ಸಾರಾಂಶ
ಸವಣೂರು: ಶುದ್ಧ ಮನಸ್ಸಿನಿಂದ ದೇವರನ್ನು ಪೂಜಿಸಿ ಭಕ್ತಿಯಿಂದ ವರವನ್ನು ಬೇಡಿದಾಗ ಪರಮಾತ್ಮ ಪ್ರತ್ಯಕ್ಷನಾಗಿ ಭಕ್ತರಿಗೆ ವರವನ್ನು ನೀಡುತ್ತಾನೆ ಎಂದು ಹಿರೇಮಣಕಟ್ಟಿ ಮುರುಘೇಂದ್ರ ಮಠದ ವಿಶ್ವಾರಾಧ್ಯ ಶಿವಾಚಾರ್ಯ ಸ್ವಾಮೀಜಿ ತಿಳಿಸಿದರು.ಪಟ್ಟಣದ ರೇಣುಕಾಚಾರ್ಯ ನಗರದ ರೇಣುಕಾಚಾರ್ಯ ಮಂದಿರ ಸಭಾಭವನದಲ್ಲಿ ಏರ್ಪಡಿಸಿದ್ದ ಗುರುಪೂರ್ಣಿಮೆ ಅಂಗವಾಗಿ ಪಾದಪೂಜೆ ಹಾಗೂ ಅಖಿಲ ಭಾರತ ಶರಣರ ಸಾಹಿತ್ಯ ಪರಿಷತ್ನ ಶಹರ ಘಟಕದ ನೂತನ ಪದಾಧಿಕಾರಿಗಳ ಸೇವಾಧಿಕಾರ ಸ್ವೀಕಾರ ಸಮಾರಂಭ ಸಾನ್ನಿಧ್ಯ ವಹಿಸಿ ಆಶೀರ್ವಚನ ನೀಡಿದರು.ಮನೆಗಿಂತ ವಿಶ್ವವಿದ್ಯಾಲಯ ಬೇರೊಂದು ಇಲ್ಲ. ಇಲ್ಲಿ ಮೈಗೂಡಿಸಿಕೊಳ್ಳುವ ಆರೋಗ್ಯಕರ ಜೀವನಶೈಲಿ ಆರೋಗ್ಯಕರ ಆಲೋಚನೆಗಳು ಇಡೀ ಬದುಕನ್ನೇ ಬೆಳಗುತ್ತವೆ. ಬಿಡುವಿಲ್ಲದ ಜೀವನಶೈಲಿಯ ನಡುವೆ ಮಕ್ಕಳಿಗಾಗಿ ಬಿಡುವು ಮಾಡಿಕೊಂಡು, ಅವರ ಒಳಗೆ ಸದ್ಗುಣಗಳನ್ನು ಅರಳಿಸುವ ಕೌಟುಂಬಿಕ ಸಂಬಂಧಗಳ ಮೌಲ್ಯ ತಿಳಿಸುವ ಸಾಮಾಜಿಕ ವ್ಯವಸ್ಥೆಯ ಸವಾಲುಗಳಿಗೆ ಎದೆಗೊಡಲು ಆತ್ಮಸ್ಥೈರ್ಯ ರೂಪಿಸುವ ಪ್ರಯತ್ನಗಳು ನಿರಂತರವಾಗಿ ಸಾಗಬೇಕಾಗಿದೆ ಎಂದರು.ಅಖಿಲ ಭಾರತ ಶರಣರ ಸಾಹಿತ್ಯ ಪರಿಷತ್ ಜಿಲ್ಲಾ ಅಧ್ಯಕ್ಷ ಮಾರುತಿ ಶಿಡ್ಲಾಪೂರ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, 12ನೇ ಶತಮಾನದಲ್ಲಿ ಸಾಮಾಜಿಕ ಕ್ರಾಂತಿ ಆರಂಭಿಸಿ ಮೂಢನಂಬಿಕೆ ಅಂಧಶ್ರದ್ಧೆಗಳ ವಿರುದ್ಧ ಅಂದೇ ಶರಣರು ಅನೇಕ ವಚನಗಳನ್ನು ರಚಿಸುವ ಮೂಲಕ ವೈಚಾರಿಕ ತಳಹದಿಯ ಮೇಲೆ ಸಮಾಜ ನಿರ್ಮಾಣಕ್ಕೆ ಮುಂದಾಗಿದ್ದರು ಎಂದರು.ಅಖಿಲ ಭಾರತ ಶರಣರ ಸಾಹಿತ್ಯ ಪರಿಷತ್ ತಾಲೂಕು ಘಟಕ ಅಧ್ಯಕ್ಷ ಪ್ರವೀಣ ಚರಂತಿಮಠ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಅಖಿಲ ಭಾರತ ಶರಣರ ಸಾಹಿತ್ಯ ಪರಿಷತ್ನ ಶಹರ ಘಟಕದ ಅಧ್ಯಕ್ಷರಾಗಿ ವಿದ್ಯಾಧರ ಕುತನಿ ನೂತನ ಪದಾಧಿಕಾರಿಗಳೊಂದಿಗೆ ಅಧಿಕಾರ ಸ್ವೀಕರಿಸಿದರು.
ರೇಣುಕಾಚಾರ್ಯ ಮಂದಿರ ಆಡಳಿತ ಮಂಡಳಿ ಅಧ್ಯಕ್ಷ ರಾಜು ಮಟಿಗಾರ, ಪ್ರಮುಖರಾದ ಆನಂದಯ್ಯ ಕಲ್ಮಠ, ಪ್ರಕಾಶ ಜಮಾದಾರ, ರಾಜೇಶಖಯ್ಯ ಚರಂತಿಮಠ, ವಿಶ್ವನಾಥ ಹಾವಣಗಿ, ಸಿ.ಎನ್. ಲಕ್ಕನಗೌಡ್ರ, ಸಿ.ವಿ. ಗುತ್ತಲ, ರವತಪ್ಪ ಬಿಕ್ಕಣ್ಣನವರ, ಬಿ.ಎಸ್. ಚಳ್ಳಾಳ, ಈರಯ್ಯ ಹಿರೇಮಠ, ಗಣೇಶಗೌಡ ಪಾಟೀಲ, ಸುನಂದಾ ಚಿನ್ನಾಪೂರ, ಕವಿತಾ ಬಿಕ್ಕಣ್ಣನವರ, ಪುಷ್ಪಾ ಬತ್ತಿ, ಪೂರ್ಣಿಮಾ ಬೆಣ್ಣಿ, ಡಾ. ಸವಿತಾ ಮುರಡಿ ಪಾಲ್ಗೊಂಡಿದ್ದರು.