ಬರಡು ಪ್ರದೇಶದಲ್ಲಿ ಸೋಲಾರ್‌ ಸಿಸ್ಟಂ ಅಳವಡಿಸಲು ಸಹಾಯಧನ - ಟಿ.ಡಿ. ರಾಜೇಗೌಡ

| Published : Nov 11 2024, 11:49 PM IST

ಬರಡು ಪ್ರದೇಶದಲ್ಲಿ ಸೋಲಾರ್‌ ಸಿಸ್ಟಂ ಅಳವಡಿಸಲು ಸಹಾಯಧನ - ಟಿ.ಡಿ. ರಾಜೇಗೌಡ
Share this Article
  • FB
  • TW
  • Linkdin
  • Email

ಸಾರಾಂಶ

ಚಿಕ್ಕಮಗಳೂರು, ಬರಡು ಅಥವಾ ನಿರುಪಯುಕ್ತ ಪ್ರದೇಶದಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿ ಇಂಧನ ಶಕ್ತಿ ಉತ್ಪಾದಿಸಲು ರಾಜ್ಯ ಸರ್ಕಾರ ಶೇ.80 ರಷ್ಟು ಸಬ್ಸಿಡಿ ಒದಗಿಸಿ ಸ್ವ ಉದ್ಯೋಗ ಕೈಗೊಳ್ಳಲು ಯುವ ಸಮೂಹಕ್ಕೆ ಸಹಾಯಧನ ಕಲ್ಪಿಸುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷದ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

ರಾಜ್ಯ ಸರ್ಕಾರದಿಂದ ಶೇ. 80 ರಷ್ಟು ಸಬ್ಸಿಡಿ । ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಕುರಿತ ಕಾರ್ಯಾಗಾರ

ಕನ್ನಡಪ್ರಭ ವಾರ್ತೆ, ಚಿಕ್ಕಮಗಳೂರು

ಬರಡು ಅಥವಾ ನಿರುಪಯುಕ್ತ ಪ್ರದೇಶದಲ್ಲಿ ಸೋಲಾರ್ ಸಿಸ್ಟಂ ಅಳವಡಿಸಿ ಇಂಧನ ಶಕ್ತಿ ಉತ್ಪಾದಿಸಲು ರಾಜ್ಯ ಸರ್ಕಾರ ಶೇ.80 ರಷ್ಟು ಸಬ್ಸಿಡಿ ಒದಗಿಸಿ ಸ್ವ ಉದ್ಯೋಗ ಕೈಗೊಳ್ಳಲು ಯುವ ಸಮೂಹಕ್ಕೆ ಸಹಾಯಧನ ಕಲ್ಪಿಸುತ್ತಿದೆ ಎಂದು ರಾಜ್ಯ ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷದ ಶಾಸಕ ಟಿ.ಡಿ.ರಾಜೇಗೌಡ ಹೇಳಿದ್ದಾರೆ.

ನಗರದ ಆದಿಚುಂಚನಗಿರಿ ತಾಂತ್ರಿಕ ವಿದ್ಯಾಲಯದಲ್ಲಿ ಸೋಮವಾರ ಏರ್ಪಡಿಸಿದ್ಧ ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಕುರಿತ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿ ದರು. ಇತ್ತೀಚಿನ ದಿನಗಳಲ್ಲಿ ದೇಶ, ವಿದೇಶಗಳಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಹಸಿರು ಇಂಧನ ಉತ್ಪಾದಿಸುವುದು ಸಮಾರೋಪಾದಿಯಲ್ಲಿ ನಡೆಯುತ್ತಿದೆ. ಪ್ರಕೃತಿಯಲ್ಲಿ ದೊರೆಯುವ ಗಾಳಿ, ನೀರು, ಸೂರ್ಯನ ಕಿರಣ ಬಳಸಿಕೊಂಡು ಪರಿಸರಕ್ಕೆ ಹಾನಿಯಾಗದೇ ಜೈವಿಕ ವಿಧಾನದಡಿ ವಿದ್ಯುತ್‍ಶಕ್ತಿ ಉತ್ಪಾದನೆಯಲ್ಲಿ ಸರ್ಕಾರಗಳು ತೊಡಗಿಸಿಕೊಂಡಿವೆ ಎಂದು ಹೇಳಿದರು.

ಗುಣಮಟ್ಟದ ಇಂಧನ ಉತ್ಪತ್ತಿ ಸಂಬಂಧ ವಿದೇಶಿ ಕಂಪನಿಯೊಂದಕ್ಕೆ ಸಂಸ್ಥೆ ಒಪ್ಪಂದ ಮಾಡಿಕೊಂಡು ಹೆಚ್ಚಿನ ಮಟ್ಟದಲ್ಲಿ ಶುದ್ಧ ಇಂಧನಕ್ಕೆ ಮುಂದಾಗಿದೆ ಎಂದ ಅವರು, ಸೋಲಾರ್‌ಗೆ ಹೆಚ್ಚು ಪ್ರಾಮುಖ್ಯತೆ ಸರ್ಕಾರ ನೀಡಿರುವ ಪರಿಣಾಮ ರಾಜ್ಯ ಇಂಧನ ಉತ್ಪಾದನೆಯಲ್ಲಿ ಮೂರನೇ ಸ್ಥಾನ ಪಡೆದು ಕೊಂಡಿದೆ ಎಂದರು.

ಜನಸಾಮಾನ್ಯರಿಗೆ ಸಂಪೂರ್ಣ ವಿದ್ಯುತ್ ಪೂರೈಸುವ ಸಂಬಂಧ ಸೋಲಾರ್ ಪವಾರ್ ಅಳವಡಿಸಿ ಕೊಂಡು ಮುನ್ನಡೆದರೆ ಮುಂದಿನ ಹತ್ತು ವರ್ಷಗಳಲ್ಲಿ ದೇಶಕ್ಕೆ ಹಾಗೂ ರಾಜ್ಯಕ್ಕೆ ಹೆಚ್ಚಿನ ಮಟ್ಟದಲ್ಲಿ ಇಂಧನ ಉತ್ಪತ್ತಿಯಾಗಿ ಯಶಸ್ವಿಗೊಂಡರೆ ಪ್ರತಿ ಮನೆಗೆ 24 ಗಂಟೆಗಳ ಕಾಲ ನಿರಂತರ ವಿದ್ಯುತ್ ಪೂರೈಸಬಹುದು ಎಂದು ಹೇಳಿದರು.

ನಿರುಪಯುಕ್ತ ಪ್ರದೇಶ ಪಾವಗಡದಲ್ಲಿ ರೈತರ ಜಮೀನನ್ನು ಗುತ್ತಿಗೆ ಪಡೆದು ಸೋಲಾರ್ ಸಿಸ್ಟಂ ಅಳವಡಿಸಿ ಹೆಚ್ಚಿನ ಪ್ರಮಾಣದಲ್ಲಿ ವಿದ್ಯುತ್ ಉತ್ಪಾದಿಸುತ್ತಿದ್ದಾರೆ. ಅಲ್ಲದೇ ಗುತ್ತಿಗೆ ಪಡೆದ ರೈತರ ಪ್ರತಿ ಎಕರೆಗೆ ವರ್ಷಕ್ಕೆ ₹25 ಸಾವಿರಗಳನ್ನು ಒದಗಿಸುತ್ತಿದೆ. ಆಸಕ್ತಿ ಹೊಂದಿರುವ ಸ್ವಉದ್ಯೋಗಿಗಳು ಕಡಿಮೆ ದರದಲ್ಲಿ ಹೆಚ್ಚಿನ ಆದಾಯ ಗಳಿಸಬಹುದು ಎಂದರು.

ಪ್ರಸ್ತುತ ಇಂಜಿನಿಯರ್ ವಿದ್ಯಾರ್ಥಿಗಳು ಇಂಧನ ಕ್ಷೇತ್ರದಲ್ಲಿ ಸ್ವಉದ್ಯೋಗ ಕೈಗೊಳ್ಳಲು ಇದೊಂದು ಸುವರ್ಣಾವಕಾಶವಿದೆ. ಶೇ.20 ರಷ್ಟು ಬಂಡವಾಳ ಹೂಡಿಸಿದರೆ ಶೇ.80 ರಷ್ಟು ಸಹಾಯಧನವನ್ನು ಸರ್ಕಾರ ಒದಗಿಸುವ ಮುಖಾಂತರ ಉದ್ಯೋಗಿಗಳು ಸಮಾಜಕ್ಕೆ ದೊಡ್ಡ ಆಸ್ತಿಯನ್ನಾಗಿ ಹೊರ ಹೊಮ್ಮಬಹುದು ಎಂದು ಹೇಳಿದರು.

ರಾಜ್ಯ ಪರಿಸರ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ ಎ.ಎನ್.ಮಹೇಶ್ ಮಾತನಾಡಿ, ರಾಜ್ಯದ ವಿವಿಧ ಅಸಾಂಪ್ರದಾಯಿಕ ಮತ್ತು ನವೀಕರಿಸಬಹುದಾದ ಇಂಧನ ಮೂಲಗಳ ಅನ್ವಯಗಳನ್ನು ಜನಪ್ರಿಯ ಗೊಳಿಸಲು ಅಗತ್ಯ ನೀತಿಗಳು ಮತ್ತು ಕಾರ್ಯಕ್ರಮ ರೂಪಿಸುವ ಜವಾಬ್ದಾರಿ ನವೀಕರಿಸಬಹುದಾದ ಇಂಧನ ಇಲಾಖೆ ಹೊಂದಿದೆ ಎಂದರು.ಕಾರ್ಯಕ್ರಮದಲ್ಲಿ ಎಐಟಿ ಕಾಲೇಜು ಆಡಳಿತ ಮಂಡಳಿ ನಿರ್ದೇಶಕ ಡಾ. ಸಿ.ಕೆ.ಸುಬ್ಬರಾಯ, ಪ್ರಾಂಶು ಪಾಲ ಡಾ. ಸಿ.ಟಿ.ಜಯದೇವ್, ಆಡಳಿತ ಮಂಡಳಿ ಸದಸ್ಯ ಕೆ.ಮೋಹನ್, ಮೆಕ್ಯಾನಿಕಲ್ ಇಂಜಿನಿಯರ್ ವಿಭಾಗದ ಮುಖ್ಯಸ್ಥ ಡಾ.ಜೆ.ಎಂ.ಸತ್ಯನಾರಾಯಣ, ಎಚ್‍ಓಡಿ ಸತ್ಯನಾರಾಯಣ, ಜಿಲ್ಲಾ ಒಕ್ಕಲಿಗರ ಸಂಘದ ಗೌರವ ಕಾರ್ಯದರ್ಶಿ ಮಾಡ್ಲಾ ಪ್ರಕಾಶ್ ಉಪಸ್ಥಿತರಿದ್ದರು. 11 ಕೆಸಿಕೆಎಂ 1ಚಿಕ್ಕಮಗಳೂರಿನ ಎಐಟಿ ಕಾಲೇಜಿನಲ್ಲಿ ಸೋಮವಾರ ನಡೆದ ಭವಿಷ್ಯದಲ್ಲಿ ನವೀಕರಿಸಬಹುದಾದ ಇಂಧನ ಸಂಪನ್ಮೂಲಗಳ ಕುರಿತ ಕಾರ್ಯಾಗಾರವನ್ನು ನವೀಕರಿಸಬಹುದಾದ ಇಂಧನ ಅಭಿವೃದ್ಧಿ ನಿಗಮದ ಅಧ್ಯಕ್ಷ ಶಾಸಕ ಟಿ.ಡಿ.ರಾಜೇಗೌಡ ಉದ್ಘಾಟಿಸಿದರು. ಎ.ಎನ್‌. ಮಹೇಶ್‌, ಡಾ. ಜಯದೇವ್‌, ಡಾ. ಸುಬ್ಬರಾಯ, ಕೆ. ಮೋಹನ್‌, ಡಾ. ಜೆ.ಎಂ. ಸತ್ಯನಾರಾಯಣ ಇದ್ದರು.