ಸಾರಾಂಶ
ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಡಾ. ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಚೆಸ್ ಪಂದ್ಯಾವಳಿ ನಡೆಯಿತು.
ಹುಬ್ಬಳ್ಳಿ:
ಚೆಸ್ ಜೀವನದಲ್ಲಿ ಯಶಸ್ಸು ಗಳಿಸುವುದು ಹೇಗೆ ಎನ್ನುವುದನ್ನು ಕಲಿಸಿಕೊಡುತ್ತದೆ. ಹಾಗಾಗಿ ಎಲ್ಲರೂ ಚೆಸ್ ಆಡಬೇಕು ಎಂದು ಸ್ವರ್ಣಾ ಗ್ರುಪ್ನ ವ್ಯವಸ್ಥಾಪಕ ವಿ.ಎಸ್.ವಿ. ಪ್ರಸಾದ ಹೇಳಿದರು.ಅವರು ಇಲ್ಲಿನ ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಶನಿವಾರ ರೋಟರಿ ಕ್ಲಬ್ ಹುಬ್ಬಳ್ಳಿ ಉತ್ತರ ಆರ್ಐಡಿ 3170, ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯ ಹುಬ್ಬಳ್ಳಿ ಹಾಗೂ ಧಾರವಾಡ ಜಿಲ್ಲಾ ಚೆಸ್ ಅಸೋಸಿಯೇಷನ್ ಸಹಯೋಗದಲ್ಲಿ ಕೆಎಲ್ಇ ತಾಂತ್ರಿಕ ಮಹಾವಿದ್ಯಾಲಯದ ಡಾ. ಪ್ರಭಾಕರ ಕೋರೆ ಒಳಾಂಗಣ ಕ್ರೀಡಾಂಗಣದಲ್ಲಿ ಹಮ್ಮಿಕೊಳ್ಳಲಾಗಿದ್ದ ಎರಡು ದಿನಗಳ ಚೆಸ್ ಪಂದ್ಯಾವಳಿ ಉದ್ಘಾಟಿಸಿ ಮಾತನಾಡಿದರು.
ಉಪ ಕುಲಪತಿ ಪ್ರೊ. ಅಶೋಕ ಶೆಟ್ಟರ, ಆಟಗಾರರಿಗೆ ಶುಭ ಹಾರೈಸಿದರು. ರೋಟರಿ ಮಾಜಿ ಗವರ್ನರ್ ಆನಂದ ಕುಲಕರ್ಣಿ ಮಾತನಾಡಿದರು.ರೋಟರಿ ಕ್ಲಬ್ ಹುಬ್ಬಳ್ಳಿ ಉತ್ತರದ ಕಾರ್ಯದರ್ಶಿ ಪ್ರಕಾಶ ಇರಕಲ್, ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯದ ಜಿಮ್ಖಾನ್ ವಿಭಾಗದ ಚೇರಮನ್ ಪ್ರೊ. ವಿಜಯಕುಮಾರ ನಿಂಬಗಲ್, ರೋಟರಿ ಕ್ಲಬ್ ಉತ್ತರದ ಅಧ್ಯಕ್ಷ ನಾಗರಾಜ ಶೆಟ್ಟಿ, ಗಿರೀಶ ಪಾಟೀಲ, ಧಾರವಾಡ ಜಿಲ್ಲಾ ಚೆಸ್ ಅಸೋಶಿಯೇಷನ್ ಅಧ್ಯಕ್ಷ ಡಾ. ಅರವಿಂದ ಏರಿ ಸೇರಿದಂತೆ ಹಲವರಿದ್ದರು. ಶನಿವಾರ ಮತ್ತು ಭಾನುವಾರ ನಡೆಯಲಿರುವ ಈ ಪಂದ್ಯಾವಳಿಯಲ್ಲಿ ದೇಶದ 400ಕ್ಕೂ ಹೆಚ್ಚು ಕ್ರೀಡಾಪಟುಗಳು ಸ್ಫರ್ಧೆಯಲ್ಲಿ ಭಾಗವಹಿಸಿದ್ದಾರೆ.