ಸಾರಾಂಶ
ಕನ್ನಡಪ್ರಭ ವಾರ್ತೆ ತಿಪಟೂರು
ರೈತರು ಕೃಷಿಯಿಂದ ವಿಮುಖವಾಗಲು ಸಾಕಷ್ಟು ಕಾರಣಗಳಿದ್ದರೂ ಸರ್ಕಾರ ರೈತರ ಅಭ್ಯದಯಕ್ಕಾಗಿ ಹಲವು ಯೋಜನೆಗಳನ್ನು ಜಾರಿಗೆ ತಂದಿದ್ದು ಅವು ಪ್ರಾಮಾಣಿಕವಾಗಿ ತಲುಪುವಲ್ಲಿ ವಿರಳವಾಗಿರಬಹುದು ಆದರೆ ಆತ್ಮಹತ್ಯೆಯೊಂದೆ ರೈತರಿಗೆ ಪರಿಹಾರ ಅಲ್ಲ ಎಂದು ಶಾಸಕ ಕೆ.ಷಡಕ್ಷರಿ ರೈತರಿಕೆ ಕಿವಿಮಾತು ಹೇಳಿದರು.ನಗರದ ಕಲ್ಪತರು ಪದವಿ ಪೂರ್ವ ಕಾಲೇಜು ಸಭಾಂಗಣದಲ್ಲಿ ಶನಿವಾರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಹಾಗೂ ರಾಜ್ಯ ರೈತಸಂಘ, ಹಸಿರು ಸೇನೆ ಸಂಯುಕ್ತಾಶ್ರಯದಲ್ಲಿ ಮೊಟ್ಟ ಮೊದಲ ಬಾರಿಗೆ ಆಯೋಜಿಸಿದ್ದ ಕೃಷಿ ಸಾಹಿತ್ಯ ಸಮ್ಮೇಳನ ಮತ್ತು ಕೃಷಿ ವಿಚಾರ ಸಂಕಿರಣವನ್ನು ಉದ್ಘಾಟಿಸಿ ಮಾತನಾಡಿದ ಅವರು, ದೇಶದ ಬೆನ್ನುಲುಬಾದ ರೈತ ದೇಶಕ್ಕೆ ಅನ್ನನೀಡುವ ಅನ್ನದಾತನಾಗಿದ್ದು ಸರ್ಕಾರ ರೈತರಿಗೆ ಬೆಂಬಲವಾಗಿ ನಿಂತು ಹಲವು ಯೋಜನೆಗಳನ್ನು ತಂದಿದೆ. ಆದರೆ ಈ ಯೋಜನೆಗಳು ಅರ್ಹ ರೈತರಿಗೆ ತಲುಪುವಲ್ಲಿ ವಿರಳವಾಗಿದೆ. ಈ ಬಾರಿಯ ಬಜೆಟ್ನಲ್ಲೂ ರೈತರಿಗೆ ಬಡ್ಡಿರಹಿತ ಸಾಲಸೌಲಭ್ಯ ನೀಡಿದೆ. ನಾನು ೪೦ವರ್ಷಗಳಿಂದಲೂ ಸಹಕಾರಿ ಕ್ಷೇತ್ರದಲ್ಲಿ ಸೇವೆ ಮಾಡುತ್ತಿದ್ದು ರೈತರ ಕಷ್ಟಸುಖ ನನಗೂ ತಿಳಿದಿದ್ದು ರೈತರು ಸಂಕಷ್ಟದಲ್ಲಿದ್ದಾಗ ಚಿಂತನೆ ಮಾಡಿ ಬೇಕಾದ ನೆರವು ನೀಡಿದ್ದೇನೆ. ರೈತರಿಗೆ ಮಳೆ ಬಂದರೆ ಬೆಳೆ ಮಳೆ ಇಲ್ಲದಿದ್ದರೆ ಆರ್ಥಿಕ ನಷ್ಟ ಅನುಭವಿಸಿ ಆತ್ಮಹತ್ಯೆಯತ್ತ ಮುಖ ಮಾಡಿಕೊಳ್ಳುತ್ತಾರೆ. ಆದರೆ ಇದಕ್ಕೆ ಆತ್ಮಹತ್ಯೆ ಒಂದೇ ಪರಿಹಾರವಲ್ಲ ಇದ್ದು ಸಾಧನೆ ಮಾಡಬೇಕು. ರೈತರಿಗೆ ಮೂಲಭೂತ ಸೌಕರ್ಯ, ಸಾಲಸೌಲಭ್ಯ, ಬೆಳೆದ ಬೆಳೆಗೆ ನಿಗಧಿತ ಬೆಲೆ ಇಲ್ಲ ಎಂಬಿತ್ಯಾದಿ ಕಾರಣಗಳಿಂದ ಕೃಷಿಯಿಂದ ವಿಮುಖರಾಗುತ್ತಿರುವುದು ಸರ್ಕಾರಕ್ಕೆ ಅರಿವಿದ್ದು ಅದಕ್ಕಾಗಿಯೇ ಬಹಳಷ್ಟು ಯೋಜನೆಗಳನ್ನು ತಂದಿದೆ. ಆದರೆ ಮೊದಲಿದ್ದ ಕೃಷಿ ಕಾಯ್ದೆಗಳು ಈಗ ಬದಲಾಗಿರುವ ಕಾರಣ ಕೃಷಿ ಕ್ಷೇತ್ರದ ಅಭಿವೃದ್ದಿ ಕಡಿಮೆಯಾಗುತ್ತಿದೆ ಎಂದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ.ಗಂಗಾಧರ್ ಮಾತನಾಡಿ, ನಮ್ಮ ದೇಶದ ಬದುಕು ಕೃಷಿಯ ಮೇಲೆ ಅವಲಂಬಿತವಾಗಿದ್ದು ಕೃಷಿ ಕ್ಷೇತ್ರದ ಅಭಿವೃದ್ದಿಯಾದರೆ ಮಾತ್ರ ದೇಶ ಸಮೃದ್ಧವಾಗಲಿದೆ. ರೈತ ಬೆಳೆದ ಬೆಳೆಗೆ ಬೆಂಬಲ ಬೆಲೆ ಇಲ್ಲ, ಮಾರುಕಟ್ಟೆ ವ್ಯವಸ್ಥೆ ಇಲ್ಲ, ಸರ್ಕಾರ ಯೋಜನೆಗಳು ರೈತರಿಗೆ ತಲುಪುತ್ತಿಲ್ಲದ ಕಾರಣ ಕೃಷಿ ಕೈಸುಡುತ್ತಿದೆ. ಸಾಲಮನ್ನಾ ಬೇಡ, ಸಬ್ಸಿಡಿ ಬೇಡ, ಅಕ್ಕಿ, ವಿದ್ಯುತ್ ಯಾವುದೂ ಬೇಡ ರೈತರು ಬೆಳೆಗೆ ಬೆಳೆಗೆ ವೈಜ್ಞಾನಿಕ ಬೆಲೆ ಮತ್ತು ಮಾರುಕಟ್ಟೆ ವ್ಯವಸ್ಥೆ ಮಾಡಿಕೊಟ್ಟರೆ ನಾವೇ ಸರ್ಕಾರಕ್ಕೆ ಸಾಲ ಕೊಡುತ್ತೇವೆ. ದೇಶದಲ್ಲಿ ಹೆಚ್ಚು ಉದ್ಯೋಗ ಮತ್ತು ಆಹಾರ ನೀಡುತ್ತಿರುವುದು ಕೃಷಿ ಕ್ಷೇತ್ರ ಅಭಿವೃದ್ದಿಯಾಗಬೇಕು ರೈತರಿಗೆ ಅಗತ್ಯ ಸೌಲಭ್ಯ ಕಲ್ಪಿಸಿಕೊಡುವಲ್ಲಿ ಸರ್ಕಾರಗಳು ಯೋಚಿಸಬೇಕಿದೆ ಎಂದರು. ಕೇಂದ್ರ ಸಾಹಿತ್ಯ ಪ್ರಶಸ್ತಿ ಪುರಸ್ಕೃತ ಪ್ರೊ.ಕೃಷ್ಣಮೂರ್ತಿ ಬಿಳಿಗೆರೆ ಮಾತನಾಡಿ, ಕೃಷಿ ಬಗ್ಗೆ ಯುವಕರಲ್ಲಿ ಬಿತ್ತನೆ ಮಾಡಲು ಕಸಾಪ ಉತ್ತಮ ಕಾರ್ಯಕ್ರಮ ಆಯೋಜಿಸಿದೆ. ಪ್ರಸ್ತುತ ರೈತ ಶೋಚನೀಯ ಸ್ಥಿತಿಯಲ್ಲಿದ್ದು ಸಾಕಷ್ಟು ಸಮಸ್ಯೆಗಳನ್ನು ಎದುರಿಸುತ್ತಿದ್ದಾನೆ. ಯಾರು ರೈತರು ಎಂಬುದನ್ನು ಗುರ್ತಿಸದಿದ್ದರೆ ಸರ್ಕಾರ ಎಷ್ಟೇ ಯೋಜನೆಗಳನ್ನು ತಂದರೂ ಪ್ರಯೋಜನವಿಲ್ಲ. ನಿಜವಾದ ರೈತರಿಗೆ ಭದ್ರತೆ ಇಲ್ಲದಂತಾಗಿದ್ದು ಕೃಷಿಯೇ ಬೇಡ ಎಂಬ ಸ್ಥಿತಿಯಲ್ಲಿ ರೈತರಿದ್ದಾರೆ. ಆದ್ದರಿಂದ ಕೃಷಿ ಬಗ್ಗೆ ಯೋಚಿಸುವ ಕಾಲ ಬಂದಿದ್ದು ಕೃಷಿ ಸಾಹಿತ್ಯ, ಸಂಶೋಧನೆಗಳು ಪುಸ್ತಕದ ಮೇಲಿನ ಅಕ್ಷರಗಳಾಗುವ ಬದಲು ತಿನ್ನುವ ಅನ್ನದ ಭೂಮಿಯ ಮೇಲಿನ ಅಕ್ಷರಗಳಾಗಬೇಕಿದೆ ಎಂದರು. ಅಧ್ಯಕ್ಷತೆಯನ್ನು ಕಸಾಪ ತಾ.ಅಧ್ಯಕ್ಷ ಬಸವರಾಜಪ್ಪ ಮಾತನಾಡಿ, ಕೃಷಿ ಸಮಸ್ಯೆಗಳನ್ನು ಆಲಿಸಿ ನಮ್ಮ ಕಸಾಪದಿಂದ ಮೊದಲ ಬಾರಿಗೆ ಕೃಷಿ ಸಾಹಿತ್ಯ ಸಮ್ಮೇಳನ ಆಯೋಜಿಸಿ ಯುವಕರಿಗೆ ಕೃಷಿ ಪ್ರಜ್ಞೆ ಮೂಡಿಸುವ ಪ್ರಯತ್ನವಾಗಿದೆ ಎಂದರು. ಸಮ್ಮೇಳನದಲ್ಲಿ ರೈತ ಸಂಘದ ಅಧ್ಯಕ್ಷ ಪ್ರೊ.ಜಯಾನಂದಯ್ಯ, ತಾಪಂ ಇಒ ಸುದರ್ಶನ್, ಕೆವಿಎಸ್ ಕಾರ್ಯದರ್ಶಿ ಎಚ್.ಜಿ.ಸುಧಾಕರ್, ತೋಟಗಾರಿಕೆ ಇಲಾಖೆಯ ಚಂದ್ರಶೇಖರ್, ಸಹಾಯಕ ಕೃಷಿ ನಿರ್ದೇಶಕ ಡಾ. ಎಂ.ಪಿ.ಪವನ್, ಕೃಷಿಕ ಹರಿಪ್ರಸಾದ್, ಕದಳಿ ಬಳಗದ ಸ್ವರ್ಣಗೌರಿ, ರೈತ ನಾಗರಾಜು, ಕಥೆಗಾರ ಗಂಗಾಧರಯ್ಯ, ಪ್ರಾಂಶುಪಾಲ ಎಂ.ಡಿ. ಶಿವಕುಮಾರ್, ವಿಜಯಕುಮಾರಿ ಸೇರಿದಂತೆ ಯುವಕರು, ರೈತರು, ಮಹಿಳೆಯರು ಭಾಗವಹಿಸಿದ್ದರು.
ನಂತರ ಕೃಷಿ ಸಮಸ್ಯೆ ಬಗ್ಗೆ ಚರ್ಚಿಸಲು ಗೋಷ್ಠಿಗಳನ್ನು ಏರ್ಪಡಿಸಿ ವಿವಿಧ ವಿಷಯಗಳ ಬಗ್ಗೆ ತಜ್ಞರು, ವಿಜ್ಞಾನಿಗಳು ಹಾಗೂ ಅನುಭವಿ ರೈತರಿಂದ ಯುವಕರಿಗೆ ಮಾಹಿತಿ ನೀಡಲಾಯಿತು.ತಿಪಟೂರಿನಲ್ಲಿ ಕೃಷಿ ಸಾಹಿತ್ಯ ಸಮ್ಮೇಳನವನ್ನು ಶಾಸಕ ಕೆ.ಷಡಕ್ಷರಿ ಉದ್ಘಾಟಿಸಿದರು. ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ವರಿಷ್ಠ ಕೆ.ಟಿ. ಗಂಗಾಧರ್, ಪ್ರೊ. ಕೃಷ್ಣಮೂರ್ತಿ ಬಿಳಿಗೆರೆ, ಕಸಾಪ ತಾ. ಅಧ್ಯಕ್ಷ ಬಸವರಾಜಪ್ಪ ಇದ್ದರು.