ಆದ್ಯತೆಯ ಮೇರೆಗೆ ಶೇ. 100ರಷ್ಟು ಕೆಲಸ ಒದಗಿಸಲು ತಾಪಂ ಮತ್ತು ಗ್ರಾಪಂ ಹಂತದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ.

ಗದಗ: ವಿಬಿ ಜಿ ರಾಮ್‌ಜಿ ಅಡಿ ನೋಂದಣಿಯಾಗದ ಕೂಲಿಕಾರರು ಗ್ರಾಮ ಪಂಚಾಯಿತಿಗೆ ಅಗತ್ಯ ದಾಖಲೆಗಳನ್ನು ಸಲ್ಲಿಸಿ ಹೊಸ ಜಾಬ್ ಕಾರ್ಡ್ ಪಡೆದುಕೊಳ್ಳಬೇಕು ಎಂದು ತಾಪಂ ನಿರ್ದೇಶಕ (ವಿಬಿ ಜಿ ರಾಮ್‌ ಜಿ) ಕುಮಾರ ಪೂಜಾರ ಹೇಳಿದರು.

ತಾಲೂಕಿನ ಲಕ್ಕುಂಡಿ ಗ್ರಾಮದಲ್ಲಿ ದಂಡಿನ ದುರ್ಗಾದೇವಿ ಕೆರೆಯಿಂದ ಮೊಟ ಬಸಪ್ಪ ಗುಡಿಯ ವರೆಗೆ ನೀರು ಬರುವ ಕೋಡಿ ಅಭಿವೃದ್ಧಿ ಪಡಿಸುವ ಕಾಮಗಾರಿ ಸ್ಥಳ ಪರಿಶೀಲನೆ ಹಾಗೂ ವಿಕಸಿತ ಭಾರತ - ಗ್ಯಾರಂಟಿ ಫಾರ್ ರೋಜಗಾರ್‌ ಆ್ಯಂಡ್‌ ಆಜೀವಿಕ ಮಿಷನ್ (ಗ್ರಾಮೀಣ) ಕಾಯ್ದೆಯ ಐಇಸಿ ಚಟುವಟಿಕೆಯಡಿ ಜಾಬ್ ಕಾರ್ಡ್ ಮೇಳ ಭಾಗವಾಗಿ ಹಮ್ಮಿಕೊಂಡಿದ್ದ ಸಭೆಯಲ್ಲಿ ಅವರು ಮಾತನಾಡಿದರು. ವಿಬಿ ಜಿ ರಾಮ್ ಜಿ ಯೋಜನೆಯಡಿ ಕೆಲಸಕ್ಕೆ ಹಾಜರಾಗುವಂತೆ ಹಾಗೂ ವೈಯಕ್ತಿಕ ಕಾಮಗಾರಿಗಳನ್ನು ಕೈಗೊಳ್ಳುವಂತೆ ತಿಳಿಸಿದರು.

ಅದೇ ರೀತಿಯಾಗಿ ಆದ್ಯತೆಯ ಮೇರೆಗೆ ಶೇ. 100ರಷ್ಟು ಕೆಲಸ ಒದಗಿಸಲು ತಾಪಂ ಮತ್ತು ಗ್ರಾಪಂ ಹಂತದಲ್ಲಿ ಕ್ರಿಯಾ ಯೋಜನೆಗಳನ್ನು ರೂಪಿಸಲಾಗಿದೆ. ಜಾಬ್ ಕಾರ್ಡ್ ಮೇಳದಲ್ಲಿ ಈಗಾಗಲೇ ಪಂಚಾಯಿತಿಯಲ್ಲಿ ಸಾಕಷ್ಟು ಜನರಿಗೆ ಹೊಸ ಜಾಬ್ ಕಾರ್ಡ್‌ಗೆ ನೋಂದಣಿಯಾಗಿದ್ದು, ಕೆಲವರ ಕುಟುಂಬ ವಿಂಗಡಣೆ ಸೇರಿ ವಿವಿಧ ಕುಂದು-ಕೊರತೆಯಿದ್ದು, ಹಂತ ಹಂತವಾಗಿ ಪರಿಹಾರ ಕಂಡುಕೊಳ್ಳಲಾಗುವುದು ಎಂದರು.

ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಅಮೀರ್ ನಾಯಕ ಮಾತನಾಡಿ, ಜಾಬ್ ಕಾರ್ಡ್ ಹೊಂದಿರುವ ಪ್ರತಿಯೊಂದು ಗ್ರಾಮೀಣ ಕುಟುಂಬವು ವರ್ಷದಲ್ಲಿ 125 ದಿನ ಕೆಲಸ ಪಡೆಯುವ ಕಾನೂನುಬದ್ಧ ಹಕ್ಕನ್ನು ಹೊಂದಿದೆ. ವಲಸೆ ಹೋಗಿ ಕಷ್ಟ-ನಷ್ಟಗಳನ್ನು ಅನುಭವಿಸುವ ಅಗತ್ಯವಿಲ್ಲ. ತಮ್ಮ ಸ್ವಂತ ಊರಿನಲ್ಲಿ ವಿಬಿ ಜಿ ರಾಮ್ ಜಿ ಅಡಿ ಕೆಲಸಗಳಲ್ಲಿ ಸಕ್ರಿಯವಾಗಿ ಭಾಗವಹಿಸಿ, ಆರ್ಥಿಕ ಸ್ವಾವಲಂಬಿಗಳಾಗಿ ಎಂದು ಸಲಹೆ ನೀಡಿದರು.

ತಾಪಂ ಐಇಸಿ ಸಂಯೋಜಕ ವೀರೇಶ ಬಸನಗೌಡ್ರ, ಗ್ರಾಪಂ ಸಿಬ್ಬಂದಿ ಇದ್ದರು.