ಸಾರಾಂಶ
ರಾಣಿಬೆನ್ನೂರು: ಬಾಂಗ್ಲಾದೇಶದಲ್ಲಿ ಹಿಂದೂಗಳು ಮತ್ತು ದೇವಾಲಯಗಳ ರಕ್ಷಣೆಗಾಗಿ ಭಾರತ ಸರ್ಕಾರವು ತಕ್ಷಣ ಕ್ರಮ ತೆಗೆದುಕೊಳ್ಳಬೇಕು ಎಂದು ಆಗ್ರಹಿಸಿ ಹಿಂದೂ ಜನಜಾಗೃತಿ ಸಮಿತಿ ವತಿಯಿಂದ ತಹಸೀಲ್ದಾರ್ ಆರ್.ಎಚ್.ಭಾಗವಾನ್ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.ಬಾಂಗ್ಲಾದೇಶದಲ್ಲಿ ಶೇಖ್ ಹಸೀನಾ ಪ್ರಧಾನಿ ಹುದ್ದೆ ತೊರೆದಾಗಿನಿಂದ ಅಲ್ಲಿನ ಹಿಂದೂಗಳ ಮೇಲೆ ದಬ್ಬಾಳಿಕೆ ಹೆಚ್ಚಾಗಿದೆ. ಉದ್ದೇಶಪೂರ್ವಕವಾಗಿ ಹಿಂದೂಗಳ ವಿರುದ್ಧ ಸರ್ಕಾರ ವಿರೋಧಿ ಚಳವಳಿ ನಡೆಸಲಾಗುತ್ತಿದೆ. ಉದ್ದೇಶಪೂರ್ವಕವಾಗಿ ಹಿಂದೂಗಳನ್ನು ಗುರಿಯಾಗಿಸಿ ಕೊಲ್ಲುವುದು, ಹಿಂದೂ ಮನೆಗಳ ಮೇಲೆ ದಾಳಿ ಮಾಡುವುದು, ಹಿಂದೂ ಅಂಗಡಿಗಳನ್ನು ಲೂಟಿ ಮಾಡುವುದು, ಹಿಂದೂ ದೇವಾಲಯಗಳನ್ನು ಕೆಡವುದು ಮತ್ತು ಸುಡುವುದು, ಹಿಂದೂ ಮಹಿಳೆಯರ ಮೇಲೆ ಅತ್ಯಾಚಾರ, ಹಿಂದೂಗಳನ್ನು ಸ್ಥಳಾಂತರಿಸುವುದು ಇತ್ಯಾದಿ ದೌರ್ಜನ್ಯಗಳು ನಡೆಯುತ್ತಿವೆ. ಹಿಂದೂ ಕಾರ್ಪೊರೇಟರ್ನ ಕೊಲೆಯಾಗಿದೆ. ಒಬ್ಬ ಹಿಂದೂ ಪತ್ರಕರ್ತನನ್ನೂ ಕೊಲೆ ಮಾಡಲಾಗಿದೆ. ಈ ಘಟನೆಗಳಿಂದ ಅಲ್ಲಿನ ಅಲ್ಪಸಂಖ್ಯಾತ ಹಿಂದೂಗಳಲ್ಲಿ ತೀವ್ರ ಭಯದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ಬಾಂಗ್ಲಾದೇಶದ ಸೇನೆಯು ಹಿಂದೂಗಳ ಸುರಕ್ಷತೆಯ ಬಗ್ಗೆ ಭರವಸೆ ನೀಡಿದ್ದರೂ ಭಾರತ ಸರ್ಕಾರ ಅದನ್ನು ಅವಲಂಬಿಸದೆ ಹಿಂದೂ ಸಮಾಜ ಮತ್ತು ದೇವಾಲಯಗಳ ಸುರಕ್ಷತೆಗೆ ತಕ್ಷಣದ ಕ್ರಮಗಳನ್ನು ತೆಗೆದುಕೊಳ್ಳಬೇಕು ಎಂದು ಮನವಿಯಲ್ಲಿ ಆಗ್ರಹಿಸಲಾಗಿದೆ. ವರ್ತಕರ ಸಂಘದ ಅಧ್ಯಕ್ಷ ಗದಿಗೆಪ್ಪ ಜಿ ಹೊಟ್ಟಿಗೌಡ್ರ, ವಂದೇಮಾತರಂ ಸೇವಾ ಸಂಸ್ಥೆಯ ಅಧ್ಯಕ್ಷ ಪ್ರಕಾಶ ಬುರುಡಿಕಟ್ಟಿ, ಬಿ.ಸಿ.ನಂದಿಹಳ್ಳಿ, ಬಸವರಾಜ ಅಂತರವಳ್ಳಿ, ಕಿರಣ ಅಂತರವಳ್ಳಿ, ರಾಜು ತಿಳುವಳ್ಳಿ, ಹೊಸಗೌಡ್ರ, ಹರೀಶ ನೆಲವೀಗಿ, ಶಿವಯೋಗಿ ಅಸುಂಡಿ, ಪ್ರಕಾಶ ಸಿದ್ದಮ್ಮನವರ, ವಾಗೀಶ ಕಮದೋಡ, ಹನುಮಂತಪ್ಪ ಹಾದಿಮನಿ, ಚಂದ್ರುಗೌಡ ಬಸವನಗೌಡ, ಪರಮೇಶ್ವರಪ್ಪ ರೆಡ್ಡಿ ಮತ್ತಿತರರಿದ್ದರು.