ವಿದ್ಯಾರ್ಥಿಗಳು ಜ್ಞಾನ ವೃದ್ಧಿಯತ್ತ ಗಮನ ಹರಿಸಿ: ಪ್ರೊ. ಶಿವಚಿತ್ತಯ್ಯ

| Published : Dec 24 2023, 01:45 AM IST

ವಿದ್ಯಾರ್ಥಿಗಳು ಜ್ಞಾನ ವೃದ್ಧಿಯತ್ತ ಗಮನ ಹರಿಸಿ: ಪ್ರೊ. ಶಿವಚಿತ್ತಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್ಎಸ್ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಪ್ರೊ.ಶಿವಚಿತ್ತಯ್ಯ ಚಾಲನೆ ನೀಡಿ ಮಾತನಾಡಿದರು.

ಸ್ಪೂರ್ತಿ ಎನ್ಎಸ್ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ

ಕನ್ನಡಪ್ರಭ ವಾರ್ತೆ ತುಮಕೂರು

ಜ್ಞಾನವೆಂಬುದು ಸಂಪತ್ತು. ಹಣ ಒಮ್ಮೆ ಬರಬಹುದು, ಹೋಗಲು ಬಹುದು. ಆದರೆ ಜ್ಞಾನ ಒಮ್ಮೆ ನಿಮ್ಮೊಳಗೆ ಬಂದರೆ ಅದು ನಿರಂತರ ವೃದ್ದಿಯಾಗುತ್ತದೆ, ಹಾಗಾಗಿ ನೀವು ಜ್ಞಾನವಂತರಾಗಲು ಹೆಚ್ಚಿನ ಗಮನ ನೀಡಿ, ನಂತರ ಸಂಪತ್ತು ನಿಮ್ಮನ್ನು ತಾನಾಗಿಯೇ ಹಿಂಬಾಲಿಸುತ್ತದೆ ಎಂದು ಮೈಸೂರು ವಿವಿ ಅರ್ಥಶಾಸ್ತ್ರ ಆಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಶಿವಚಿತ್ತಯ್ಯ ಅಭಿಪ್ರಾಯಪಟ್ಟಿದ್ದಾರೆ.

ನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್ಎಸ್ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ನಿಮ್ಮ ಗುರಿ ಏನೇ ಇರಲಿ. ಅದಕ್ಕೆ ತಕ್ಕದಾದ ಜ್ಞಾನವನ್ನು ಸಂಪಾದಿಸಿ, ಆಗ ಮಾತ್ರ ಸಮಾಜದಲ್ಲಿ ನಿಮಗೆ ಗೌರವ ದೊರೆಯುತ್ತದೆ ಎಂದರು.

ನಿಮ್ಮ ತಂದೆ ತಾಯಿಗಳು ನಿಮ್ಮಿಂದ ಬಹಳಷ್ಟು ನಿರೀಕ್ಷೆಯನ್ನು ಇಟ್ಟುಕೊಂಡಿದ್ದಾರೆ. ಅದರ ಜೊತೆಗೆ ನಿಮ್ಮ ಮುಂದೆ ಅನೇಕ ಆಕರ್ಷಣೆಗಳಿವೆ. ಬಾಹ್ಯ ಅಕರ್ಷಣೆಗಳಿಂದ ದೂರವಾದರೆ ಸಾಧನೆ ನಿಮ್ಮದಾಗುತ್ತದೆ. ಲಾಯರ್, ಎಂಜಿನಿಯರ್, ಉಪನ್ಯಾಸಕ, ರಾಜಕಾರಣಿಯಾಗಲು ಅವಕಾಶಗಳ ಬಾಗಿಲು ತೆರೆದಿದೆ. ಆಯ್ಕೆ ನಿಮ್ಮದು. ಅದಕ್ಕೆ ಬೇಕಾದ ತಯಾರಿಯನ್ನು ಈಗಿನಿಂದಲೇ ಮಾಡಿಕೊಳ್ಳಿ, ಇದಕ್ಕೆ ಪೂರಕವಾಗಿ ನಿಮ್ಮಗೆ ಎನ್ಎಸ್ಎಸ್, ರೆಡ್‌ಕ್ರಾಸ್, ಕಲೆ ಮತ್ತು ಕ್ರೀಡಾ ಚಟುವಟಿಕೆಗಳು ಸಹಕಾರಿಯಾಗಲಿವೆ. ಸರಿ ದಾರಿಯಲ್ಲಿ, ನಿರಂತರ ಪರಿಶ್ರಮದಿಂದ ಮುನ್ನಡೆದರೆ ವೇದಿಕೆಯ ಮುಂದಿರುವ ನೀವು, ಮುಂದೊಂದು ದಿನ ವೇದಿಕೆಯ ಮೇಲೆ ನಿಂತು, ನನ್ನಂತೆಯೇ ಸಾವಿರಾರು ಯುವಜನರಿಗೆ ಮಾರ್ಗದರ್ಶನ ಮಾಡಬಹುದು ಎಂದರು.

ಜಾನಪದ ಕಲಾವಿದರಾದ ಅಮ್ಮ ರಾಮಚಂದ್ರಪ್ಪ ಮಾತನಾಡಿ, ನಾನು ಕ್ರಮಬದ್ಧ ಶಾಸ್ತ್ರೀಯ ಸಂಗೀತವನ್ನು ಅಭ್ಯಾಸ ಮಾಡಿಲ್ಲ. ಆದರೂ ರಾಷ್ಟ್ರಮಟ್ಟದ ಪ್ರಶಸ್ತಿಯನ್ನು ತಂದುಕೊಟ್ಟಿದ್ದೇನೆ. ಇದು ಸಂಗೀತಕ್ಕೆ ಇರುವ ಶಕ್ತಿ ಎಂದರು.

ಕಡು ಬಡತನದಲ್ಲಿಯೇ ಹುಟ್ಟಿ, ಮೂರು ಹೊತ್ತಿನ ಊಟಕ್ಕೂ ಪರದಾಡುತ್ತಿನ ನನ್ನನ್ನು ಇದುವರೆಗೂ ಸಾಕಿ, ಸಲಹಿರುವುದು ಈ ಜನಪದ ಸಂಗೀತ. ಬಡತನವೇ ನನ್ನ ಗುರು. ಕಾಲಲ್ಲಿ ಚಪ್ಪಲಿ ಇಲ್ಲದೆ ವೇದಿಕೆ ಹತ್ತಿ ಪ್ರಶಸ್ತಿ ಸ್ವೀಕರಿಸಿದ ದಿನಗಳು ನನ್ನನ್ನು ಏನಾದರೂ ಸಾಧಿಸುವ ಛಲ ಹುಟ್ಟು ಹಾಕಿದವು. ಅದರ ಫಲವಾಗಿ ರಾಷ್ಟ್ರಮಟ್ಟದ ಕಾಲೇಜು ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಪ್ರಥಮ ಬಹುಮಾನ ಪಡೆದು ಅಂದಿನ ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರಿಂದ ಒಂದು ಲಕ್ಷ ರು.ಗಳನ್ನು ಬಹುಮಾನವಾಗಿ ಪಡದೆ. ಆ ಸಾರ್ಥಕ ಕ್ಷಣಗಳನ್ನು ನನ್ನ ಜೀವಮಾನದಲ್ಲಿ ಮರೆಯಲು ಸಾಧ್ಯವೇ ಇಲ್ಲ. ಶಿಕ್ಷಣದ ಜೊತೆಗೆ, ಕಲೆಯನ್ನು ಮೈಗೂಡಿಸಿಕೊಳ್ಳಿ, ನಿಮ್ಮ ಜೀವನ ಬಂಗಾರವಾಗಲಿದೆ ಎಂದು ಸಲಹೆ ನೀಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸಿದ್ದಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜಿನ ಪ್ರಾಂಶುಪಾಲ ಡಾ.ಎಚ್‌.ಎಂ. ದಕ್ಷಿಣಮೂರ್ತಿ ಮಾತನಾಡಿ, ವಿದ್ಯಾರ್ಥಿಗಳ ಸಮಗ್ರ ವಿಕಾಸಕ್ಕಾಗಿ ಹಲವಾರು ಸಾಂಸ್ಕೃತಿಕ ಕಾರ್ಯಕ್ರಮ ಗಳನ್ನು ಹಮ್ಮಿಕೊಂಡು ಬರಲಾಗುತ್ತಿದೆ. ಎನ್ಎಸ್ಎಸ್ ಹಲವಾರು ವಿದ್ಯಾರ್ಥಿ ಯುವಜನರಿಗೆ ತಮ್ಮ ಬದುಕು ಕಟ್ಟಿಕೊಳ್ಳಲು ವೇದಿಕೆಯಾಗಿದೆ. ರಾಷ್ಟ್ರೀಯ ಸೇವಾ ಯೋಜನೆ ಎಂಬುದು ಕೇವಲ ಅಂಕ ಪಡೆಯಲಷ್ಟೇ ಸಿಮೀತವಾಗದೆ, ವ್ಯಕ್ತಿತ್ವ ವಿಕಸನಕ್ಕೆ ನೆರವಾಗುತ್ತದೆ. ಇಂದು ಮಕ್ಕಳಿಗೆ ಆರು ವಿವಿಧ ಸಾಂಸ್ಕೃತಿಕ ಸ್ಪರ್ಧೆಗಳನ್ನು ಹಮ್ಮಿಕೊಂಡಿದ್ದು, ಒಂದೊಂದು ಸ್ಪರ್ಧೆಗೆ ೩೦ಕ್ಕೂ ಹೆಚ್ಚು ವಿದ್ಯಾರ್ಥಿನಿಯರು ಹೆಸರು ನೊಂದಾಯಿಸಿದ್ದು, ಸ್ಪರ್ಧೆಗಳಲ್ಲಿ ಉತ್ಸುಕತೆಯಿಂದ ಭಾಗವಹಿಸಿ, ನಿಮ್ಮ ಪ್ರತಿಭೆಯನ್ನು ಪ್ರದರ್ಶಿಸಿ, ಜೀವನದಲ್ಲಿ ಮುಂದೆ ಬನ್ನಿ ಎಂದು ಶುಭ ಹಾರೈಸಿದರು.

ಕಾರ್ಯಕ್ರಮದಲ್ಲಿ ಉಪನ್ಯಾಸಕರಾದ ಪ್ರೊ. ಶೀಲಾ ಕೆ.ಪಿ., ದಿವ್ಯಾ, ಪಾವನಾ, ಶ್ವೇತಾ ಸಿ.ಎಸ್. ಮತ್ತಿತರರು ಪಾಲ್ಗೊಂಡಿದ್ದರು. ಮಕ್ಕಳಿಂದ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಿದವು.

ಫೋಟೊನಗರದ ಶ್ರೀ ಸಿದ್ಧಗಂಗಾ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಿಳಾ ಪದವಿ ಕಾಲೇಜು ವತಿಯಿಂದ ಹಮ್ಮಿಕೊಂಡಿದ್ದ ಸ್ಪೂರ್ತಿ ಎನ್ಎಸ್ಎಸ್, ಯುವ ರೆಡ್‌ಕ್ರಾಸ್ ಮತ್ತು ಕ್ರೀಡಾ ಚಟುವಟಿಕೆಗಳಿಗೆ ಮೈಸೂರು ವಿವಿ ಅರ್ಥಶಾಸ್ತ್ರ ಆಧ್ಯಯನ ವಿಭಾಗದ ಮುಖ್ಯಸ್ಥ ಪ್ರೊ. ಶಿವಚಿತ್ತಯ್ಯ ಚಾಲನೆ ನೀಡಿದರು. ಜತೆಗೆ ಜಾನಪದ ಕಲಾವಿದರಾದ ಅಮ್ಮ ರಾಮಚಂದ್ರಪ್ಪ ಮತ್ತಿತರರು ಇದ್ದರು.