ಪಬ್‌ವೊಂದರಲ್ಲಿ ಮದ್ಯ ಸೇವಿಸಿದ ನಂತರ ಮನೆಗೆ ಹೋಗಲು ಹೆದರಿದ ವಿದ್ಯಾರ್ಥಿಯೊಬ್ಬಏಳನೇ ಮಹಡಿಯಿಂದ ಹಾರಿ ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಕನ್ನಡಪ್ರಭ ವಾರ್ತೆ ಬೆಂಗಳೂರು

ಪಬ್‌ವೊಂದರಲ್ಲಿ ಮದ್ಯ ಸೇವಿಸಿದ ನಂತರ ಮನೆಗೆ ಹೋಗಲು ಹೆದರಿದ ವಿದ್ಯಾರ್ಥಿಯೊಬ್ಬಏಳನೇ ಮಹಡಿಯಿಂದ ಹಾರಿ ಮೃತಪಟ್ಟ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ.

ಘಟನೆ ಸಂಬಂಧ ಸ್ವಯಂ ಪ್ರೇರಿತ ದೂರು ದಾಖಲಿಸಿಕೊಂಡಿರುವ ಆರ್‌.ಆರ್‌ ನಗರ ಠಾಣೆ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

ಬಾಲಕ ಖಾಸಗಿ ಶಾಲೆಯಲ್ಲಿ 10 ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ. ಜ.31 ರಂದು ಶಾಲೆಯಲ್ಲಿ ನಡೆದ ಬೀಳ್ಕೊಡುಗೆ ಸಮಾರಂಭ ಮುಗಿದ ನಂತರ ಸ್ನೇಹಿತರೆಲ್ಲರೂ ಆರ್‌.ಆರ್‌ ನಗರದ ಪಬ್‌ವೊಂದರಲ್ಲಿ ಮದ್ಯದ ಪಾರ್ಟಿ ಮಾಡಿದ್ದರು. ಮದ್ಯ ಸೇವಿಸಿದ್ದ ಬಾಲಕನನ್ನು ಆತನ ಸ್ನೇಹಿತ ವಿಷ್ಣುವರ್ಧನ್‌ ಸಮಾಧಿ ರಸ್ತೆಯಲ್ಲಿರುವ ಅಪಾರ್ಟ್‌ಮೆಂಟ್‌ವರೆಗೂ ಬಿಟ್ಟು ಹೋಗಿದ್ದ. ಆದರೆ ಮದ್ಯ ಸೇವಿಸಿದ್ದ ಹಿನ್ನೆಲೆಯಲ್ಲಿ ಬಾಲಕನಿಗೆ ಮನೆಗೆ ಹೋಗಲು ಭಯವಾಗಿದ್ದು, ಹೀಗಾಗಿ ಅಪಾರ್ಟ್‌ಮೆಂಟ್‌ನ 7 ಮಹಡಿಯಿಂದ ಹಾರಿ ಮೃತಪಟ್ಟಿದ್ದ.

ಜೆಜೆ-ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲು:

ತನಿಖೆ ವೇಳೆ ಬಾಲಕ ಪಬ್‌ನಲ್ಲಿ ಮದ್ಯಪಾನ ಮಾಡಿರುವುದು ಪತ್ತೆಯಾಗಿದೆ. ಅಪ್ರಾಪ್ತ ಬಾಲಕನಿಗೆ ಮದ್ಯಪಾನ ಮಾಡಲು ಅವಕಾಶ ನೀಡಿದ್ದ ಪಬ್ ವಿರುದ್ಧ ಕ್ರಮಕ್ಕೆ ಪೊಲೀಸರು ಮುಂದಾಗಿದ್ದಾರೆ. ಈ ಸಂಬಂಧ ಜೆಜೆ ಕಾಯ್ದೆ ಮತ್ತು ಅಬಕಾರಿ ಕಾಯ್ದೆಯಡಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.