ಉಡುಪಿ: ನಗರದ ಪ್ರತಿಷ್ಠಿತ ಪೂರ್ಣಪ್ರಜ್ಞ ಕಾಲೇಜು (ಸ್ವಾಯತ್ತ) ಆಯೋಜಿಸಿದ ರಾಜ್ಯ ಮಟ್ಟದ ಎರಡು ದಿನಗಳ ಅಂತರ ಕಾಲೇಜು ಶೈಕ್ಷಣಿಕ ಹಾಗೂ ಸಾಂಸ್ಕೃತಿಕ ಉತ್ಸವ ‘ಪ್ರಜ್ಞಾ 2026’ರ ಸಮಾರೋಪ ಸಮಾರಂಭವು ಮಂಗಳವಾರ ಸಂಜೆ ಪೂರ್ಣಪ್ರಜ್ಞ ಸಭಾಂಗಣದಲ್ಲಿ ನೆರವೇರಿತು.
ಕಾರ್ಯಕ್ರಮದಲ್ಲಿ ಶ್ರೀ ಆದಮಾರು ಶಿಕ್ಷಣ ಮಂಡಳಿಯ ಅಧ್ಯಕ್ಷ ಶ್ರೀ ಈಶಪ್ರಿಯ ತೀರ್ಥ ಸ್ವಾಮೀಜಿಯವರು ಆಶೀರ್ವಚಿಸಿ, ವಿದ್ಯಾರ್ಥಿಗಳು ಉತ್ತಮ ಸಂಸ್ಕಾರವನ್ನು ತಮ್ಮಲ್ಲಿ ಮೈಗೂಡಿಸಿ ಕೊಂಡರೆ ಹೇಗೆ ಸಂಸ್ಕರಣೆಗೆ ಒಳಗಾದ ಹಾಲು ತುಪ್ಪವಾಗಿ ಧೀರ್ಘ ಕಾಲ ಬಾಳಿ, ಸರ್ವ ರೋಗಗಳಿಗೂ ಔಷಧಿಯಾಗುತ್ತದೋ ಅದೇ ರೀತಿ ಶ್ರೇಷ್ಠತೆಯನ್ನು ತಮ್ಮದಾಗಿಸಿಕೊಂಡು, ಸಮಾಜಕ್ಕೆ ಉತ್ತಮ ಆಸ್ತಿ ಆಗಬಹುದು ಎಂದರು. ಹಾಗೆಯೇ ವಿದ್ಯಾರ್ಥಿಗಳು ಕಾಲೇಜಿನಲ್ಲಿ ಒಳ್ಳೆಯ ಜ್ಞಾನ, ಪ್ರತಿಭೆ ಸಂಸ್ಕಾರ ಪಡೆದು ಸಮನ್ವಯದ ದೇಶವನ್ನು ನಿರ್ಮಿಸಲು ಕಾರಣರಾಗಬೇಕು ಎಂದು ಆಶಿಸಿದರು. ಮುಖ್ಯ ಅತಿಥಿಗಳಾಗಿ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕೆನರಾ ಬ್ಯಾಂಕ್ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಪ್ರಧಾನ ವ್ಯವಸ್ಥಾಪಕ ಮಹಾಮಾಯ ಪ್ರಸಾದ್ ರಾಯ್ ಮತ್ತು ಎಸ್. ಬಿ.ಐ. ಪ್ರಾದೇಶಿಕ ಕಚೇರಿ ಮುಖ್ಯ ವ್ಯವಸ್ಥಾಪಕ ಕೃಷ್ಣರಾಜ ಭಟ್ ಕೀಳಿಂಜೆ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾಲೇಜಿನ ಪ್ರಾಂಶುಪಾಲ ಡಾ. ರಾಮು ಎಲ್. ಅವರು ವಹಿಸಿದ್ದರು. ಪೂರ್ಣಪ್ರಜ್ಞ ಪಪೂ ಕಾಲೇಜಿನ ಪ್ರಾಂಶುಪಾಲ ಸುರೇಶ್ ತುಂಗ, ಕಾಲೇಜು ಆಂತರಿಕ ಗುಣಮಟ್ಟ ಖಾತರಿ ಘಟಕದ ಸಹ ಸಂಯೋಜಕರಾದ ಡಾ. ಲಕ್ಷ್ಮೀಶ ರಾವ್, ಡಾ. ಆನಂದ ರಾಯಮಾನೆ, ಡಾ. ಮಂಜುನಾಥ ಕರಬ, ಡಾ. ಸಂದೀಪ್ ಸತ್ಯಮೂರ್ತಿ, ಧನ್ಯಶ್ರೀ, ಸುಮಲತಾ ಪಿ. ಜೆ,, ಡಾ. ಶಿವಕುಮಾರ್ ಅಳಗೋಡು, ವಿದ್ಯಾರ್ಥಿ ಪ್ರತಿನಿಧಿಗಳಾದ ಭಾರ್ಗವ ಭಟ್, ಕೆ.ಪಿ ನೇಹಾ ಹಾಗೂ ಸಂಯೋಜಕರು ಉಪಸ್ಥಿತರಿದ್ದರು. ಡಾ. ರಕ್ಷಾ ಪೂಜಾರಿ ಕಾರ್ಯಕ್ರಮ ನಿರೂಪಿಸಿ, ಪ್ರತಿಭಾ ಸಿ. ಆಚಾರ್ಯ ಸ್ವಾಗತಿಸಿ, ಡಾ. ಸೌಮ್ಯ ಶೆಟ್ಟಿ ವಂದಿಸಿದರು.ಎರಡು ದಿನಗಳ ಉತ್ಸವದಲ್ಲಿ ವಿವಿಧ ಶೈಕ್ಷಣಿಕ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳು ನಡೆದಿದ್ದು, 33 ಶೈಕ್ಷಣಿಕ ಹಾಗೂ 6 ಸಾಂಸ್ಕೃತಿಕ ಸ್ಪರ್ಧೆಗಳನ್ನು ಆಯೋಜಿಸಲಾಗಿದ್ದು ರಾಜ್ಯದ ಸುಮಾರು 29 ಕಾಲೇಜುಗಳಿಂದ 562 ವಿದ್ಯಾರ್ಥಿಗಳು ಭಾಗವಹಿಸಿದ್ದರು. ಪ್ರಥಮ ಸಮಗ್ರ ಪ್ರಶಸ್ತಿಯನ್ನು ಮತ್ತು 10,000 ರು. ನಗದನ್ನು ಕುಂದಾಪುರದ ಡಾ. ಬಿ. ಬಿ. ಹೆಗಡೆ ಕಾಲೇಜು ಮತ್ತು ದ್ವಿತೀಯ ಸಮಗ್ರ ಪ್ರಶಸ್ತಿಯನ್ನು ಉಡುಪಿಯ ಎಂ.ಜಿ.ಎಂ. ಕಾಲೇಜುಗಳು ಪಡೆದುಕೊಂಡವು.