ಕನ್ನಡಪ್ರಭ ವಾರ್ತೆ ಮಡಿಕೇರಿ

ಶಿಕ್ಷಣದೊಂದಿಗೆ ವಿದ್ಯಾರ್ಥಿಗಳು ಸಾಂಸ್ಕೃತಿಕ ಚಟುವಟಿಕೆ ಬೆಳೆಸಿಕೊಂಡು ಸಾಹಿತ್ಯಾಸಕ್ತರಾಗಬೇಕು ಎಂದು ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ನಿರ್ದೇಶಕ ಕೆ.ಕೆ. ಗೋಪಾಲಕೃಷ್ಣ ಕರೆ ನೀಡಿದರು.ಕೇಂದ್ರ ಸಂಸ್ಕೃತಿ ಸಚಿವಾಲಯ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ, ತಂಜಾವೂರು ಹಾಗೂ ಕುಶಾಲನಗರ ದಕ್ಷಿಣ ಸಿರಿ ಸ್ನೇಹ ಬಳಗದ ವತಿಯಿಂದ ಕೊಡ್ಲಿಪೇಟೆಯ ಎಸ್‌ಜಿಎಸ್ ವಿದ್ಯಾಸಂಸ್ಥೆಯ ಸಭಾಂಗಣದಲ್ಲಿ ಎರಡು ದಿನಗಳ ಕಾಲ ನಡೆದ ‘ಮಾನ್ಸೂನ್ ಸಾಂಸ್ಕೃತಿಕ ಉತ್ಸವ’ ಉದ್ಘಾಟಿಸಿ ಅವರು ಮಾತನಾಡಿದರು.ಭಾರತೀಯ ಸಂಸ್ಕೃತಿ ಸನಾತನ ಸಂಸ್ಕೃತಿ ಹೊಂದಿದ್ದು, ಸಮಾನತೆ, ಭಾತೃತ್ವ, ಏಕತೆ ಹೊಂದಿದೆ. ವಿಶ್ವದಲ್ಲೇ ಭಾರತೀಯ ಸಂಸ್ಕೃತಿಗೆ ಹೆಚ್ಚಿನ ಸ್ಥಾನಮಾನ ಇದೆ ಎಂದರು.ಭಾರತ ಸರ್ಕಾರದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರ ತಂಜಾವೂರಿನಲ್ಲಿ ಕೇಂದ್ರ ಕಚೇರಿ ಹೊಂದಿದ್ದು, ದಕ್ಷಿಣ ರಾಜ್ಯಗಳಲ್ಲಿ ಆಯಾಯ ಜಿಲ್ಲೆ, ರಾಜ್ಯಕ್ಕೆ ಸಂಬಂಧಿಸಿದಂತೆ ಸಾಂಸ್ಕೃತಿಕ ಕಾರ್ಯಕ್ರಮ ನಡೆಸಿಕೊಂಡು ಬರುತ್ತಿದೆ ಎಂದು ಹೇಳಿದರು. ಕರ್ನಾಟಕ ರಾಜ್ಯದ ಕೊಡಗು ಜಿಲ್ಲೆಯ ಕಲಾವಿದರಿಗೆ ಹಾಗೂ ಅಕ್ಕಪಕ್ಕದ ಜಿಲ್ಲೆಯ ಕಲಾವಿದರು ಒಂದೆಡೆ ಸೇರಿ ಎರಡು ದಿನಗಳ ಕಾರ್ಯಕ್ರಮ ‘ಮಾನ್ಸೂನು ಉತ್ಸವ’ ಎಂಬ ಹೆಸರಿನಡಿ ನಡೆಸಲು ಕನ್ನಡ ಸಿರಿ ಸ್ನೇಹ ಬಳಗ ನಮಗೆ ಸಹಕಾರ ನೀಡುತ್ತಿದೆ ಎಂದು ಶ್ಲಾಘಿಸಿದರು.

ಮುಂದೆಯೂ ಸಹ ಕೊಡಗು ಜಿಲ್ಲೆಯಲ್ಲಿ ಹೆಚ್ಚು ಹೆಚ್ಚು ಕಾರ್ಯಕ್ರಮ ನಡೆಸಲಾಗುವುದು ಎಂದರು. ಕಾರ್ಯಕ್ರಮದ ಸಾನಿಧ್ಯ ವಹಿಸಿದ್ದ ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ನಮ್ಮ ವಿದ್ಯಾಸಂಸ್ಥೆಯಲ್ಲಿ ವಿಶೇಷವಾದ ಸಾಂಸ್ಕೃತಿಕ ಕಾರ್ಯಕ್ರಮ ನಡೆಸುತ್ತಿರುವುದು ಹೆಮ್ಮೆಯ ವಿಷಯ ಎಂದರು. ಪ್ರಾಸ್ತಾವಿಕವಾಗಿ ಮಾತನಾಡಿದ ಕಾರ್ಯಕ್ರಮದ ಸಂಯೋಜಕ ಹಾಗೂ ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಮಾತನಾಡಿ, ಜಿಲ್ಲೆಯಲ್ಲಿ ಮಾನ್ಸೂನ್ ಮಳೆಯನ್ನು ಆಹ್ವಾನ ಮಾಡಿಕೊಳ್ಳುವ ಈ ಸಂದರ್ಭದಲ್ಲಿ ಮಾನ್ಸೂನ್ ಉತ್ಸವ ಸಾಂಸ್ಕೃತಿಕ ಕಾರ್ಯಕ್ರಮವನ್ನು ಕೊಡ್ಲಿಪೇಟೆಯಲ್ಲಿ ನಡೆಸಲು ಸಂತೋಷವಾಗುತ್ತಿದ್ದು, ತಾವೆಲ್ಲರೂ ಸಂಸ್ಕೃತಿ ಸಾಹಿತ್ಯದ ಸದಭಿರುಚಿ ಬೆಳೆಸಿಕೊಳ್ಳಬೇಕು ಎಂದರು.ಪದ್ಮಶ್ರೀ ಪುರಸ್ಕೃತ ರಾಣಿ ಮಾಚಯ್ಯ, ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ರವೀಂದ್ರ ಕುಮಾರ್, ಎಸ್.ಜಿ. ವಿದ್ಯಾಸಂಸ್ಥೆಯ ಪ್ರಾಂಶುಪಾಲರಾದ ತನುಜ, ಕಾರ್ಯದರ್ಶಿ ನಂಜುಂಡ, ಮಣಜೂರು ಮಂಜುನಾಥ್, ಪತ್ರಕರ್ತ ನಾಗರಾಜ, ಕೆ. ಅಶ್ವಥ್ ಉಪಸ್ಥಿತರಿದ್ದರು. ಎರಡು ದಿನಗಳ ಕಾಲ ಮಾನ್ಸೂನ್ ಉತ್ಸವ ಕಾರ್ಯಕ್ರಮ ನಡೆಸಲು ಕಾರಣರಾದ ದಕ್ಷಿಣ ವಲಯ ಸಾಂಸ್ಕೃತಿಕ ಕೇಂದ್ರದ ನಿರ್ದೇಶಕ ಕೆ.ಕೆ. ಗೋಪಾಲಕೃಷ್ಣ ಸೇರಿದಂತೆ ಶಾಲೆಯಲ್ಲಿ ಎಸ್‌ಎಸ್ ಎಲ್‌ಸಿಯಲ್ಲಿ ಶೇ.100 ಫಲಿತಾಂಶ ಬರಲು ಶ್ರಮಿಸಿದ ಪ್ರಾಂಶುಪಾಲರಾದ ತನುಜ ಹಾಗೂ ಕಾರ್ಯದರ್ಶಿ ನಂಜುಂಡ ಅವರನ್ನು ಕನ್ನಡ ಸಿರಿ ಸ್ನೇಹ ಬಳಗದ ಅಧ್ಯಕ್ಷ ಬಿ.ಎಸ್. ಲೋಕೇಶ್ ಸಾಗರ್ ಸನ್ಮಾನಿಸಿದರು. ಕೊಡಗಿನ ಉಮ್ಮತ್ತಾಟ್, ಊರೋಟ್ಟಿಕೋಟ್, ಬಾಳೋಪಾಟ್, ಕಂಸಾಳೆ, ಡೊಳ್ಳು ಕುಣಿತ, ಜೇನುಕುರುಬ ನೃತ್ಯ, ಜಾನಪದ ಹಾಡುಗಳು, ಜಾನಪದ ನೃತ್ಯ, ಕೋಲಾಟ ಮುಂತಾದ ಕಲೆಗಳ ಪ್ರದರ್ಶನ ನಡೆಯಿತು. ಶಾಲೆಯ ಕನ್ನಡ ಭಾಷಾ ಪ್ರಾಧ್ಯಾಪಕ ಚಂದ್ರಶೇಖರ ಸ್ವಾಗತಿಸಿ, ಮಣಜೂರು ಮಂಜುನಾಥ್ ನಿರೂಪಿಸಿದರು.