ಸಾರಾಂಶ
ವಿದ್ಯಾರ್ಥಿಗಳು ತಮ್ಮ ಸುತ್ತಣ ಇರಬಹುದಾದ ಚಾರಿತ್ರಿಕ ಘನತೆ ಅರಿಯಲು ಪ್ರಯತ್ನಿಸಬೇಕು. ಬದ್ಧತೆಯಿಂದ ಅಧ್ಯಯನಕ್ಕೆ ತೆರೆದುಕೊಂಡಾಗ ಶ್ರೇಷ್ಠ ಸಾಧನೆ ಸಾಧ್ಯ.
ಧಾರವಾಡ:
ಸಂಪದ್ಭರಿತ ಕನ್ನಡ ಭಾಷೆಗೆ ಯಾವಾಗಲೂ ಗೆಲುವಾಗಲಿ ಎಂಬ ದೂರದೃಷ್ಟಿಯ ನೆಲೆಯಲ್ಲಿ ಕನ್ನಡ ಪರ ವಾತಾವರಣ ಹುಟ್ಟುಹಾಕಲು ‘ಸಿರಿಗನ್ನಡಂ ಗೆಲ್ಗೆ’ ಘೋಷವಾಕ್ಯವನ್ನು ಬರೆದು ಸಾರ್ವತ್ರಿಕಗೊಳಿಸಿದ ಕೀರ್ತಿ ಕರ್ನಾಟಕ ವಿದ್ಯಾವರ್ಧಕ ಸಂಘದ ಸಂಸ್ಥಾಪಕ ಕಾರ್ಯದರ್ಶಿ ರಾ.ಹ. ದೇಶಪಾಂಡೆ ಅವರಿಗೆ ಸಲ್ಲುತ್ತದೆ ಎಂದು ಹಿರಿಯ ರಂಗಕರ್ಮಿ ಡಾ. ಶಶಿಧರ ನರೇಂದ್ರ ಹೇಳಿದರು.ನಗರದ ಲೀಲಾವತಿ ಆರ್. ಚರಂತಿಮಠ ಪಬ್ಲಿಕ್ ಶಾಲೆಯಲ್ಲಿ ನಡೆದ ಶಾಲಾ ಸಂಸತ್ಗೆ ಚುನಾಯಿತಗೊಂಡ ವಿದ್ಯಾರ್ಥಿ ನಾಯಕರ ಪದಗ್ರಹಣದಲ್ಲಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಸುತ್ತಣ ಇರಬಹುದಾದ ಚಾರಿತ್ರಿಕ ಘನತೆ ಅರಿಯಲು ಪ್ರಯತ್ನಿಸಬೇಕು. ಬದ್ಧತೆಯಿಂದ ಅಧ್ಯಯನಕ್ಕೆ ತೆರೆದುಕೊಂಡಾಗ ಶ್ರೇಷ್ಠ ಸಾಧನೆ ಸಾಧ್ಯ ಎಂದರು.
ಕಾಮನಕಟ್ಟಿ, ಹೊಸಯಲ್ಲಾಪುರ, ಹೆಬ್ಬಳ್ಳಿ ಅಗಸಿ ಒಳಗೊಂಡಂತೆ ಮೂಲ ಧಾರವಾಡದ ನೆಲ ಶಕ್ತಿ ಸ್ಥಳವಿದ್ದಂತೆ. ಹೊಸಯಲ್ಲಾಪೂರದ ‘ಮಂಗ್ಯಾನ ಮಹಲ್’ಗೆ ಸ್ವಾಮಿ ವಿವೇಕಾನಂದ, ಬಾಲಗಂಗಾಧರನಾಥ ತಿಲಕ, ಡೆಪ್ಯೂಟಿ ಚೆನ್ನಬಸಪ್ಪ, ರೊದ್ದ ಶ್ರೀನಿವಾಸರಾವ್, ರಾ.ಹ. ದೇಶಪಾಂಡೆ, ಆಲೂರ ವೆಂಕಟರಾಯರು, ದ.ರಾ. ಬೇಂದ್ರೆ, ಬೆಟಗೇರಿ ಕೃಷ್ಣ ಶರ್ಮ ಅವರಂತಹ ದಿಗ್ಗಜರು ಭೇಟಿ ನೀಡಿರುವುದು ಮೂಲ ಧಾರವಾಡದ ನೆಲ ಶಕ್ತಿಸ್ಥಳವಾಗಿದೆ ಎನ್ನುವುದಕ್ಕೆ ಸಾಕ್ಷಿಯಾಗಿದೆ ಎಂದೂ ಡಾ. ನರೇಂದ್ರ ಹೇಳಿದರು.ಹಿರಿಯ ಎಂಜಿನಿಯರ್ ರವಿ ನಾಯಕ ಮಾತನಾಡಿ, ತಂತ್ರಜ್ಞಾನ ಇಂದಿನ ಅವಶ್ಯಕತೆ, ವಿದ್ಯಾರ್ಥಿಗಳು ಬದಲಾಗುತ್ತಿರುವ ಜಾಗತಿಕ ತಂತ್ರಜ್ಞಾನವನ್ನು ಅರಿತುಕೊಂಡು ತಮ್ಮನ್ನು ತಾವು ಜಾಗತಿಕ ಮಟ್ಟದಲ್ಲಿ ಸಮರ್ಥರನ್ನಾಗಿ ರೂಪಿಸಿಕೊಳ್ಳಬೇಕು ಎಂದರು.
ಶಾಲೆಯ ಸಂಸ್ಥಾಪಕ ಅಧ್ಯಕ್ಷ ಅರುಣ ಚರಂತಿಮಠ ಅಧ್ಯಕ್ಷತೆ ವಹಿಸಿದ್ದರು. ಪ್ರಾಚಾರ್ಯರಾದ ಅಶ್ವಿನಿ ಚಿಕ್ಕಬಳ್ಳಾಪುರ ಇದ್ದರು. ವಿದ್ಯಾರ್ಥಿ ಸಂಸತ್ತಿನ ಸೃಷ್ಟಿ ಕನ್ನೆಗೌಡರ ಪ್ರಧಾನಮಂತ್ರಿಯಾಗಿ, ಸೃಷ್ಟಿ ಅಗಡಿ ಉಪ ಪ್ರಧಾನಿಯಾಗಿ ಅಧಿಕಾರ ಸ್ವೀಕರಿಸಿದರು. ಇದೇ ವೇಳೆ ಡಾ. ಶಶಿಧರ ನರೇಂದ್ರ ಅವರನ್ನು ಗೌರವಿಸಲಾಯಿತು. ಆಡಳಿತಾಧಿಕಾರಿ ಸೋಮೇಶ ಗಂಗಣ್ಣವರ ವಂದಿಸಿದರು.