ಸಾರಾಂಶ
ಚಿಕ್ಕನಾಯಕನಹಳ್ಳಿ: ಮುರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಅಲರ್ಜಿ ಔಷಧಿ ಕುಡಿದ ವಿದ್ಯಾರ್ಥಿ ಅಸ್ವಸ್ಥಗೊಂಡು ಆಸ್ಪತ್ರೆ ಸೇರಿರುವ ಘಟನೆ ನಡೆದಿದೆ. ಪಟ್ಟಣದ ಹೊರವಲಯದಲ್ಲಿರುವ ಮೇಲ್ನಳ್ಳಿ ಮೋರಾರ್ಜಿ ದೇಸಾಯಿ ವಸತಿ ಶಾಲೆಯಲ್ಲಿ ಎಂಟನೇ ತರಗತಿ ವಿದ್ಯಾಭ್ಯಾಸ ಮಾಡುತ್ತಿರುವ ಧನುಷ್ ಆಸ್ಪತ್ರೆ ಸೇರಿರುವ ವಿದ್ಯಾರ್ಥಿ. ಬೆಳಿಗ್ಗೆ ರೂಂನಲ್ಲಿ ತನ್ನ ಸಹಪಾಠಿ ತಿನ್ನಲು ತಂದಿಟ್ಟುಕೊಂಡಿದ್ದ ಚಿಪ್ಸ್ನ್ನು ಧನುಷ್ ತಿಂದ ಪರಿಣಾಮ ಅವನ ಸ್ನೇಹಿತ ಈ ವಿಷಯವನ್ನು ಪ್ರಾಂಶುಪಾಲರ ಗಮನಕ್ಕೆ ತರುತ್ತೇನೆ ಎಂದು ಹೇಳಿದ್ದರಿಂದ ಧನುಷ್ ಭಯಪಟ್ಟು ಮೈ ಅಲರ್ಜಿಗೆ ತಂದಿಟ್ಟು ಕೊಂಡಿದ್ದ ಬೇರೆ ವಿದ್ಯಾರ್ಥಿಯ ಔಷಧಿ ಕುಡಿದು ಅಸ್ವಸ್ಥಗೊಂಡಿದ್ದಾನೆ ಎಂದು ಹೇಳಲಾಗಿದೆ. ವಿದ್ಯಾರ್ಥಿಯನ್ನು ತಕ್ಷಣವೇ ಚಿಕ್ಕನಾಯಕನಹಳ್ಳಿ ಸಾರ್ವಜನಿಕ ಆಸ್ಪತ್ರೆಗೆ ದಾಖಲು ಮಾಡಲಾಗಿ ವಿದ್ಯಾರ್ಥಿಯ ಪೋಷಕರಿಗೂ ತಿಳಿಸಲಾಗಿದೆ. ವಿದ್ಯಾರ್ಥಿ ಪರೀಕ್ಷಿಸಿದ ವೈದ್ಯ ಡಾ. ಉಮೇಶ ಔಷಧಿ ಕುಡಿದ ಒಂದು ಗಂಟೆಯಲ್ಲಿ ಆಸ್ಪತ್ರೆಗೆ ಬಂದಿದ್ದರೆ ಹೊಟ್ಟೆಯನ್ನು ವಾಶ್ ಮಾಡಬಹುದಿತ್ತು. ಊಟ ತಿಂಡಿ ನೀರು ಎಲ್ಲಾ ಸೇವೆನ ಮಾಡಿರುವುದರಿಂದ ಅದು ಸಾಧ್ಯವಿಲ್ಲ. ಈಗ ಪ್ರಾಣಾಪಾಯವಾಗದಂತೆ ಚಿಕಿತ್ಸೆ ನೀಡಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.