ಬಂಜಾರ ಸಮುದಾಯದ ಜನರು ತಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡಿ, ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುವಂತೆ ಬೆಳೆಸಬೇಕು.
ಕುಕನೂರು: ಬಂಜಾರ ಸಮಾಜದ ಮೀಸಲಾತಿ ಕಸಿದುಕೊಳ್ಳುವ ಹುನ್ನಾರಕ್ಕೆ ಹೋರಾಟವೇ ಅಸ್ತ್ರ ಆಗಿದೆ ಎಂದು ಗೋರ ಸೇನಾ ರಾಜ್ಯ ಪ್ರಧಾನ ಕಾರ್ಯದರ್ಶಿ ಸುರೇಶ ಬಳೂಟಗಿ ಹೇಳಿದರು.
ತಾಲೂಕಿನ ಹೊನ್ನುಣಸಿ ತಾಂಡಾದಲ್ಲಿ ಜರುಗಿದ ಸದ್ಗುರು ಶ್ರೀಸೇವಾಲಾಲ್ ಮಹಾರಾಜರ ಭೋಗ ಕಾರ್ಯಕ್ರಮ ನೆರವೇರಿಸಿ ಮಾತನಾಡಿದ ಅವರು, ಬಂಜಾರ ಸಮುದಾಯದ ಯುವಕರು ಪ್ರತಿಯೊಂದು ಕ್ಷೇತ್ರದಲ್ಲೂ ಮುನ್ನಡೆ ಸಾಧಿಸಿದಾಗ ಮಾತ್ರ ಹಿರಿಯರು ಕಂಡ ಕನಸು ನನಸಾಗಲು ಸಾಧ್ಯ. ಬಂಜಾರ ಸಮುದಾಯದ ಜನರು ತಮ್ಮ ಮಕ್ಕಳನ್ನು ಒಳ್ಳೆಯ ಶಿಕ್ಷಣ ನೀಡಿ, ಪ್ರಜ್ಞಾವಂತ ನಾಗರಿಕರನ್ನಾಗಿ ಮಾಡಿ ಸಮಾಜದಲ್ಲಿ ಉನ್ನತ ಸ್ಥಾನಮಾನ ಪಡೆದುಕೊಳ್ಳುವಂತೆ ಬೆಳೆಸಬೇಕು. ಬಂಜಾರ ಸಮಾಜಕ್ಕೆ ಸಿಕ್ಕಿರುವ ಮೀಸಲಾತಿ ಕಸಿದುಕೊಳ್ಳುವ ಷಡ್ಯಂತ್ರ ನಡೆಯುತ್ತಿದ್ದು, ಅದನ್ನು ಉಳಿಸಲು ಸಮಾಜ ಪಕ್ಷಾತೀತವಾಗಿ ಒಗ್ಗಟ್ಟಾಗಿ ಹೊರಾಡಬೇಕು. ಮೂಢನಂಬಿಕೆ, ದುಶ್ಚಟ, ವರದಕ್ಷಿಣೆಯಂಥ ಅನಿಷ್ಟ ಪದ್ಧತಿ ನಿರ್ಮೂಲನೆ ಮಾಡಿ ಸದೃಢ ಸಮಾಜ ಕಟ್ಟುವ ಸಂಕಲ್ಪ ಮಾಡಬೇಕು. ಬಂಜಾರ ಸಮಾಜಕ್ಕೆ ಸಿಕ್ಕಿರುವ ಮೀಸಲಾತಿ ಕಸಿದುಕೊಳ್ಳುವ ಹುನ್ನಾರ ಜರುಗುತ್ತಿದ್ದು, ಹುನ್ನಾರದ ವಿರುದ್ಧ ಸದಾ ಹೋರಾಟಕ್ಕೆ ಪ್ರತಿಯೊಬ್ಬರು ಮುಂದಾಗಬೇಕು ಎಂದರು.ಗೋರ ಸಿಕವಾಡಿ ಪೂರ್ಣಾವಧಿ ಕಾರ್ಯಕರ್ತ ಉಮೇಶ ರಾಠೋಡ ಮಾತನಾಡಿ, ಬಂಜಾರ ಸಮಾಜ ಸುಮಾರು 7000 ವರ್ಷಗಳ ಭವ್ಯ ಇತಿಹಾಸ ಹೊಂದಿದ್ದು, ಶ್ರೀಮಂತ ಸಂಸ್ಕೃತಿ, ಭಾಷೆ,ಆಚಾರ ವಿಚಾರ ಸಿದ್ಧಾಂತ ಹೊಂದಿದೆ.ಪ್ರತಿಯೊಬ್ಬರೂ ಮರೆಯದೇ ಅವುಗಳನ್ನು ಉಳಿಸುವ ಕಾರ್ಯ ಮಾಡಬೇಕು ಎಂದರು.
ಗೋರ ಸೇನಾ ಮುಖಂಡ ವಿಶ್ವನಾಥ ರತನ್,ರಾಘವೇಂದ್ರ ಬಳಗೇರಿ, ತಾಂಡಾದ ನಾಯಕ ನಿಂಗಪ್ಪ ಚವ್ಹಾಣ, ಈರಣ್ಣ ಚವ್ಹಾಣ, ಯಮನೂರ ರಾಠೋಡ, ಚಂದ್ರು ಚವ್ಹಾಣ, ಮಹಿಳೆಯರು, ಯುವಕರಿದ್ದರು.