ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸಿದರೆ ಯಶಸ್ಸು ಖಚಿತ: ಶ್ರೀನಿವಾಸ್

| Published : Mar 09 2025, 01:46 AM IST

ಪರೀಕ್ಷೆಯನ್ನು ಹಬ್ಬದಂತೆ ಸ್ವೀಕರಿಸಿದರೆ ಯಶಸ್ಸು ಖಚಿತ: ಶ್ರೀನಿವಾಸ್
Share this Article
  • FB
  • TW
  • Linkdin
  • Email

ಸಾರಾಂಶ

ನಿದ್ರೆ, ಆಹಾರ ಬಿಟ್ಟು ಓದದೆ ಖರೀದ ಪದಾರ್ಥ, ಹಬ್ಬದೂಟ ಎಂದು ಅತಿಯಾದ ಸೇವನೆ ಮಾಡದೆ ಸಕಾರಾತ್ಮಕ ಚಿಂತನೆಯೊಂದಿಗೆ ಯೋಗ, ಧ್ಯಾನ ಮೈಗೂಢಿಸಿಕೊಂಡು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು. ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮದಿಂದ ಸ್ವೀಕರಿಸಿದರೆ ಯಶಸ್ಸು ಖಚಿತ.

ಕನ್ನಡಪ್ರಭ ವಾರ್ತೆ ಕಿಕ್ಕೇರಿ

ಪರೀಕ್ಷೆಯನ್ನು ಹಬ್ಬದಂತೆ ಸಂಭ್ರಮದಿಂದ ಸ್ವೀಕರಿಸಿದರೆ ಯಶಸ್ಸು ಖಚಿತ ಎಂದು ಪಾಂಡವಪುರ ಉಪವಿಭಾಗಾಧಿಕಾರಿ ಶ್ರೀನಿವಾಸ್ ತಿಳಿಸಿದರು.

ಪಟ್ಟಣದ ಕೇಂಬ್ರಿಡ್ಜ್ ಶಾಲೆಯಲ್ಲಿ ಎಸ್ಸೆಸ್ಸೆಲ್ಸಿ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಪ್ರೇರಣಾ ತರಬೇತಿ ಶಿಬಿರದಲ್ಲಿ ಮಾತನಾಡಿ, ಸಮಯಕ್ಕೆ ಒತ್ತು ನೀಡಿ ಪರೀಕ್ಷೆ ಭಯ ಕಾಡದಂತೆ ಕಲಿತಷ್ಟು ಬರೆಯುವ ಜಾಣ್ಮೆ ರೂಢಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು.

ನಿದ್ರೆ, ಆಹಾರ ಬಿಟ್ಟು ಓದದೆ ಖರೀದ ಪದಾರ್ಥ, ಹಬ್ಬದೂಟ ಎಂದು ಅತಿಯಾದ ಸೇವನೆ ಮಾಡದೆ ಸಕಾರಾತ್ಮಕ ಚಿಂತನೆಯೊಂದಿಗೆ ಯೋಗ, ಧ್ಯಾನ ಮೈಗೂಢಿಸಿಕೊಂಡು ಪರೀಕ್ಷೆಯನ್ನು ಧೈರ್ಯವಾಗಿ ಎದುರಿಸಬೇಕು ಎಂದರು.

ಪರೀಕ್ಷೆಗೆ ಸಾಕಷ್ಟು ಸಮಯವಿದೆ. ಗಲಿಬಿಲಿಗೊಳ್ಳದೆ ಕಲಿತಷ್ಟು ಸ್ಪಷ್ಟವಾಗಿ ಬರೆಯುವುದನ್ನು ಕಲಿತರೆ ಜ್ಞಾಪಕದಲ್ಲಿ ಹೆಚ್ಚು ಉಳಿಯಲಿದೆ. ನಿಮ್ಮಲ್ಲಿ ಅಗಾಧ ಪ್ರತಿಭೆ ಇದೆ. ಅಂಜಿಕೆ ಬಿಟ್ಟು ಸಣ್ಣ ಅನುಮಾನವಿದ್ದರೂ ತಪ್ಪದೆ ಶಿಕ್ಷಕರನ್ನು ಕೇಳಿ ಪಠ್ಯ ವಿಷಯದಲ್ಲಿ ಬಗೆಹರಿಸಿಕೊಳ್ಳಬೇಕು ಎಂದರು.

ಬಿಇಒ ವೈ.ಕೆ.ತಿಮ್ಮೇಗೌಡ ಮಾತನಾಡಿ, ಹೋಬಳಿಯಲ್ಲಿ ಈ ಬಾರಿ 529 ವಿದ್ಯಾರ್ಥಿಗಳು ಸೇರಿದಂತೆ ತಾಲೂಕಿನಲ್ಲಿ ಒಟ್ಟು 2695 ವಿದ್ಯಾರ್ಥಿಗಳು ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯುತ್ತಿದ್ದಾರೆ. ವಿದ್ಯಾರ್ಥಿಗಳಿಗೆ ಮನೆಮನೆಗೆ ತೆರಳಿ ಪೋಷಕರು ಮಕ್ಕಳ ಓದಿಗೆ ಕೈಗೊಂಡಿರುವ ಕ್ರಮ ಕುರಿತು ಚರ್ಚಿಸಿ ಸ್ನೇಹಮಯಿ ವಾತಾವರಣ ಮೂಡಿಸಲಾಗಿದೆ ಎಂದರು.

ಪರೀಕ್ಞೆ ಮುಗಿಯುವವರಿಗೆ ಟಿವಿ, ಮೊಬೈಲ್‌ನಿಂದ ದೂರವಿರಬೇಕು. ಓದಿನ ನಡುವೆ ವಿಶ್ರಾಂತಿಗಾಗಿ ಲಘು ಸಂಗೀತ, ಧ್ಯಾನ ಮಾಡಬೇಕು. ಇದು ಮನಸ್ಸಿಗೆ ಶಕ್ತಿ ನೀಡಲಿದೆ ಎಂದು ತಿಳಿಸಿದರು. ಹೋಬಳಿಯ ಕೃಷ್ಣಾಪುರ, ಸಾಸಲು ಮಾದಾಪುರ, ಐಕನಹಳ್ಳಿ, ಆನೆಗೊಳ ಸೇರಿದಂತೆಒಟ್ಟು 10 ಪ್ರೌಢಶಾಲೆಯ ವಿದ್ಯಾರ್ಥಿಗಳು ಶಿಬಿರದಲ್ಲಿ ಭಾಗವಹಿಸಿ ತಮ್ಮ ಸಂದೇಹ ಬಗೆಹರಿಸಿಕೊಂಡರು.

ಈ ವೇಳೆ ಶಿಕ್ಷಣ ಸಂಯೋಜಕರಾದ ನವೀನ್‌ಕುಮಾರ್, ಹರೀಶ್, ವೀರಭದ್ರಯ್ಯ, ಕೃಷ್ಣನಾಯಕ್, ಕೆಪಿಎಸ್ ಶಾಲಾ ಉಪಪ್ರಾಂಶುಪಾಲ ಚಲುವನಾರಾಯಣಸ್ವಾಮಿ, ಪ್ರೌಢಶಾಲಾ ಸಹಶಿಕ್ಷಕ ಸಂಘದ ತಾಲೂಕು ಅಧ್ಯಕ್ಷಎಸ್.ಎಂ. ಬಸವರಾಜು, ಮುಖ್ಯ ಶಿಕ್ಷಕರಾದ ಮಮತಾ, ದೀಪಾ ಇದ್ದರು.