ಸಾರಾಂಶ
ಕನ್ನಡಪ್ರಭ ವಾರ್ತೆ ತುಮಕೂರುನಿರಂತರ ಕಲಿಕೆ, ಗ್ರಾಹಕರೊಂದಿಗೆ ಸ್ಪಂದಿಸಿ ಶಿಸ್ತಿನ ವ್ಯವಹಾರ ನಡೆಸಿದರೆ ಸಹಕಾರಿ ಕ್ಷೇತ್ರದಲ್ಲಿ ಯಶಸ್ಸು ಕಾಣಬಹುದು ಎಂದು ರಾಜ್ಯ ಸಂಯುಕ್ತ ಸಹಕಾರಿ ವ್ಯವಸ್ಥಾಪಕ ನಿರ್ದೇಶಕ ಶರಣಗೌಡ ಜಿ.ಪಾಟೀಲ್ ಹೇಳಿದರು.ನಗರದ ಶಿವಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ಸಭಾಂಗಣದಲ್ಲಿ ಶನಿವಾರ ಏರ್ಪಡಿಸಿದ್ದ ತರಬೇತಿ ಶಿಬಿರ ಉದ್ಘಾಟಿಸಿ ಮಾತನಾಡಿದರು.ಸಹಕಾರಿ ಸಂಸ್ಥೆಯ ಆರ್ಥಿಕ ಚಟುವಟಿಕೆ ಜೊತೆಗೆ ಸಂಸ್ಥೆಯ ಸಿಬ್ಬಂದಿಯ ಅಭಿವೃದ್ಧಿಯೂ ಮುಖ್ಯವಾಗಬೇಕು. ಅಭಿವೃದ್ಧಿ ಚಿಂತನೆಗೆ ಎಲ್ಲವೂ ಒಂದಕ್ಕೊಂದು ಸಹಕಾರಿಯಾಗುತ್ತವೆ. ಸಹಕಾರ ಕ್ಷೇತ್ರಗಳಲ್ಲಿ ಆಗುತ್ತಿರುವ ಬದಲಾವಣೆ, ಹೊಸ ಕಾಯ್ದೆಗಳ ಬಗ್ಗೆ ಅರಿವು ಬೆಳೆಸಿಕೊಂಡಾಗ ಸಹಕಾರಿ ಸಂಸ್ಥೆಗಳ ಸಿಬ್ಬಂದಿ ಸಮರ್ಥವಾಗಿ ಕರ್ತವ್ಯ ನಿರ್ವಹಿಸಲು ಸಾಧ್ಯವಾಗುತ್ತದೆ ಎಂದರು.ಸಹಕಾರಿ ಕ್ಷೇತ್ರಗಳ ಸಿಬ್ಬಂದಿ ಮೊದಲಿಗೆ ತಮ್ಮ ಸಾಮರ್ಥ್ಯ ಗುರುತಿಸಿಕೊಳ್ಳಬೇಕು, ಕೊರತೆ ಎನಿಸಿದರೆ ಸುಧಾರಿಸಿಕೊಳ್ಳಲು ಸಹಕಾರ ಕ್ಷೇತ್ರದ ಬೆಳವಣಿಗೆಗೆಅಗತ್ಯವಿರುವಮಾಹಿತಿಯ ಅಧ್ಯಯನ ಮಾಡಬೇಕು, ಆತ್ಮವಿಶ್ವಾಸ, ವೃತಿ ಕೌಶಲ್ಯ ಮೂಡಿಸಿಕೊಂಡು ಕೆಲಸ ಮಾಡಿದಾಗ ಸಂಸ್ಥೆಯೊಂದಿಗೆ ತಾವೂ ಬೆಳೆಯಲು ಸಾಧ್ಯವಾಗುತ್ತದೆ. ವೃತ್ತಿ ಬದುಕಿಗೆ ಬಂದ ಮೇಲೆ ಕಲಿಕೆ ಮುಗಿಯಿತು ಎಂದುಕೊಳ್ಳುವುದು ಸರಿಯಲ್ಲ, ವಿದ್ಯಾರ್ಥಿ ಮನಸ್ಥಿತಿಯಲ್ಲಿ ತಮ್ಮ ಕಲಿಕೆ ನಿರಂತರವಾಗಿದ್ದರೆ ಯಶಸ್ಸು ಸದಾ ಜೊತೆಗಿರುತ್ತದೆ ಎಂದು ತಿಳಿಸಿದರು.ಸಹಕಾರ ಕ್ಷೇತ್ರದಲ್ಲಿ ಗ್ರಾಹಕರ ಪಾತ್ರ ಪ್ರಮುಖ. ಗ್ರಾಹಕರೊಂದಿಗೆ ಸ್ಪಂದಿಸಿ ವ್ಯವಹರಿಸಬೇಕು. ನೀವು ಮಾಡುವ ಕೆಲಸ ನಿಮಗೆ ತೃಪ್ತಿ ನೀಡುವಂತಾದರೆ ಗ್ರಾಹಕರೂ ತೃಪ್ತರಾಗುತ್ತಾರೆ ಎಂಬ ಪ್ರಯತ್ನದಲ್ಲಿ ಕರ್ತವ್ಯನಿಷ್ಠೆ, ಕ್ರಿಯಾಶೀಲತೆ, ಪ್ರಾಮಾಣಿಕತೆಯನ್ನು ವೃತ್ತಿಯಲ್ಲಿ ಅಳವಡಿಸಿಕೊಳ್ಳಬೇಕು ಎಂದು ಶರಣಗೌಡ ಜಿ.ಪಾಟೀಲ್ ಹೇಳಿದರು.ಶಿವಶ್ರೀ ಸೌಹಾರ್ದ ಪತ್ತಿನ ಸಹಕಾರಿ ಸಂಘದ ನಿಯಮಿತದ ಅಧ್ಯಕ್ಷ ಹೆಚ್.ಎಸ್.ಭಸ್ಮಾಂಗಿ ರುದ್ರಯ್ಯ, ಉಪಾಧ್ಯಕ್ಷ ಕೆ.ಎಸ್.ಉಮೇಶ್ಕುಮಾರ್, ನಿರ್ದೇಶಕರಾದ ಟಿ.ಆರ್.ಸದಾಶಿವಯ್ಯ, ಜಿ.ಸಿ.ವಿರೂಪಾಕ್ಷ, ಟಿ.ಎಸ್.ಕರುಣಾರಾಧ್ಯ, ಆರ್.ಎಸ್.ರಘು, ಎಸ್.ಮಂಜುನಾಥ್, ನಟರಾಜು, ವೀರಭದ್ರಸ್ವಾಮಿ, ಟಿ.ಎಸ್.ಹರೀಶ್, ಎಸ್.ಓಂಕಾರಸ್ವಾಮಿ, ಡಿ.ಆರ್.ಸತೀಶ್, ವೈ.ಕೆ.ಜ್ಯೋತಿ, ಎಂ.ಜಿ.ಪೂರ್ಣಿಮಾ ಎಂ.ಕರಿಬಸವಯ್ಯ, ಮಂಜುನಾಥ್, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಜಿ.ವಿ.ಗಾಯತ್ರಿ ಸೇರಿದಂತೆ ಸಂಘದ ವಿವಿಧ ಶಾಖೆಗಳ ಸಿಬ್ಬಂದಿ ಭಾಗವಹಿಸಿದ್ದರು.