ಮೂಲ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರಿಂದ ಬಿಸಿಎಂ ಕಚೇರಿ ಮುತ್ತಿಗೆ

| Published : Jan 04 2024, 01:45 AM IST

ಮೂಲ ಸೌಕರ್ಯಕ್ಕೆ ಆಗ್ರಹಿಸಿ ವಿದ್ಯಾರ್ಥಿನಿಯರಿಂದ ಬಿಸಿಎಂ ಕಚೇರಿ ಮುತ್ತಿಗೆ
Share this Article
  • FB
  • TW
  • Linkdin
  • Email

ಸಾರಾಂಶ

ಬಿಸಿಎಂ ಇಲಾಖೆ ಅಧೀನದಲ್ಲಿ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಬಳಿ ಇರುವ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯದಲ್ಲಿ ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ, ಮಲಗಲು ಜಾಗ, ಶೌಚಾಲಯದ ಸಮಸ್ಯೆ ಹಿನ್ನೆಲೆ ವಿದ್ಯಾರ್ಥಿನಿಯರಿಂದ ಪ್ರತಿಭಟನೆ.

ಕನ್ನಡಪ್ರಭ ವಾರ್ತೆ ಲಿಂಗಸುಗೂರು

ಕುಡಿಯಲು ನೀರು ಇಲ್ಲ, ಮಲಗಲು ಜಾಗ ಇಲ್ಲ, ಶೌಚಾಲಯದ ಸಮಸ್ಯೆ ಹೇಳತೀರದಾಗಿದೆ. ಸಮಸ್ಯೆ ಬಗೆಹರಿಸಿ ಎಂದು ಬಿಸಿಎಂ ಅಧಿಕಾರಿಗಳಿಗೆ ಹಲವು ಸಲ ಮನವಿ ಮಾಡಿದರು ನಿರ್ಲಕ್ಷ್ಯ ವಹಿಸಿದ್ದಾರೆ ಎಂದು ಆಕ್ರೋಶಗೊಂಡ ವಸತಿ ನಿಲಯದ ವಿದ್ಯಾರ್ಥಿನಿಯರು ಬುಧವಾರ ಬಿಸಿಎಂ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.

ಬಿಸಿಎಂ ಇಲಾಖೆ ಅಧೀನದಲ್ಲಿ ಪಟ್ಟಣದ ಸಾಯಿಬಾಬಾ ದೇವಸ್ಥಾನದ ಬಳಿಯಲ್ಲಿ ಮೆಟ್ರಿಕ್ ನಂತರ ಬಾಲಕಿಯರ ವಸತಿ ನಿಲಯವಿದೆ. 150ಕ್ಕೂ ಅಧಿಕ ವಿದ್ಯಾರ್ಥಿನಿಯರನ್ನು ಕಡಿಮೆ ವಿಸ್ತೀರ್ಣದ ಕಟ್ಟಡದಲ್ಲಿ ವಸತಿ ವ್ಯವಸ್ಥೆ ಮಾಡಲಾಗಿದೆ. ನಿಲಯದಲ್ಲಿ ಕುಡಿಯಲು ಸರಿಯಾದ ನೀರಿನ ವ್ಯವಸ್ಥೆ ಇಲ್ಲ. ಕಲ್ಮಶ ನೀರು ಪೂರೈಕೆ ಮಾಡುತ್ತಿದ್ದಾರೆ. ನೀರಿಲ್ಲದ ಪರಿಣಾಮ ಸ್ನಾನ ಮಾಡದೆ ಕಾಲೇಜಿಗೆ ತೆರಳುವಂತಾಗಿದೆ. ಕಿರಿದಾದ ಕೊಠಡಿಯಲ್ಲಿ ಮಲಗಲು, ಪುಸ್ತಕ ಇಡಲು ಜಾಗವಿಲ್ಲದಂತಾಗಿದೆ. ಆದರೂ ಸಹಿಸಿಕೊಂಡು ಓದು ಮುಂದುವರಿಸಿದ್ದೇವೆ. ಇನ್ನೂ ನಿಲಯದಲ್ಲಿರುವ ಸಿನ್ಟೆಕ್ಸ್‌ಗಳು ಸ್ವಚ್ಛ ಮಾಡದೆ ಇರುವುದರಿಂದ ಕಲುಷಿತ ನೀರು ಬರುತ್ತಿದೆ ಎಂದು ಅಳಲು ತೊಡಿಕೊಂಡರು.

ಸಮಸ್ಯೆ ಬಗೆಹರಿಸಲು ಸಂಬಂಧಿಸಿದ ಅಧಿಕಾರಿಗಳು ವಿಫಲರಾಗಿದ್ದಾರೆ. ಇದರಿಂದ ಬಿಸಿಎಂ ಅಧಿಕಾರಿಗಳು ಕಚೇರಿಗೆ ಬರುವವರೆಗೂ ವಸತಿ ನಿಲಯಕ್ಕೆ ಹೋಗುವುದಿಲ್ಲ ಎಂದು ವಿದ್ಯಾರ್ಥಿಗಳು 3 ತಾಸು ಪಟ್ಟು ಹಿಡಿದು ಕುಳಿತರು. ಕೊನೆಗೆ ಪ್ರತಿಭಟನೆಗೆ ಮಣಿದ ಬಿಸಿಎಂ ಅಧಿಕಾರಿ ರಮೇಶ ರಾಠೋಡ ಸ್ಥಳಕ್ಕೆ ಬಂದು ವಿದ್ಯಾರ್ಥಿನಿಯರ ಸಮಸ್ಯೆ ಆಲಿಸಿದರು. ಈ ಕೂಡಲೇ ಕುಡಿಯುವ ನೀರು, ಶೌಚಾಲಯ ಸೇರಿದಂತೆ ಸಮಸ್ಯೆಗಳ ಬಗೆಹರಿಸಲು ಪ್ರಯತ್ನಿಸಲಾಗುವುದು ಎಂದು ಹೇಳಿದರು. ವಿದ್ಯಾರ್ಥಿನಿಯರಿಗೆ ಮೂಲಸೌಕರ್ಯಗಳ ಒದಗಿಸಲು ಸೂಕ್ತ ವ್ಯವಸ್ಥೆ ಮಾಡಬೇಕೆಂದು ವಾರ್ಡನ್ ಅರ್ಚನಾಗೆ ಸೂಚಿಸಿದರು. ಕೊನೆಗೆ ಸಮಸ್ಯೆಗಳು ಎಷ್ಟು ದಿನಗಳಲ್ಲಿ ಬಗೆಹರಿಸುತ್ತೀರಿ ಎಂಬುದು ನಮಗೆ ಲಿಖಿತ ಭರವಸೆ ನೀಡಬೇಕೆಂದು ವಿದ್ಯಾರ್ಥಿನಿಯರು ಪಟ್ಟು ಹಿಡಿದರು.