ಕನ್ನಡಪ್ರಭ ವಾರ್ತೆ ಪಾಂಡವಪುರ
ಹಳ್ಳಿಗಳು ಅಭಿವೃದ್ಧಿಗೊಂಡು ರೈತರು ಆರ್ಥಿಕವಾಗಿ ಸಬಲೀಕರಣಗೊಳ್ಳಲು ಉಪಕಸುಬುಗಳನ್ನು ಅಳವಡಿಸಿಕೊಳ್ಳಬೇಕು ಎಂದು ಶಾಸಕ ದರ್ಶನ್ ಪುಟ್ಟಣ್ಣಯ್ಯ ಹೇಳಿದರು.ತಾಲೂಕಿನ ಕಣಿವೆಕೊಪ್ಪಲು ಗ್ರಾಮದಲ್ಲಿ ಲೋಕೋಪಯೋಗಿ ಇಲಾಖೆಯ 2.10 ಕೋಟಿ ರು. ವೆಚ್ಚದ ಅನುದಾನದಲ್ಲಿ ಕೆ.ಆರ್.ಪೇಟೆ-ಪಾಂಡವಪುರ ಮುಖ್ಯರಸ್ತೆಯಿಂದ ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ಸಂಪರ್ಕ ರಸ್ತೆ ಅಭಿವೃದ್ಧಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಬಳಿಕ ಅಭಿನಂದನೆ ಸ್ವೀಕರಿಸಿ ಮಾತನಾಡಿದರು.
ರೈತರು ಸಾವಯವ ಕೃಷಿಯ ಜತೆಗೆ ಮನೆಯಲ್ಲಿಯೇ ಗುಡಿ ಕೈಗಾರಿಕೆಗಳನ್ನು ಅಳವಡಿಕೆ ಮಾಡಿಕೊಂಡು ಅಭಿವೃದ್ಧಿಯತ್ತ ಮುನ್ನಡೆಯಬೇಕು. ತಾಲೂಕನ್ನು ರಾಜ್ಯ ಸರ್ಕಾರ ಸಾವಯವ ಕೃಷಿ ತಾಲೂಕು ಎಂಬುದಾಗಿ ಘೋಷಣೆ ಮಾಡಿದೆ. ಇದರ ಬಗ್ಗೆ ಅರಿವು ಮೂಡಿಸಿಕೊಂಡು ಸಾವಯವ ಕೃಷಿಯತ್ತ ಮುಂದಾಗಬೇಕು ಎಂದರು.ಮಾರುಕಟ್ಟೆಯಲ್ಲಿ ಸಾವಯವ ಮೂಲಕ ಬೆಳೆದ ಬೆಳೆಗಳಿಗೆ ತುಂಬಾ ಬೇಡಿಕೆ ಇದೆ. ಅದಕ್ಕಾಗಿಯೇ ತಾಪಂ ಆವರಣದಲ್ಲಿ ಸಾವಯವ ಸಂತೆಯನ್ನು ಸಹ ಆರಂಭಿಸಲಾಗಿದೆ. ನಾವೆಲ್ಲರು ಮತ್ತೆ ಸಾವಯವ ಕೃಷಿ ಕಡೆಗೆ ಮುಖಮಾಡಬೇಕಾದ ಅನಿವಾರ್ಯ ಸ್ಥಿತಿ ಎದುರಾಗಿದೆ ಎಂದರು.
ಸರ್ಕಾರಕ್ಕೆ ನೀವು ಕಟ್ಟುವ ತೆರಿಗೆ ಹಣವನ್ನೇ ನಾವು ಮತ್ತೆ ಅಭಿವೃದ್ಧಿ ರೂಪರದಲ್ಲಿ ಸರ್ಕಾರ ನಮಗೆ ಕೊಡುತ್ತಿದೆ, ನಾವು ಮಾಡುವ ಅಭಿವೃದ್ಧಿ ಕೆಲಸಗಳಿಗೆ ನಮ್ಮ ನಯಾಪೈಸೆ ಹಣವನ್ನು ನಾವು ಹಾಕುವುದಿಲ್ಲ. ಮುಂದಿನ ದಿನಗಳಲ್ಲಿ ಚಿನಕುರಳಿಯಿಂದ ಕಟ್ಟೇರಿ ಸರ್ಕಲ್ ವರೆಗಿನ ರಸ್ತೆಯ ಅಭಿವೃದ್ಧಿ ಕಾಮಗಾರಿಗೂ ಭೂಮಿಪೂಜೆಸಲ್ಲಿಸಲಾಗುವುದು ಎಂದು ಭರವಸೆ ನೀಡಿದರು.
ದಸಂಸ ಮುಖಂಡ ಕಣಿವೆ ರಾಮು ಮಾತನಾಡಿ, ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರು ಕಣಿವೆಕೊಪ್ಪಲು ಗ್ರಾಮಕ್ಕೆ 4 ಕೋಟಿ ಅಧಿಕ ಅನುದಾನ ನೀಡುವ ಮೂಲಕ ಗ್ರಾಮದ ಅಭಿವೃದ್ಧಿಗೆ ಸಹಕಾರಿಯಾಗಿದ್ದಾರೆ ಎಂದರು.
ಇದಕ್ಕೂ ಮುನ್ನ ಗ್ರಾಮಕ್ಕೆ ಆಗಮಿಸಿದ ಶಾಸಕ ದರ್ಶನ್ ಪುಟ್ಟಣ್ಣಯ್ಯ ಅವರನ್ನು ಗ್ರಾಮಸ್ಥರು, ಮಹಿಳೆಯರು ಪೂರ್ಣಕುಂಭದೊಂದಿಗೆ ತಮಟೆ, ನಗಾರಿಯ ಕಲಾತಂಡಗಳೊಂದಿಗೆ ಗ್ರಾಮದ ಎಲ್ಲಾ ಬೀದಿಗಳಲ್ಲೂ ಮೆರವಣಿಗೆ ಮಾಡುವ ಮೂಲಕ ಬಳಿಕ ವೇದಿಕೆಗೆ ಸ್ವಾಗತಿಸಿ ಅಭಿನಂದಿಸಿದರು.ಈ ವೇಳೆ ರೈತನಾಯಕಿ ಸುನೀತ ಪುಟ್ಟಣ್ಣಯ್ಯ, ರೈತಸಂಘದ ಜಿಲ್ಲಾಧ್ಯಕ್ಷ ಎ.ಎಲ್.ಕೆಂಪೂಗೌಡ, ತಾಲೂಕು ಅಧ್ಯಕ್ಷ .ಮಂಜುನಾಥ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಕೃಷ್ಣೇಗೌಡ, ರಾಘವಪ್ರಕಾಶ್, ರೂಪನಿತೀನ್, ಕೆ.ಟಿ.ಗೋವಿಂದೇಗೌಡ, ಕಣಿವೆರಾಮು, ಬಿ.ಜೆ.ಸ್ವಾಮಿ, ಮರೀಗೌಡ, ಶೇಖರ, ರಾಮಚಂದ್ರ, ಸಂದೇಶ, ಗೋವಿಂದರಾಜು, ಮಂಜೇಶ, ದಿವಾಕರ, ಜವರ, ಶಶಾಂಕ್, ಸಿದ್ದಲಿಂಗೇಗೌಡ, ರಾಜು, ರಮೇಶ್, ಸತೀಶ್, ಗೋಪಾಲಕೃಷ್ಣ, ಕಾಂತರಾಜು, ಜಯರಾಮು, ಪಾಪೇಗೌಡ, ಸುಬ್ಬೇಗೌಡ ಸೇರಿದಂತೆ ಹಲವರು ಹಾಜರಿದ್ದರು.