ಸಾರಾಂಶ
ಕನ್ನಡಪ್ರಭ ವಾರ್ತೆ ಆನೇಕಲ್
ಎಂಜಿನಿಯರಿಂಗ್ ಕಲಿಯುತ್ತಿದ್ದ ವಿದ್ಯಾರ್ಥಿನಿ ಹಾಸ್ಟೆಲ್ನಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೂರ್ಯನಗರ ಠಾಣಾ ವ್ಯಾಪ್ತಿಯ ಹೀಲಲಿಗೆಯಲ್ಲಿ ನಡೆದಿದ್ದು, ತಡವಾಗಿ ಬೆಳಕಿಗೆ ಬಂದಿದೆ.ಆನೇಕಲ್ ತಾಲೂಕಿನ ಹಿಲೀಲಗೆ ಸಮೀಪದ ಬೆಂಗಳೂರು ಕಾಲೇಜ್ ಆಫ್ ಎಂಜಿನಿಯರಿಂಗ್ ಆ್ಯಂಡ್ ಟೆಕ್ನಾಲಜಿ ಕಾಲೇಜಿನ ವಿದ್ಯಾರ್ಥಿನಿ ಹರ್ಷಿತಾ ನೇಣಿಗೆ ಶರಣಾದ ವಿದ್ಯಾರ್ಥಿನಿ.
ಹಾಸನ ಜಿಲ್ಲೆ ಅರಸೀಕೆರೆಯ ಹರ್ಷಿತಾ ಪ್ರಥಮ ಬಿಇ ವಿಭಾಗದಲ್ಲಿ ಕಲಿಯುತ್ತಿದ್ದಳು. ಮಹಿಳಾ ಹಾಸ್ಟೆಲ್ನಲ್ಲಿ ತಂಗಿದ್ದಳು. ತರಗತಿಗೆ ಸರಿಯಾಗಿ ಬಾರದ ಕಾರಣ ನಡತೆ ಬದಲಾಯಿಸಿಕೊಳ್ಳಲು ವಾರ್ಡನ್ ತಿಳಿ ಹೇಳಿ ಪೋಷಕರ ಗಮನಕ್ಕೂ ತಂದಿದ್ದರು.ಸ್ಥಳಕ್ಕೆ ಬಂದ ಪೊಲೀಸರು ಆಕೆಯ ಮೊಬೈಲ್ಗೆ ಬಂದ ಕರೆಗಳನ್ನು ಪರಿಶೀಲಿಸಿ ತನಿಖೆ ಕೈಗೊಂಡಾಗ ಸಮೀಪದ ಬಂಧು ತಿಪಟೂರಿನ ಪ್ರಜ್ವಲ್ಗೆ ಕಡೆಯ ಕರೆ ಮಾಡಿರುವುದು ತಿಳಿದು ಬಂದಿದೆ. ಇದರ ಜೊತೆಗೆ ಹಾಸ್ಟೆಲ್ನ ಸಿಸಿಟಿವಿ ಹಾಗೂ ಇತರ ಕೋನದಿಂದಲೂ ಪರಿಶೀಲಿಸುತ್ತಿದ್ದು, ತನಿಖೆ ಚುರುಕುಗೊಳಿಸಲಾಗಿದೆ ಎಂದು ಸೂರ್ಯ ನಗರ ಠಾಣೆಯ ಇನ್ಸ್ಪೆಕ್ಟರ್ ಮಹಾಜನ್ ತಿಳಿಸಿದ್ದಾರೆ.
ಆಡಳಿತ ಮಂಡಳಿಯಿಂದ ನಿರ್ಲಕ್ಷ್ಯ: ವಿದ್ಯಾರ್ಥಿಗಳುಕಾಲೇಜಿನ ಆಡಳಿತ ಮಂಡಳಿಯ ವಿರುದ್ಧ ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. ಕಾಲೇಜಿನಲ್ಲಿ ಮೂಲ ಸೌಕರ್ಯ ಸರಿ ಇರದಿರುವುದೂ ಕೂಡ ಹರ್ಷಿತಾಳ ಸಾವಿಗೆ ಕಾರಣ ಎಂದು ದೂರಿದ್ದಾರೆ. ಅಲ್ಲದೆ ಆಡಳಿತ ಮಂಡಳಿಯ ಕಿರುಕುಳವೇ ಆಕೆಯ ಆತ್ಮಹತ್ಯೆಗೆ ಕಾರಣ ಎಂದು ಆರೋಪಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು. ಮೂಲ ಸೌಕರ್ಯಗಳನ್ನು ಸಮರ್ಪಕವಾಗಿ ನೀಡುತ್ತಿಲ್ಲ. ಮೊದಲೇ ಮುನ್ನೆಚ್ಚರಿಕೆ ವಹಿಸಿದ್ದರೆ, ಹರ್ಷಿತಾಳನ್ನು ಕಾಪಾಡಬಹುದಿತ್ತು. ಬೈದು ಬುದ್ಧಿ ಹೇಳಿದರೆ ಸಾಕೆ. ಸಮಸ್ಯೆಯ ಮೂಲ ಅರಿತು ಕೌನ್ಸೆಲಿಂಗ್ ಮಾಡಬೇಕಿತ್ತು ಎಂದು ವಿದ್ಯಾರ್ಥಿಗಳು ಕಾಲೇಜಿನ ಆವರಣದಲ್ಲಿ ಪ್ರತಿಭಟನೆ ನಡೆಸಿದರು.