ಸಾರಾಂಶ
ಕನ್ನಡಪ್ರಭ ವಾರ್ತೆ ಮದ್ದೂರು
ನಾಲೆಯಲ್ಲಿ ಏಕಾಏಕಿ ನೀರು ಬಿಟ್ಟ ಪರಿಣಾಮ ಕಟಾವು ಮಾಡಿದ್ದ ಭತ್ತದ ಬೆಳೆ ನಾಶವಾಗಿರುವ ಘಟನೆ ತಾಲೂಕಿನ ಕೊಪ್ಪ ಹೋಬಳಿ ಅವೇರಹಳ್ಳಿಯಲ್ಲಿ ಶುಕ್ರವಾರ ರಾತ್ರಿ ಜರುಗಿದೆ.ಕಾವೇರಿ ನೀರಾವರಿ ನಿಗಮದ ಅಧಿಕಾರಿಗಳು ಮತ್ತು ಸವಡೆಗಳ ನಿರ್ಲಕ್ಷದಿಂದ ಗ್ರಾಮದ ರೈತರ ಜಮೀನಿನಲ್ಲಿ ಭತ್ತದ ಬೆಳೆ ನೀರಿನಿಂದ ತೋಯ್ದು ಹೋಗಿ ಲಕ್ಷಾಂತರ ಹಾನಿ ಸಂಭವಿಸಿದೆ ಎಂದು ಅಂದಾಜು ಮಾಡಲಾಗಿದೆ.
ಗ್ರಾಮದ ಭಾಗ್ಯಮ್ಮ, ರಮೇಶ, ಸತೀಶ, ರಾಜ ಸೇರಿದಂತೆ ಹಲವು ರೈತರ ಕಟಾವ್ ಮಾಡಿದ್ದ ಭತ್ತದ ಬೆಳೆ ನಾಶವಾಗಿದೆ. ಕೊಪ್ಪ ಹೋಬಳಿ ಮಾರಂಗೆರೆ ಕೆರೆ ತುಂಬಿಸಲು ವಿ.ಸಿ.ನಾಲೆ ನೀರನ್ನು ಹರಿಯ ಬಿಡಲಾಗಿತ್ತು. ನಾಲೆಯಲ್ಲಿ ಹೆಚ್ಚುವರಿ ಯಾಗಿ ಹರಿದ ನೀರು ರೈತರ ಜಮೀನುಗಳಿಗೆ ನುಗ್ಗಿದ ಪರಿಣಾಮ ಈ ಅನಾಹುತ ಸಂಭವಿಸಿದೆ.ಬೆಳೆ ಹಾನಿಯಿಂದ ರೊಚ್ಚಿಗೆದ್ದ ರೈತರು ಗುಂಪೊಂದು ಕೊಪ್ಪ ಗ್ರಾಮದ ಕಾವೇರಿ ನೀರಾವರಿ ನಿಗಮದ ಉಪಕಚೇರಿಗೆ ಕೆಲವು ರೈತರು ಮುತ್ತಿಗೆ ಹಾಕಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಳ್ಳಲು ಮುಂದಾದರು. ಆದರೆ, ಶನಿವಾರದ ರಜೆ ಇದ್ದ ಕಾರಣ ಅಧಿಕಾರಿಗಳು ಕಚೇರಿಯಲ್ಲಿ ಲಭ್ಯವಿರಲಿಲ್ಲ. ದೂರವಾಣಿ ಮೂಲಕ ಅಧಿಕಾರಿಗಳ ಸಂಪರ್ಕಿಸಿದ ರೈತರು ಹಾನಿಯಾಗಿರುವ ಭತ್ತದ ಫಸಲಿಗೆ ಸೂಕ್ತ ಪರಿಹಾರ ನೀಡಬೇಕು. ಇಲ್ಲವಾದಲ್ಲಿ ಕಚೇರಿಗೆ ಬೀಗ ಹಾಕಿ ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದರು.
ಇಂದು ಮಾಜಿ ಸಿಎಂ ಎಸ್ಎಂಕೆ ಅಭಿಮಾನಿಗಳ ಸಭೆಮಂಡ್ಯ:
ಮಂಡ್ಯ ಜಿಲ್ಲೆಯಲ್ಲಿ ಜನಿಸಿ ನಾಡಿನ ಹೆಮ್ಮೆಯ ನಾಯಕರಾಗಿ ಬೆಳೆದ ಎಸ್.ಎಂ.ಕೃಷ್ಣ ಅವರ ಅಗಲಿಕೆಯ ಸಂದರ್ಭದಲ್ಲಿ ಅವರ ರಾಜಕೀಯದ ಮೇರು ಪರ್ವತವೆರಲ್ಲು ಅಡಿಗಲ್ಲು ಆಗಿದ್ದ ನಗರದಲ್ಲಿ ಅವರಿಗೆ ಅರ್ಥಪೂರ್ಣ ಹಾಗೂ ವಿಭಿನ್ನ ರೀತಿಯ ಭಾವಪೂರ್ಣ ನಮನ ಕಾರ್ಯಕ್ರಮ ರೂಪಿಸಲು ನಿರ್ಧರಿಸಲಾಗಿದೆ.ಇದರ ಅಂಗವಾಗಿ ಅವರ ಹಿತೈಷಿಗಳು, ಒಡನಾಡಿಗಳು ಹಾಗೂ ಅಭಿಮಾನಿಗಳ ಅಭಿಪ್ರಾಯ ಸಂಗ್ರಹಿಸಲು ನಗರದ ಹರಿಪ್ರಿಯ ಹೋಟೆಲ್ ಚಾಣಕ್ಯ ಸಭಾಂಗಣದಲ್ಲಿ ಡಿ.29ರ ಬೆಳಗ್ಗೆ 11ಗಂಟೆಗೆ ಎಸ್.ಎಂ.ಕೃಷ್ಣ ಸಂಸ್ಮರಣ ವೇದಿಕೆಯಿಂದ ಪೂರ್ವಭಾವಿ ಸಭೆ ಕರೆಯಲಾಗಿದೆ. ಕನ್ನಡ ಸಾಹಿತ್ಯ ಸಮ್ಮೇಳನ ಹಾಗೂ ಬೆಳಗಾವಿ ವಿಧಾನಸಭೆ ಅಧಿವೇಶನದ ಕಾರಣದಿಂದ ಎಸ್.ಎಂ.ಕೃಷ್ಣ ಅವರಿಗೆ ನಮನ ಸಲ್ಲಿಸುವ ಕಾರ್ಯ ವಿಳಂಬವಾಗಿದೆ. ಪ್ರಸ್ತುತ ಅವರ ಅಭಿಮಾನಿಗಳ ಅಭಿಪ್ರಾಯ ಪಡೆದು ಜರೂರಾಗಿ ವಿಭಿನ್ನ ರೀತಿಯ ಕಾರ್ಯಕ್ರಮ ಆಯೋಜಿಸಲು ಚಿಂತಿಸಲಾಗಿದೆ. ಆದ್ದರಿಂದ ಕೃಷ್ಣ ಅವರ ಅಭಿಮಾನಿಗಳು ಪೂರ್ವಭಾವಿಗೆ ಸಭೆಗೆ ಆಗಮಿಸಲು ಕೋರಿದೆ.