ಹುಬ್ಬಳ್ಳಿ:

ಧಾರವಾಡ ಹೊರವಲಯದ ತಡಸಿನಕೊಪ್ಪ ಸರಹದ್ದಿನ ಜಮೀನಿನಲ್ಲಿ ಮೇ 26ರಂದು ನಡೆದಿದ್ದ ಫೈರಿಂಗ್ ಪ್ರಕರಣದ ಪ್ರಮುಖ ಆರೋಪಿ ಸುಂದರ್ ಪೌಲ್‌ನನ್ನು ಹು-ಧಾ ನಗರ ಪೊಲೀಸರು ತಮಿಳುನಾಡಿನ ನಾಗಪಟ್ಟಣಂದಲ್ಲಿ ಮಂಗಳವಾರ ಬಂಧಿಸಿದ್ದಾರೆ.

ತಡಸಿನಕೊಪ್ಪ ವಿವಾದಿತ ಜಮೀನು ವಿಚಾರವಾಗಿ ನಡೆದ ಗಲಾಟೆಯಲ್ಲಿ ಸುಂದರ್ ಪಾಲ್ ಹಾಗೂ ಇನ್ನೊಬ್ಬ ವಿಠ್ಠಲ ವಾಲಿಕಾರ ಎಂಬಾತನ ಕಾಲಿಗೆ ಗುಂಡು ಹಾರಿಸಿದ್ದರು. ಕಾರ್ಯಾಚರಣೆ ನಡೆಸಿದ್ದ ಪೊಲೀಸರು ಮೇ 27ರಂದು ಫಿಲೋಮಿನಾ, ಪ್ರವೀಣ ಸುತಾರ, ಇಂದ್ರಪಾಲ್ ಸಿಂಗ್, ಬೆಂಜಮಿನ್, ವಿಶಾಲ ಜಾಧವ ಎಂಬುವರನ್ನು ಬಂಧಿಸಿದ್ದರು.

ಆದರೆ, ಪ್ರಮುಖ ಆರೋಪಿ ಸುಂದರ್ ಪೌಲ್ ಪರಾರಿಯಾಗಿದ್ದ. ಬೆಂಗಳೂರು, ಕೊಡೈಕೆನಾಲ್, ಗೋವಾ, ಜಾರ್ಖಂಡ್, ಓಡಿಶಾದ ಗೋಪಾಲಪುರ, ಪಶ್ಚಿಮ ಬಂಗಾಳದ ಸಿಲಿಗುರಿ, ಉತ್ತರ ಪ್ರದೇಶದ ಗೋರಖಪುರ, ವಾರಾಣಸಿ ಮತ್ತು ನೇಪಾಳ ದೇಶದಲ್ಲಿ ಸುತ್ತಾಡಿದ್ದ. ಈತನ ಪತ್ತೆಗಾಗಿ ರಚಿಸಲಾಗಿದ್ದ ವಿಶೇಷ ಪೊಲೀಸ್ ತಂಡ, ತಮಿಳುನಾಡಿನ ನಾಗಪಟ್ಟಣಂನಲ್ಲಿ ಗುರುತು ಮರೆಮಾಚಿ ಆಶ್ರಯ ಪಡೆದಿದ್ದ ಸುಂದರ್ ಪೌಲ್‌ನನ್ನು ಬಂಧಿಸಿ ಕರೆತರುವಲ್ಲಿ ಯಶಸ್ವಿಯಾಗಿದೆ.

ಈ ಕಾರ್ಯಾಚರಣೆಯಲ್ಲಿ ಪೊಲೀಸ್‌ ಇನ್‌ಸ್ಪೆಕ್ಟರ್‌ ದಯಾನಂದ ಶೇಗುಣಸಿ, ರಮೇಶ ಕಾಂಬಳೆ, ಸಂಗಮೇಶ ದಿಡಿಗನಾಳ, ಪಿಎಸ್‌ಐಗಳಾದ ಭೀಮಪ್ಪ ಸಾತಣ್ಣವರ, ಶ್ರೀಮಂತ ಹುಣಸಿಕಟ್ಟಿ, ರೂಪಕ ಮತ್ತವರ ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು.