ಸಾರಾಂಶ
ತೆಲಂಗಾಣ ಮೂಲದ ವ್ಯಕ್ತಿಯನ್ನು ಕೊಂದು ಕೊಡಗಿನಲ್ಲಿ ಎಸೆದ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಸುಂಟಿಕೊಪ್ಪ ವಾಹನ ಚಾಲಕರ ಸಂಘ ಶ್ಲಾಘಿಸಿದೆ. ಸಂಘದ ವತಿಯಿಂದ ಸಿಬ್ಬಂದಿಯನ್ನು ಗೌರವಿಸಿ 10 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.
ಕನ್ನಡಪ್ರಭ ವಾರ್ತೆ ಸುಂಟಿಕೊಪ್ಪ
ತೆಲಂಗಾಣ ಮೂಲದ ವ್ಯಕ್ತಿಯನ್ನು ಕೊಂದು ಕೊಡಗಿನಲ್ಲಿ ಎಸೆದ ಪ್ರಕರಣ ಭೇದಿಸಿದ ಸುಂಟಿಕೊಪ್ಪ ಠಾಣಾಧಿಕಾರಿ ಹಾಗೂ ಸಿಬ್ಬಂದಿಯನ್ನು ಸುಂಟಿಕೊಪ್ಪ ವಾಹನ ಚಾಲಕರ ಸಂಘ ಶ್ಲಾಘಿಸಿದೆ. ಸಂಘದ ವತಿಯಿಂದ ಸಿಬ್ಬಂದಿಯನ್ನು ಗೌರವಿಸಿ 10 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಗಿದೆ.ತೆಲಂಗಾಣ ಮೂಲದ ಉದ್ಯಮಿ ರಮೇಶ್ ಎಂಬವರನ್ನು ಇತ್ತೀಚೆಗೆ, ಅವರ ಪತ್ನಿ ಹಾಗೂ ಗೆಳೆಯರು ಕೊಂದು ಸುಂಟಿಕೊಪ್ಪ ಪನ್ಯ ಕಾಫಿ ತೋಟದಲ್ಲಿ ಸುಟ್ಟುಹಾಕಿದ್ದರು. ಅರೆಬೆಂದ ಮೃತದೇಹದ ಜಾಡು ಹಿಡಿದು ಸುಂಟಿಕೊಪ್ಪ ಪೊಲೀಸರು ತನಿಖಾ ತಂಡಗಳ ಮೂಲಕ ರಾಜ್ಯ ಹಾಗೂ ಅಂತಾರಾಜ್ಯ ಹಂತದಲ್ಲಿ ತನಿಖೆ ನಡೆಸಿ ಕೊಲೆ ಆರೋಪಿಗಳನ್ನು ಬಂಧಿಸುವ ಮೂಲಕ ಪ್ರಕರಣಕ್ಕೆ ಇತಿಶ್ರಿಗೊಳಿಸಿದ್ದಾರೆ. ಈ ಮೂಲಕ ಸುಂಟಿಕೊಪ್ಪ ಠಾಣಾ ವ್ಯಾಪ್ತಿಯ ಜನತೆಯಲ್ಲಿ ಮೂಡಿದ ಅಂತಕ ದೂರ ಸರಿಸಿದ್ದಾರೆ ಎಂದು ಸಂಘ ಮೆಚ್ಚುಗೆ ವ್ಯಕ್ತಪಡಿಸಿದೆ. ಸಂಘದ ಅಧ್ಯಕ್ಷ ಕಿಟ್ಟಣ್ಣ ರೈ ಹಾಗೂ ಪದಾಧಿಕಾರಿಗಳು ಠಾಣೆಯ ಪ್ರಮುಖರಿಗೆ ಮಾಲೆ, ಶಾಲು ಹೊದೆಸಿ, ಫಲ ತಾಂಬೂಲ ನೆನಪಿನ ಕಾಣಿಕೆ ನೀಡಿ ಗೌರವಿಸಿದರು.
ಸುಂಟಿಕೊಪ್ಪ ವಾಹನ ಚಾಲಕರ ಸಂಘದ ವತಿಯಿಂದ ಪೊಲೀಸ್ ಠಾಣೆಗೆ 10 ಕುರ್ಚಿಗಳನ್ನು ಕೊಡುಗೆಯಾಗಿ ನೀಡಲಾಯಿತು.ಸಂಘದ ಪದಾಧಿಕಾರಿಗಳಾದ ಮುನಿರ್, ಅಬ್ದುಲ್ ಅಜೀಜ್, ಅವಲಕುಟ್ಟಿ, ಸುರೇಶ್, ಇನಾಸ್ ಡಿಸೋಜ, ಸಂದೀಪ್, ಅಸ್ಗರ್, ಕೃಷ್ಣಪ್ಪ, ರಿಜ್ವಾನ್, ರಕ್ಷಿತ್ (ರೀನು), ಪವನ್,ಲೋಕೇಶ್ (ಲೀಕಿ), ಜೈನುದ್ದೀನ್ ಗೀತಾ ಹಾಗೂ ಪೊಲೀಸ್ ಸಿಬ್ಬಂದಿ ಇದ್ದರು.