ಸಾರಾಂಶ
ಕನ್ನಡಪ್ರಭ ವಾರ್ತೆ ಇಂಡಿ
ರೈತರ ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸಿದ್ದನ್ನು ಹಿಂಪಡೆಯಬೇಕು. ಇಲ್ಲವಾದರೆ ರಾಜ್ಯಾದ್ಯಂತ ಹೋರಾಟ ಮಾಡಬೇಕಾಗುತ್ತದೆ ಎಂದು ಹಸಿರು ಸೇನೆ ರಾಜ್ಯಾಧ್ಯಕ್ಷ ಚಂದ್ರಶೇಖರ ಕೋಡಿಹಳ್ಳಿ ಹೇಳಿದರು.ಪಟ್ಟಣದಲ್ಲಿ ಮಾತನಾಡಿದ ಅವರು. ಅ.೮ ಮತ್ತು ೧೦ರಂದು ರೈತರ ಪಹಣಿಯಲ್ಲಿ ವಕ್ಫ್ ಎಂದು ತಿದ್ದುಪಡಿ ಮಾಡಲು ನಿರ್ದೇಶನ ನೀಡಿದವರು ಯಾರು? ಮುಖ್ಯಮಂತ್ರಿಗಳೋ ಅಥವಾ ಜಿಲ್ಲಾಧಿಕಾರಿಗಳೋ? ಇಲ್ಲದಿದ್ದರೆ ಮತ್ಯಾರು, ಯಾವ ಪುರುಷಾರ್ಥಕ್ಕಾಗಿ ರೈತರಿಗೆ ತೊಂದರೆ ನೀಡಲು ಮುಂದಾಗಿದ್ದೀರಿ ಎಂದು ಪ್ರಶ್ನಿಸಿದರು.ಈ ಹಿಂದೆ ವಿಜಯಪುರ ಜಿಲ್ಲೆಯನ್ನು ಸುಲ್ತಾನರು ಆಳಿದ್ದಾರೆ. ಮೊದಲು ಬಾದಾಮಿ ಚಾಲುಕ್ಯರು ಸೇರಿದಂತೆ ಹಲವು ಹಿಂದೂ ರಾಜರು ಆಳ್ವಿಕೆ ಮಾಡಿದ್ದಾರೆ. ಆ ಸಂದರ್ಭದಲ್ಲಿ ರೈತರು ತಾವು ಉಳುಮೆ ಮಾಡುತ್ತಿದ್ದ ಜಮೀನಿಗೆ ರಾಜರಿಗೆ ತೆರಿಗೆ ಕಟ್ಟುತ್ತಿದ್ದರು. ತದನಂತರ ಬ್ರಿಟಿಷ್ ಕಂಪನಿ ರೈತರಿಗೆ ತಾವು ಉಳುಮೆ ಮಾಡುತ್ತಿದ್ದ ಸ್ಥಳವನ್ನು ಅಳತೆ ಮಾಡಿ ರೈತರ ಹೆಸರಿಗೆ ಎಕರೆ ಗುಂಟೆ ವಿಸ್ತೀರ್ಣದ ಬಗ್ಗೆ ದಾಖಲಾತಿ ನೀಡಿದರು. ೧೯೭೪ರಲ್ಲಿ ಡಿ.ದೇವರಾಜ್ ಅರಸ್ ಅವರು ರೈತರು ಉಳುಮೆ ಮಾಡುತ್ತಿದ್ದ ಜಮೀನಿಗೆ ಉಳುವವನೇ ಒಡೆಯ ಎಂದು ಘೋಷಿಸಿ ಆ ಜಮೀನನ್ನು ನೇರವಾಗಿ ರೈತರ ಹೆಸರಿಗೆ ಖಾತೆ ಬದಲಾವಣೆ ಮಾಡಿಸಿದರು. ಅಲ್ಲಿಂದ ಇಲ್ಲಿಯವರೆಗೂ ಅಲ್ಲಿ ರೈತರು ಬೆವರು ಸುರಿಸಿ ದುಡಿದು, ತಮಗಾಗಿ ಅಲ್ಲದೆ ದೇಶಕ್ಕೆ ಅನ್ನ ಹಾಕುವ ಕಾರ್ಯ ಮಾಡುತ್ತಿದ್ದಾರೆ ಎಂದರು.
ಈಗ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಏಕಾಏಕಿ ಒಂದು ಧರ್ಮ ಅಥವಾ ಸಮುದಾಯದ ಓಲೈಕೆಗಾಗಿ ವಕ್ಫ್ ಬೋರ್ಡ್ ಹೆಸರನ್ನು ರೈತರ ಪಹಣಿಯಲ್ಲಿ ಸೇರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಒಂದು ವೇಳೆ ನೀವು ವಕ್ಫ್ ಬೋರ್ಡ್ಗೆ ರೈತರ ಜಮೀನನ್ನು ಸೇರಿಸುವ ಹುನ್ನಾರ ಮುಂದುವರಿಸಿದರೆ, ಮುಂಬರುವ ದಿನಗಳಲ್ಲಿ ನಿಮಗೆ ತಕ್ಕ ಪಾಠ ಕಲಿಸಲು ನಾವೆಲ್ಲ ಒಂದಾಗಬೇಕಾಗುತ್ತದೆ ಎಂದು ಎಚ್ಚರಿಸಿದರು.ವಕ್ಫ್ ಬೋರ್ಡ್ಗೆ ಇನಾಮು ಕೊಟ್ಟಿದ್ದು ಯಾವಾಗ, ದಾನ ಪಡೆದ ಜಮೀನನ್ನು ಇಲ್ಲಿಯವರೆಗೂ ಏಕೆ ವಕ್ಫ್ ಬೋರ್ಡ್ಗೆ ಸೇರಿಸಿಕೊಂಡಿಲ್ಲ? ಈಗ ಒಮ್ಮಿಂದೊಮ್ಮೆಲೆ, ಪಹಣಿಗಳಲ್ಲಿ ವಕ್ಫ್ ಬೋರ್ಡ್ ಹೆಸರು ಸೇರಿಸುತ್ತಿರುವುದು ಏಕೆ ಎಂದು ಪ್ರಶ್ನಿಸಿದರು. ಜಿಲ್ಲಾ ಉಸ್ತುವಾರಿ ಸಚಿವ ಎಂ.ಬಿ.ಪಾಟೀಲರು ಪಹಣಿಯಲ್ಲಿ ವಕ್ಫ್ ಬೋರ್ಡ್ ಎಂದು ನಮೂದಿಸಿರುವುದು ಸರಿ ಮಾಡುತ್ತೇವೆ ಎಂದು ಹೇಳಿಕೆ ನೀಡುತ್ತಿದ್ದಾರೆ. ಈ ಮೊದಲು ಏಕೆ ವಕ್ಫ್ ಬೋರ್ಡ್ ಹೆಸರು ತೇಲಿಸಿದ್ದೀರಿ? ನೀವು ರೈತರಿಗೆ ದ್ರೋಹ ಮಾಡಲು ಮುಂದಾಗಿದ್ದೀರಿ ಮೊದಲು ಪಹಣಿಯಲ್ಲಿನ ವಕ್ಫ್ ಬೋರ್ಡ್ ಹೆಸರು ತೆಗೆದು ರೈತರ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು.
ಹಸಿರು ಸೇನೆಯ ಜಿಲ್ಲಾಧ್ಯಕ್ಷ ಎಸ್.ಬಿ.ಕೆಂಭೋಗಿ ಮಾತನಾಡಿ, ರೈತರಿಗೆ ಯಾವುದೇ ನೋಟಿಸ್ ನೀಡದೆ, ಅವರ ಪಹಣಿಗಳಲ್ಲಿ ಏಕಾಏಕಿ ವಕ್ಫ್ ಬೋರ್ಡ್ ಹೆಸರನ್ನು ನಮೂದಿಸಿದ್ದು, ಖಂಡನೀಯ. ಈ ಕೂಡಲೇ ಅದನ್ನು ಹಿಂಪಡೆದು, ತಪ್ಪು ಮಾಡಿದ ಅಧಿಕಾರಿಗಳನ್ನು ಅಮಾನತು ಮಾಡುವಂತೆ ಒತ್ತಾಯಿಸಿದರು.ಪತ್ರಿಕಾಗೋಷ್ಠಿಯಲ್ಲಿ ಇಂಡಿ ತಾಲೂಕಿನ ಹಿಂಗಣಿಯ ರೈತ ಮಂಜುನಾಥ ಗುಬ್ಯಾಡ ನಮ್ಮ ಜಮೀನಿನ ಪಹಣಿಯಲ್ಲಿಯೂ ವಕ್ಫ್ ಬೋರ್ಡ್ ಹೆಸರು ನಮೂದಿಸಿದ್ದಾರೆ. ನಮ್ಮ ಮುತ್ತಜ್ಜನ ಕಾಲದಿಂದಲೂ ಈ ಆಸ್ತಿ ಇದೆ. ಈಗ ಏಕಾಏಕಿ ನೋಟಿಸ್ ನೀಡದೇ ವಕ್ಫ್ ಬೋರ್ಡ್ ಹೆಸರು ದಾಖಲು ಮಾಡಲಾಗಿದೆ ಎಂದು ಅಳಲು ತೋಡಿಕೊಂಡರು.
ಕೋಟ್ನಿಮಗೆ ಆ ಸಮುದಾಯದ ಮೇಲೆ ಕಾಳಜಿ ಇದ್ದರೆ, ಸರಕಾರದಿಂದ ಅವರಿಗೆ ನೀವು ಸಹಾಯ ಮಾಡಿ ನಮಗೆ ಯಾವುದೇ ಅಭ್ಯಂತರವಿಲ್ಲ, ಆದರೆ ರೈತರ ಜಮೀನನ್ನು ಕಸಿದುಕೊಳ್ಳುವ ಹುನ್ನಾರ ನಡೆಸುತ್ತಿರುವ ನೀವು ಈ ಕೂಡಲೇ ಅದನ್ನು ಕೈ ಬಿಟ್ಟು, ಪಹಣ ಯಲ್ಲಿ ಸೇರಿದ ವಕಪ್ ಬೋರ್ಡ್ ಹೆಸರನ್ನು ತೆಗೆದುಹಾಕಿ, ರೈತರ ಜಮೀನು ರೈತರಿಗೆ ಇರುವಂತೆ ಮಾಡಬೇಕು.
ಕೋಡಿಹಳ್ಳಿ ಚಂದ್ರಶೇಖರ, ಹಸಿರು ಸೇನೆ ಮುಖಂಡಪತ್ರಿಕಾಗೋಷ್ಠಿಯಲ್ಲಿ ರಾಯಚೂರು ಜಿಲ್ಲಾಧ್ಯಕ್ಷ ಶಿವಪುತ್ರಗೌಡ ಪೊಲೀಸ್ಪಾಟೀಲ, ದಾವಣಗೆರೆ ತಾಲೂಕಾಧ್ಯಕ್ಷ ವಿಶ್ವನಾಥ ಮಂಡಲೂರು, ಬೆಳಗಾವಿ ಜಿಲ್ಲಾಧ್ಯಕ್ಷ ಶಂಕರ ಮಾದೇನಹಳ್ಳಿ, ನಾಗೇಶ ಹೆಗಡ್ಯಾಳ, ಮಲ್ಲಿಕಾರ್ಜುನ ಹಾವಿನಾಳಮಠ ಸೇರಿದಂತೆ ಮತ್ತಿತರರು ಇದ್ದರು.