ಸಂಸ್ಕಾರ ಕಲಿಯದಿದ್ದರೆ ಓದು ನಿರರ್ಥಕ

| Published : Jul 21 2024, 01:21 AM IST

ಸಂಸ್ಕಾರ ಕಲಿಯದಿದ್ದರೆ ಓದು ನಿರರ್ಥಕ
Share this Article
  • FB
  • TW
  • Linkdin
  • Email

ಸಾರಾಂಶ

ಬದಲಾಗುತ್ತಿರುವ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಸಂಸ್ಕಾರ ಕಲಿಯದಿದ್ದರೆ ಎಷ್ಟೇ ಓದಿದರೂ ನಿರರ್ಥಕ. ಶರಣರ ವಚನ ಓದಿ ನಮ್ಮ ಸಂಸ್ಕೃತಿ ಅರ್ಥೈಸಿಕೊಳ್ಳಬೇಕು. ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಪಡೆದಾಗ ದೇಶಕ್ಕೆ ಏನಾದರೂ ಕೊಡುಗೆ ಕೊಡಬಹುದು ಎಂದು ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಎನ್.ನೀಲಪ್ಪನವರ ಹೇಳಿದರು.

ಕನ್ನಡಪ್ರಭ ವಾರ್ತೆ ಬೀಳಗಿ

ಬದಲಾಗುತ್ತಿರುವ ಆಧುನಿಕ ಶಿಕ್ಷಣ ಪದ್ಧತಿಯಲ್ಲಿ ಮಕ್ಕಳು ಸಂಸ್ಕಾರ ಕಲಿಯದಿದ್ದರೆ ಎಷ್ಟೇ ಓದಿದರೂ ನಿರರ್ಥಕ. ಶರಣರ ವಚನ ಓದಿ ನಮ್ಮ ಸಂಸ್ಕೃತಿ ಅರ್ಥೈಸಿಕೊಳ್ಳಬೇಕು. ಉನ್ನತ ಶಿಕ್ಷಣದ ಜೊತೆಗೆ ಉತ್ತಮ ಸಂಸ್ಕಾರ ಪಡೆದಾಗ ದೇಶಕ್ಕೆ ಏನಾದರೂ ಕೊಡುಗೆ ಕೊಡಬಹುದು ಎಂದು ಬಿಡಿಸಿಸಿ ಬ್ಯಾಂಕ್ ವ್ಯವಸ್ಥಾಪಕ ನಿರ್ದೇಶಕ ಸಿದ್ದನಗೌಡ ಎನ್.ನೀಲಪ್ಪನವರ ಹೇಳಿದರು.

ಪಟ್ಟಣದ ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆ ಬೀಳಗಿಯ ಪಂಚವಟಿ ಸ್ಪೋರ್ಟ್ಸ್ ಮೈದಾನದಲಿ ಶನಿವಾರ ನಡೆದ ಶಾಲಾ ವಿಭಾಗಗಳ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆಗಳ ಕಾರ್ಯಕ್ರಮ ೨೦೨೩-೨೪ರ ಪ್ರತಿಬಿಂಬ ಪತ್ರಿಕೆ ಬಿಡುಗಡೆ, ಶಾಲಾ ಸಂಸತ್‌ ಸದಸ್ಯರಿಗೆ ಪ್ರತಿಜ್ಞಾ ವಿಧಿ ಬೋಧನೆ, ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಂದ ಧ್ವಜ ವಂದನೆ, ಸನ್ಮಾನ ಸಮಾರಂಭ ಉದ್ಘಾಟಿಸಿ ಅವರು ಮಾತನಾಡಿ, ಪ್ರತಿಯೊಬ್ಬ ವಿದ್ಯಾರ್ಥಿಯೂ ದೇಶಪ್ರೇಮ ಬೆಳೆಸಿಕೊಳ್ಳಬೇಕು. ಒಳ್ಳೆಯ ಆರೋಗ್ಯ ಕಾಪಾಡಿಕೊಳ್ಳಲು ಉತ್ತಮ ಆಹಾರ ಸೇವಿಸಬೇಕು. ಜತೆಗೆ ಪಾಲಕರಿಗೆ ಹಿರಿಯರಿಗೆ ಗೌರವ ನೀಡಿ ಕಲಿತ ಶಾಲೆ ಹೆಸರು ಬೆಳುಗುವಂತೆ ಬೆಳೆಯಬೇಕು ಎಂದರು.

ಸಾರ್ವಜನಿಕ ಶಿಕ್ಷಣ ಇಲಾಖೆ ವಿಶ್ರಾಂತ ಉಪ ನಿರ್ದೇಶಕ ಎಂ.ಜಿ.ದಾಸರ ಪ್ರತಿಜ್ಞಾ ವಿಧಿ ಬೋಧಿಸಿ ಮಾತನಾಡಿ, ಸ್ವಾಮಿ ವಿವೇಕಾನಂದ ವಿದ್ಯಾಸಂಸ್ಥೆ ವಿದ್ಯಾರ್ಥಿಗಳಿಗೆ ಜ್ಞಾನದ ಬೆಳಕು, ಮೌಲ್ಯಯುತ, ಸಂಸ್ಕಾರ ಭರಿತ ಶಿಕ್ಷಣ ಕೊಡುವಂತ ಜ್ಞಾನದ ಭಂಡಾರವಾಗಿದೆ. ಇಲ್ಲಿ ಓದುತ್ತಿರುವ ಮಕ್ಕಳು ಶಿಸ್ತು, ಶ್ರದ್ಧೆ, ನಯ-ವಿನಯ, ಸಂಸ್ಕಾರವಂತರಾಗಿದ್ದಾರೆ. ಮಕ್ಕಳು ಸೌಂದರ್ಯದ ಕನಸನ್ನು ತುಂಬಿಕೊಳ್ಳಬೇಕು. ಜ್ಞಾನದ ಬುತ್ತಿ ಕಟ್ಟಿಕೊಂಡು ಹೊರಗಡೆ ಹೋಗಬೇಕು. ದುರ್ಜನ ಸಂಘ ಮಾಡಬಾರದು. ಕೆಟ್ಟಚಟಗಳನ್ನು ಮಾಡುವುದಿಲ್ಲವೆಂಬ ಪ್ರತಿಜ್ಞೆ ಮಾಡಬೇಕು. ಶ್ರದ್ಧೆ ಇದ್ದವರಿಗೆ ಜ್ಞಾನ ದೊರೆಯಲು ಸಾಧ್ಯ ಎಂದು ಹೇಳಿದರು.

ನಿವೃತ್ತ ಕಾರ್ಯನಿರ್ವಾಹಕ ಅಭಿಯಂತರ ಮಹೇಶ ಕಕರಡ್ಡಿ ಧ್ವಜಾರೋಹಣ ನೆರವೇರಿಸಿ, ಧ್ವಜವಂದನೆ ಸ್ವೀಕರಿಸಿ ಮಾತನಾಡಿ, ಎಂ. ಎನ್.ಪಾಟೀಲ ಅರು ಸ್ವಾಮಿ ವಿವೇಕಾನಂದ ಆದರ್ಶ ಮತ್ತು ತತ್ವಗಳನ್ನು ಜೀವನದಲ್ಲಿ ಅಳವಡಿಸಿಕೊಂಡು, ಮೂಲಭೂತ ಸೌಲಭ್ಯವುಳ್ಳ ಶಿಕ್ಷಣ ಸಂಸ್ಥೆ ತೆರೆದು ಮಕ್ಕಳಿಗೆ ಜ್ಞಾನದ ಜ್ಯೋತಿ ಬೆಳಕು ನೀಡುತ್ತಿದ್ದಾರೆ ಎಂದರು.

ಶಾಲಾ ಮಕ್ಕಳಿಂದ ವಿವಿಧ ಸಾಂಸ್ಕೃತಿಕ ಹಾಗೂ ಕ್ರೀಡಾ ಚಟುವಟಿಕೆ ಕಾರ್ಯಕ್ರಮಗಳು ನಡೆದವು. ಪ್ರತಿಬಿಂಬ ಪತ್ರಿಕೆ ಬಿಡುಗಡೆ, ಸಾಧಕ ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು. ಮಕ್ಕಳಿಂದ ಆಕರ್ಷಕ ಪಥ ಸಂಚಲನ ನಡೆಯಿತು.

ಮರೇಗುದ್ದಿಯ ಅಡವಿ ಸಿದ್ಧೇಶ್ವರ ಮಠದ ನಿರುಪಾದೀಶ ಮಹಾಸ್ವಾಮಿಗಳು ಸಾನ್ನಿಧ್ಯವಹಿಸಿ ಮಾತನಾಡಿದರು. ಬೀಳಗಿ ವಕೀಲರ ಸಂಘದ ಉಪಾಧ್ಯಕ್ಷ ಹೆಚ್.ಆರ್.ಮಲ್ಲಾಪೂರ, ಲೆಕ್ಕ ಪರಿಶೋಧಕ ಎಸ್.ಎಂ.ಮಣ್ಣೂರ, ಪಪಂ ಮುಖ್ಯಾಧಿಕಾರಿ ದೇವಿಂದ್ರ ಧನಪಾಲ, ಆಡಳಿತ ಮಂಡಳಿ ನಿರ್ದೇಶಕ ವೈ.ಎಂ.ಬೋರ್ಜಿ, ಬಿ.ಪಿ.ಪಾಟೀಲ, ಆರ್. ಎಸ್. ಪಾಟೀಲ, ಎಸ್.ಐ.ಸೋರಗಾವಿ, ಸಂತೋಷ ಜಂಬಗಿ, ಸಮೂಹ ಸಂಸ್ಥೆಯಗಳ ಪದಾಧಿಕಾರಿಗಳು, ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ಡಿ.ಎಸ್.ಕುಂಠೆ ಪ್ರಾಸ್ತಾವಿಕ ನುಡಿ ಹೇಳಿದರು. ಗೌರಮ್ಮ ಕೆಂಗಲಗುತ್ತಿ ನಿರೂಪಿಸಿದರು. ಶಂಕರಗೌಡ ಆರ್ ಪಾಟೀಲ ಸ್ವಾಗತಿಸಿದರು. ಜಿ. ಅರ್. ಪಾಟೀಲ ವಂದಿಸಿದರು.

----

ಕೋಟ್‌

ಜನರ ಪ್ರೀತಿ, ವಿಶ್ವಾಸ ಹಾಗೂ ಸಂಸ್ಥೆಯ ಆಡಳಿತ ಮಂಡಳಿ ನಿರ್ದೇಶಕರ ಮತ್ತು ಶಾಲಾ, ಕಾಲೇಜಿನ ಪ್ರಾಧ್ಯಾಪಕರು ಮತ್ತು ಸಿಬ್ಬಂದಿ ವರ್ಗದವರು ಪರಿಶ್ರಮದಿಂದ ಈ ಶಿಕ್ಷಣ ಸಂಸ್ಥೆ ಬೆಳೆಯಲು ಸಾಧ್ಯವಾಗಿದೆ.

-ಎಂ.ಎನ್.ಪಾಟೀಲ, ಸ್ವಾಮಿ ವಿವೇಕಾನಂದ ವಿದ್ಯಾ ಸಂಸ್ಥೆಯ ಸಂಸ್ಥಾಪಕ ಅಧ್ಯಕ್ಷ