ಸಾರಾಂಶ
ಜೀವನದಲ್ಲಿ ಸೋಲು-ಗೆಲುವು, ಸಂಕಷ್ಟಗಳು ಎದುರಾಗುವುದು ಸಹಜ. ಜೀವನದ ಸಂಕಷ್ಟಗಳಿಗೆ ಎದೆಗುಂದದೆ ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಉದ್ದೇಶಿತ ಉತ್ತಮ ಗುರಿ ಸಾಧಿಸಲು ವರ್ತಮಾನದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಸಾಧನೆಯ ಶಿಖರ ತಲುಪಬೇಕು ಎಂದು ಮುಖ್ಯಸ್ಥ ಡಾ. ಶಿವರಾಜ ದೇಶಮುಖ ತಿಳಿಸಿದರು.
ಕನ್ನಡಪ್ರಭ ವಾರ್ತೆ ಶಹಾಪುರ
ಜೀವನದಲ್ಲಿ ಸೋಲು-ಗೆಲುವು, ಸಂಕಷ್ಟಗಳು ಎದುರಾಗುವುದು ಸಹಜ. ಜೀವನದ ಸಂಕಷ್ಟಗಳಿಗೆ ಎದೆಗುಂದದೆ ಧೈರ್ಯದಿಂದ ಎದುರಿಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು. ವಿದ್ಯಾರ್ಥಿಗಳು ಉದ್ದೇಶಿತ ಉತ್ತಮ ಗುರಿ ಸಾಧಿಸಲು ವರ್ತಮಾನದ ಸವಾಲುಗಳನ್ನು ಯಶಸ್ವಿಯಾಗಿ ಎದುರಿಸುವ ಮೂಲಕ ಸಾಧನೆಯ ಶಿಖರ ತಲುಪಬೇಕು ಎಂದು ಮುಖ್ಯಸ್ಥ ಡಾ. ಶಿವರಾಜ ದೇಶಮುಖ ತಿಳಿಸಿದರು.ನಗರದ ಎಸ್.ಬಿ. ಕಾಲೇಜು ಸಭಾಂಗಣದಲ್ಲಿ ಆಯೋಜಿಸಿದ್ದ ಕನಕದಾಸರ ಜಯಂತಿ ಹಾಗೂ ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಸ್ವಾಗತ ಮತ್ತು ಅಂತಿಮ ವರ್ಷದ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭದಲ್ಲಿ ಅವರು ಮಾತನಾಡಿದರು.ಕಾಲೇಜುಗಳಲ್ಲಿ ನಡೆಯುವ ಸಾಂಸ್ಕೃತಿಕ, ಸಾಹಿತ್ಯ ಕಾರ್ಯಕ್ರಮಗಳಿಂದ ಸಮನ್ವಯ ಭಾವನೆ, ಶೈಕ್ಷಣಿಕ ಬಲವರ್ಧನೆ ಅವಕಾಶ ದೊರೆಯುತ್ತವೆ. ಈ ನಿಟ್ಟಿನಲ್ಲಿ ಸರ್ವ ವಿದ್ಯಾರ್ಥಿಗಳು ಹಾಗೂ ಉಪನ್ಯಾಸಕರ ಮಾರ್ಗದರ್ಶನದೊಂದಿಗೆ ಮುನ್ನಡೆಯಬೇಕು ಎಂದರು.
ಪತ್ರಕರ್ತ ನಾರಾಯಣಚಾರ್ಯ ಸಗರ ಕನಕದಾಸರ ಕುರಿತು ಮಾತನಾಡಿ, ಅಂದಿನ ಕಾಲಘಟ್ಟದಲ್ಲಿ ಕೀರ್ತನೆಗಳ ಮೂಲಕ ಅಂಕು-ಡೊಂಕುಗಳನ್ನು ತಿದ್ದಿ, ಜನಜಾಗೃತಿ ಮೂಡಿಸಿ, ಭಗವಂತನ ಪ್ರೇರಣೆಗೆ ನಿಷ್ಕಲ್ಮಶ ಭಕ್ತಿ ಮಾರ್ಗವನ್ನು ಕನಕರು ತೋರಿಸಿಕೊಟ್ಟರು . ಜಾತಿ, ಮೌಢ್ಯತೆ ವಿರುದ್ಧ ಸರಿ ಸಮಾನತೆ ಸಾರಿದ ಅವರ ಚರಿತ್ರೆಯನ್ನು ವಿದ್ಯಾರ್ಥಿಗಳು ಅಧ್ಯಯನದ ಮಾಡಿ, ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಮೇಲ್ಪಂಕ್ತಿಯಾಗಬೇಕು ಎಂದು ಹೇಳಿದರು.ನಗರಸಭೆ ಸದಸ್ಯ ಮಲ್ಲಿಕಾರ್ಜುನ ಪಿ. ಗಂಗಾಧರಮಠ, ಲಾಲ ಅಹ್ಮದ್ ಖುರೇಶಿ ಮತ್ತು ಪ್ರಧಾನ ಅಧ್ಯಾಪಕ ಮಲ್ಲಿಕಾರ್ಜುನ ಆವಂಟಿ ವಿದ್ಯಾರ್ಥಿಗಳ ವಿಕಾಸದ ಕುರಿತು ಮಾತನಾಡಿದರು. ಪ್ರಾಚಾರ್ಯ ನೇಹಾ ಸಿ. ಜಾಧವ, ದೇವರಾಜ ಗೌಡರ, ಸಲಬಣ್ಣ ಆನೆಗುಂದಿ ವೇದಿಕೆಯಲ್ಲಿದ್ದರು. ಉಪನ್ಯಾಸಕಿ ಸವಿತಾ ಪ್ರಾರ್ಥಿಸಿದರು. ವಿದ್ಯಾರ್ಥಿನಿಯರಾದ ಫೈಮುನ್ನಿಸಾ, ತ್ರಿವೇಣಿ ಕಾರ್ಯಕ್ರಮ ನಿರ್ವಹಿಸಿದರು. ಈ ಸಂದರ್ಭದಲ್ಲಿ ಅಭ್ಯಾಸದಲ್ಲಿ ಸಾಧನೆಗೈದ ಕಾಲೇಜು ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ಸನ್ಮಾನಿಸಲಾಯಿತು. ಸಮಸ್ತ ವಿದ್ಯಾರ್ಥಿಗಳು ಇದ್ದರು.