ಕ್ರಿಯಾಶೀಲವಾಗಿ ಮುನ್ನಡೆದರೆ ಯಶಸ್ಸು ಸಾಧ್ಯ: ಶಿವರಾಮ ಹೆಬ್ಬಾರ

| Published : Nov 17 2025, 01:30 AM IST

ಸಾರಾಂಶ

ಸಂಘಟನೆ ದೃಢ ಸಂಕಲ್ಪದಿಂದ ಕ್ರಿಯಾಶೀಲವಾಗಿ ಮುನ್ನಡೆದರೆ ಯಶಸ್ಸು ಸಾಧ್ಯವಾಗುತ್ತದೆ.

ನೌಕರರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನೆ ನೆರವೇರಿಸಿದ ಶಾಸಕಕನ್ನಡಪ್ರಭ ವಾರ್ತೆ ಯಲ್ಲಾಪುರ

ಅಧಿಕಾರಿಗಳು, ಜನಪ್ರತಿನಿಧಿಗಳು ಒಗ್ಗಟ್ಟಾದರೆ ಮಾತ್ರ ಅಭಿವೃದ್ಧಿ ಕೆಲಸ ಸರಳವಾಗುತ್ತದೆ. ಸಂಘಟನೆ ದೃಢ ಸಂಕಲ್ಪದಿಂದ ಕ್ರಿಯಾಶೀಲವಾಗಿ ಮುನ್ನಡೆದರೆ ಯಶಸ್ಸು ಸಾಧ್ಯವಾಗುತ್ತದೆ. ಸಂಘರ್ಷ ಇಲ್ಲದ ಸಂಘದ ರಾಜ್ಯಾಧ್ಯಕ್ಷ ಷಡಾಕ್ಷರಿ ಅವರ ನಾಯಕತ್ವದಿಂದ ನೌಕರರ ಸಂಘ ಬಲಿಷ್ಠವಾಗಿದೆ. ಸಮಾಜದ ಎಲ್ಲರ ಆಶೋತ್ತರಗಳನ್ನು ಈಡೇರಿಸುವ ಕಟ್ಟಡ ಇಲ್ಲಿ ಬೇಗ ತಲೆಎತ್ತಿ ನಿಲ್ಲಬೇಕು ಎಂದು ಶಾಸಕ ಶಿವರಾಮ ಹೆಬ್ಬಾರ ಹೇಳಿದರು.

ಶನಿವಾರ ರಾತ್ರಿ ಪಟ್ಟಣದ ನೌಕರರ ಸಂಘದ ಆವರಣದಲ್ಲಿ ನೌಕರರ ಸಂಘದ ನೂತನ ಕಟ್ಟಡದ ಶಂಕುಸ್ಥಾಪನಾ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು. ನೂತನ ಕಟ್ಟಡದ ಕಾಮಗಾರಿಗೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ ₹೧೦ ಲಕ್ಷ ನೀಡುವುದಾಗಿ ಘೋಷಿಸಿದರು.

ಕಳೆದ ಹಲವು ವರ್ಷಗಳ ಹಿಂದೆ ಯಲ್ಲಾಪುರದ ದಲಿತ ಮುಖಂಡ ದಿ. ಪಿ.ಟಿ. ಮರಾಠೆ ಅವರ ದೂರದೃಷ್ಟಿ ಮತ್ತು ಬದ್ಧತೆ ಇಂತಹ ಮಹಾಕಾರ್ಯಕ್ಕೆ ಪಟ್ಟಣದ ಹೃದಯಭಾಗದಲ್ಲಿ ಭೂಮಿ ಉಳಿಸಿದಂತಾಗಿದೆ ಎಂದರು.

ಅಧ್ಯಕ್ಷತೆ ವಹಿಸಿದ್ದ ನೌಕರ ಸಂಘದ ರಾಜ್ಯಾಧ್ಯಕ್ಷ ಸಿ.ಎಸ್. ಷಡಾಕ್ಷರಿ ಮಾತನಾಡಿ, ಅಖಂಡ ಕರ್ನಾಟಕದ ೬ ಕೋಟಿ ಜನರ ಪ್ರತಿನಿಧಿಯಾಗಿ ಎರಡನೇ ಬಾರಿ ಕಳೆದ ಆರು ವರ್ಷದಿಂದ ಕೆಲಸ ಮಾಡುವ ಮೂಲಕ ನೌಕರರಿಗೆ ನ್ಯಾಯ ಕೊಡಿಸುವ ಕೆಲಸ ಮಾಡುತ್ತಿದ್ದೇನೆ. ಸರ್ಕಾರ ಹಾಗೂ ಸಂಘಟನೆಯಿಂದ ನೌಕರ ಸಂಘದ ನೂತನ ಕಟ್ಟಡಕ್ಕೆ ₹೨೫ ಲಕ್ಷ ಕೊಡುವ ಪ್ರಯತ್ನ ಮಾಡುತ್ತೇನೆ. ಸಿಬ್ಬಂದಿ ಕೊರತೆ, ಸರಕಾರದ ವಿವಿಧ ಯೋಜನೆಗಳ ಅನುಷ್ಠಾನಕ್ಕಾಗಿ ನೌಕರರು ಒತ್ತಡದಲ್ಲಿ ಕೆಲಸ ಮಾಡಬೇಕಾಗಿದೆ. ಅಫಘಾತದಲ್ಲಿ ನೌಕರ ಮೃತನಾದರೆ ಒಂದು ಕೋಟಿ ಪರಿಹಾರ ನೀಡಲಾಗುತ್ತದೆ. ₹೨೫ ಲಕ್ಷ ನೌಕರ ಬಂಧುಗಳಿಗೆ ಆರೋಗ್ಯ ವಿಮೆ ಜಾರಿಗೆ ಬಂದಿದೆ. ನೌಕರರ ಪರವಾಗಿ ಸಂಘಟನೆ ಬದ್ಧತೆಯಿಂದ ಕೆಲಸ ಮಾಡುತ್ತಿದೆ. ನೌಕರರ ಸ್ನೇಹಿ ಕೆಲಸ ಮಾಡಲಾಗುತ್ತದೆ. ಓ.ಪಿ.ಎಸ್ ಆಗುವುದಕ್ಕೆ ಸಂಘಟನೆ ಎಲ್ಲ ರೀತಿಯ ಪ್ರಯತ್ನ ಮಾಡುತ್ತದೆ ಎಂಬ ಭರವಸೆ ನೀಡಿದರು.

ವಿಧಾನಪರಿಷತ್ ಸದಸ್ಯ ಎಸ್.ವಿ. ಸಂಕನೂರು ಮಾತನಾಡಿ, ನೀತಿ, ಪ್ರೀತಿ, ಜಾಣ್ಮೆ ಇದ್ದರೆ ಮಾತ್ರ ಸಂಘಟನೆ ಯಶಸ್ವಿಯಾಗಲು ಸಾಧ್ಯ. ನೌಕರರ ಪ್ರಮುಖ ಬೇಡಿಕೆಯಾದ ಎನ್.ಪಿ.ಎಸ್ ರದ್ದುಪಡಿಸಿ ಓ.ಪಿ.ಎಸ್ ತರುವುದಕ್ಕೆ ನಾವು ಬದ್ದರಾಗಿದ್ದೇವೆ. ನೌಕರಎ ಸಂಘದ ನೂತನ ಕಟ್ಟಡ ಕಾಮಗಾರಿಗೆ ₹೫ ಲಕ್ಷ ಮೊದಲ ಹಂತದಲ್ಲಿ ನೀಡುವುದಾಗಿ ಭರವಸೆ ನೀಡಿದರು.

ಹೆಚ್ಚುವರಿ ಪೋಲೀಸ್ ಅಧೀಕ್ಷಕ ಎಂ.ಜಗದೀಶ ಮಾತನಾಡಿದರು. ಸಂಘದ ರಾಜ್ಯ ಗೌರವಾಧ್ಯಕ್ಷ ಬಸವರಾಜ, ವಿವಿಧ ಸಂಘಟನೆಯ ಪ್ರಮುಖರಾದ ಮಲ್ಲಿಕಾರ್ಜುನ ಬಳ್ಳಾರಿ, ಸಿದ್ದನಗೌಡ ಧಾರವಾಡ, ಮೋಹನ ಕುಮಾರ, ಸಂಜೀವಕುಮಾರ ನಾಯ್ಕ, ಕಿರಣಕುನಾರ ನಾಯ್ಕ, ವಿಜಯ ಮಿರಾಶಿ, ಆರ್.ಆರ್. ಭಟ್ಟ, ನಾರಾಯಣ ನಾಯಕ, ಎಸ್.ಆರ್. ನಾಯ್ಕ, ಅಜೇಯ ನಾಯ್ಕ, ಚಂದ್ರಶೇಖರ ಎಸ್.ಸಿ., ತಹಶೀಲ್ದಾರ ಚಂದ್ರಶೇಖರ ಹೊಸ್ಮನಿ, ಕ್ಷೇತ್ರ ಶಿಕ್ಷಣಾಧಿಕಾರಿ ರೇಖಾ ನಾಯ್ಕ, ನೌಕರ ಸಂಘದ ಪದಾಧಿಕಾರಿಗಳು ಭಾಗವಹಿಸಿದ್ದರು.

ಇದಕ್ಕೂ ಮುನ್ನ ವೇದಿಕೆಯಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮ ಜರುಗಿತು. ಗಿನ್ನಿಸ್ ದಾಖಲೆ ಬರೆದ ಕುಮಾರಿ ತನುಶ್ರೀ ಉಡುಪಿ ಅವರಿಂದ ಯೋಗ ನೃತ್ಯ ನೋಡುಗರ ಗಮನ ಸೆಳೆಯಿತು. ಸ್ಥಳೀಯ ಸರ್ಕಾರಿ ನೌಕರರು ಹಾಗೂ ಶಾಲಾ ಮಕ್ಕಳು ತಮ್ಮ ಕಲೆ ಪ್ರದರ್ಶಿಸಿದರು. ಇದೇ ಸಂದರ್ಭ ಮಾಜಿ ಅಧ್ಯಕ್ಷರನ್ನು ಸನ್ಮಾನಿಸಲಾಯಿತು. ನೌಕರರ ಮಕ್ಕಳಿಗೆ ಪ್ರತಿಭಾ ಪುರಸ್ಕಾರ ನೀಡಲಾಯಿತು.

ಶಿಕ್ಷಕಿ ಸುವರ್ಣಲತಾ ಪ್ರಾರ್ಥಿಸಿದರು. ಸಂಘದ ತಾಲೂಕಾ ಅಧ್ಯಕ್ಷ ಸಂಜೀವಕುಮಾರ ಹೊಸ್ಕೇರಿ ಸ್ವಾಗತಿಸಿ, ಪ್ರಸ್ತಾಪಿಸಿದರು. ಶಿಕ್ಷಣ ಸಂಯೋಜಕ ಸುಧಾಕರ ನಾಯಕ, ಸಿಆರ್‌ಪಿ ಚಂದ್ರಹಾಸ ನಾಯ್ಕ ನಿರ್ವಹಿಸಿದರು.