಸಭೆ ನಡೆಸಬೇಕು. ಸಮಾವೇಶದ ಮಹತ್ವ ಹಾಗೂ ಪ್ರತಿಯೊಬ್ಬರೂ ಪಾಲ್ಗೊಳ್ಳುವಿಕೆ ಕುರಿತು ಮನವರಿಕೆ ಮಾಡಿಕೊಡಬೇಕು. ಬಳ್ಳಾರಿ ಜಿಲ್ಲೆಯಿಂದ ಹೆಚ್ಚಿನ ಸಂಖ್ಯೆಯಲ್ಲಿ ಜನರು ಜಾಗೃತಿ ಸಮಾವೇಶದಲ್ಲಿ ಭಾಗವಹಿಸಲು ಕೈಗೊಳ್ಳಬೇಕಾದ ಕ್ರಮಗಳ ಕುರಿತು ಮುಖಂಡರು ಚರ್ಚಿಸಿದರು.ಇದೇ ವೇಳೆ ವಿವಿಧ ಸಮಿತಿಗಳನ್ನು ರಚಿಸಲಾಯಿತು. ಪ್ರಚಾರ ಸಮಿತಿಗೆ ಬಳ್ಳಾರಿ ಮುಸ್ಲಿಂ ಅಂಜುಮನ್(ಸಾಮಾಜಿಕ ಸಂಘಟನೆ) ಅಧ್ಯಕ್ಷ ಇಮಾಮ್ ಗೋಡೆಕಾರ ಹಾಗೂ ಮಾನವ ಬಂಧುತ್ವ ವೇದಿಕೆ ಸಂಚಾಲಕ ಸಂಗನಕಲ್ಲು ವಿಜಯಕುಮಾರ್ ಅವರಿಗೆ ವಹಿಸಲಾಯಿತು.
ಜಿಲ್ಲಾ ಕುರುಬರ ಸಂಘದ ಅಧ್ಯಕ್ಷ ಡಾ. ಗಾದಿಲಿಂಗನಗೌಡ, ಒಕ್ಕೂಟದ ಪ್ರಮುಖರಾದ ಮುಂಡ್ರಗಿ ನಾಗರಾಜ, ವಿ.ಎಸ್. ಶಿವಶಂಕರ್, ಹುಮಾಯೂನ್ ಖಾನ್ ಮಾತನಾಡಿದರು.ಮೇಯರ್ ಬಿ. ಶ್ವೇತಾ ಸೋಮು, ಉಪಮೇಯರ್ ಜಾನಕಮ್ಮ, ಉರುಕುಂದಪ್ಪ, ಜಾಸ್ವ, ಗಾದೆಪ್ಪ, ಕುಡುತಿನಿ ರಾಮಾಂಜನಿ, ತಳವಾರ ದುರ್ಗಪ್ಪ, ಜೋಗಿನ ಚಂದ್ರಪ್ಪ, ಪಾಂಡುರಂಗ, ರಫಿ, ಮಾರೇಶ, ಲೋಕೇಶ್, ಕಪ್ಪಗಲ್ಲು ಓಂಕಾರಪ್ಪ, ಚಿದಾನಂದಪ್ಪ, ಗುಜರಿ ಬಸವರಾಜ್, ದೇವಿ ನಗರ್ ಪೆದ್ದಣ್ಣ, ಚಂಪಾ ಚೌಹಾಣ್, ಲೋಕೇಶ್ ಯಾದವ್, ಇಮಾಮ್ ಗೋಡೆಕರ್, ಸಂಗನಕಲ್ಲು ವಿಜಯಕುಮಾರ್ ಇದ್ದರು. ಜಾಗೃತಿ ಸಮಾವೇಶಕ್ಕೆ ಸಹಕರಿಸುವೆ: ಶಾಸಕ
ಜ. 28ರಂದು ಚಿತ್ರದುರ್ಗದಲ್ಲಿ ನಡೆಯುವ ಶೋಷಿತ ಸಮುದಾಯಗಳ ಜಾಗೃತಿ ಸಮಾವೇಶದ ಯಶಸ್ಸಿಗಾಗಿ ಅಗತ್ಯ ಸಹಕಾರ ನೀಡುವುದಾಗಿ ನಗರ ಶಾಸಕ ನಾರಾ ಭರತ್ ರೆಡ್ಡಿ ಭರವಸೆ ನೀಡಿದರು. ಬುಧವಾರ ಬೆಳಗ್ಗೆ ಗಾಂಧಿನಗರದಲ್ಲಿರುವ ಶಾಸಕರ ಕಚೇರಿಯಲ್ಲಿ ತಮ್ಮನ್ನು ಭೇಟಿ ನೀಡಿದ ಶೋಷಿತ ಸಮುದಾಯಗಳ ಸಂಘಟನೆಗಳ ಮುಖಂಡರೊಂದಿಗೆ ಮಾತನಾಡಿದ ಅವರು, ಶೋಷಿತ ಸಮುದಾಯಗಳ ಜಾಗೃತಿ ಯಶಸ್ವಿಯಾಗಲಿ, ಬಳ್ಳಾರಿ ಜಿಲ್ಲೆಯಿಂದ ಚಿತ್ರದುರ್ಗಕ್ಕೆ ತೆರಳುವ ಜನರಿಗೆ ಅಗತ್ಯ ಅನುಕೂಲಕ್ಕೆ ನನ್ನಿಂದಾಗುವ ನೆರವು ನೀಡುವೆ ಎಂದರು.