ಕಡ್ಡಾಯ ಮತ್ತು ನೈತಿಕ ಮತದಾನ ಬೆಂಬಲಿಸಿ

| Published : Apr 05 2024, 01:02 AM IST

ಸಾರಾಂಶ

ಪ್ರಸಕ್ತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತದಾನ ಏ.೨೬ ರಂದು ನಡೆಯಲಿದ್ದು, ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಜೊತೆಗೆ ನೈತಿಕ ಮತದಾನ ಬೆಂಬಲಿಸಿ ಎಂದು ಜಿಪಂ ಮುಖ್ಯ ಸಿಇಒ ಆನಂದ್ ಪ್ರಕಾಶ್ ಮೀನಾ ಕರೆ ನೀಡಿದರು.

ಕನ್ನಡಪ್ರಭ ವಾರ್ತೆ ಗುಂಡ್ಲುಪೇಟೆ

ಪ್ರಸಕ್ತ ನಡೆಯುವ ಲೋಕಸಭಾ ಚುನಾವಣೆಯಲ್ಲಿ ರಾಜ್ಯದ ಮೊದಲ ಹಂತದ ಮತದಾನ ಏ.೨೬ ರಂದು ನಡೆಯಲಿದ್ದು, ಎಲ್ಲರೂ ತಪ್ಪದೇ ಕಡ್ಡಾಯವಾಗಿ ಮತದಾನ ಮಾಡುವ ಜೊತೆಗೆ ನೈತಿಕ ಮತದಾನ ಬೆಂಬಲಿಸಿ ಎಂದು ಜಿಪಂ ಮುಖ್ಯ ಸಿಇಒ ಆನಂದ್ ಪ್ರಕಾಶ್ ಮೀನಾ ಕರೆ ನೀಡಿದರು.

ಬಂಡೀಪುರ ಹುಲಿ ಸಂರಕ್ಷಿತ ಪ್ರದೇಶದ ಹಿಮವದ್ ಗೋಪಾಲಸ್ವಾಮಿ ದೇವಸ್ಥಾನದ ಮುಂಭಾಗ ಮತ್ತು ಗೋಪಾಲಸ್ವಾಮಿ ಬೆಟ್ಟದ ತಪ್ಪಲಿನಲ್ಲಿ ಗುರುವಾರ ಬೆಳಗ್ಗೆ ತಾಲೂಕು ಆಡಳಿತ, ತಾಪಂ ಮತ್ತು ತಾಲೂಕು ಸ್ವೀಪ್ ಸಮಿತಿ ಆಯೋಜಿಸಿದ ಮತದಾನದ ಜಾಗೃತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.

ಜನರು ಯಾವುದೇ ಆಮಿಷಗಳಿಗೆ ಒಳಗಾಗದೆ ನಿಷ್ಪಕ್ಷಪಾತವಾಗಿ ಮತ ಚಲಾಯಿಸಬೇಕು ಹಾಗೂ ಮತದಾನ ನಿಮ್ಮ ಮುಂದಿನ ಪೀಳಿಗೆಯ ಭವಿಷ್ಯ ರೂಪಿಸುವಲ್ಲಿ ತನ್ನದೇ ಆದ ಪಾತ್ರವಹಿಸಲಿದೆ ಎಂದರು.

ಜಿಲ್ಲಾ ಎಸ್ಪಿ ಪದ್ಮಿನಿ ಸಾಹೂ ಮಾತನಾಡಿ ದೇಶವನ್ನು ನಡೆಸಲು ನಿಮ್ಮ ಒಂದು ಮತ ಬಹಳ ಅಮೂಲ್ಯವಾದದ್ದು, ಹಣದ ಆಸೆಗೆ ಮತ ಮಾರಿಕೊಳ್ಳಬೇಡಿ ಹಾಗೂ ನಿಮಗೆ ಮೂಲ ಸೌಕರ್ಯ ಒದಗಿಸಲು ಅರ್ಹ ವ್ಯಕ್ತಿಯನ್ನು ಆಯ್ಕೆ ಮಾಡಿ ಎಂದರು. ತಾಪಂ ಇಒ ರಾಮಲಿಂಗಯ್ಯ ಮತದಾನ ಜಾಗೃತಿ ಜಿಂಗಲ್ಸ್‌ಗಳ ಮೂಲಕ ಸಾರ್ವಜನಿಕರಿಗೆಮತದಾನದ ಪ್ರತಿಜ್ಞಾವಿಧಿ ಭೋದಿಸಿದರು.

ತಾಲೂಕು ಆಡಳಿತದ ಬಗ್ಗೆ ಸಾರ್ವಜನಿಕರ ಮೆಚ್ಚುಗೆ: ತಾಲೂಕು ಆಡಳಿತ,ತಾಪಂ ಹಾಗು ಸ್ವೀಪ್‌ ಸಮಿತಿ ಸಹಸ್ರಾರು ಜನರು ಸೇರುತ್ತಿದ್ದ ಗೋಪಾಲಸ್ವಾಮಿ ಜಾತ್ರಾ ದಿನ ಮತದಾನದ ಜಾಗೃತಿ ನಡೆಸಿದ್ದು ತಾಲೂಕು ಆಡಳಿತಕ್ಕೆ ಜನರ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.ಗೋಪಾಲಸ್ವಾಮಿ ಬೆಟ್ಟದಲ್ಲಿ ಗುರುವಾರ ಸಹಸ್ರಾರು ಮಂದಿ ಗೋಪಾಲಸ್ವಾಮಿ ಬ್ರಹ್ಮ ರಥೋತ್ಸವಕ್ಕೆ ಆಗಮಿಸುವುದನ್ನು ಅರಿತ ತಾಲೂಕು ಆಡಳಿತ ಬೆಟ್ಟದ ಮೇಲೆ ಹಾಗೂ ಬೆಟ್ಟದ ತಪ್ಪಲಿನಲ್ಲಿ ಮತದಾನದ ಬಗ್ಗೆ ಜಿಪಂ ಸಿಇಒ ಆನಂದ್‌ ಪ್ರಕಾಶ್ ಮೀನಾ, ಎಸ್ಪಿ ಪದ್ಮಿನಿ ಸಾಹೂ ನೇತೃತ್ವದಲ್ಲಿ ಮತದಾನ ಜಾಗೃತಿ ಸಹಸ್ರಾರು ಮಂದಿ ಭಾಗವಹಿಸುವಂತೆ ಮಾಡುವಲ್ಲಿ ತಾಲೂಕು ಆಡಳಿತ ಯಶ ಕಂಡಿದೆ.

ಈ ವೇಳೆ ತಹಸೀಲ್ದಾರ್‌ ಮಂಜುನಾಥ, ಬಂಡೀಪುರ ಹುಲಿ ಯೋಜನೆ ನಿರ್ದೇಶಕ ಎಸ್. ಪ್ರಭಾಕರನ್‌, ಮಲೆ ಮಹದೇಶ್ವರ ಬೆಟ್ಟ ಹುಲಿ ಯೋಜನೆ ಉಪ ಅರಣ್ಯ ಸಂರಕ್ಷಣಾಧಿಕಾರಿ ಸಂತೋಷ್ ಕುಮಾರ್, ಜಿಪಂ ಅಭಿವೃದ್ಧಿ ಅಧಿಕಾರಿಗಳ ಸಂಘದ ಅಧ್ಯಕ್ಷ ಕುಮಾರಸ್ವಾಮಿ, ತಾಲೂಕಿನ ಎಲ್ಲಾ ಪಂಚಾಯಿತಿ ಪಿಡಿಒಗಳು, ಕಾರ್ಯದರ್ಶಿಗಳು, ತಾಪಂ ಸಿಬ್ಬಂದಿಯಿದ್ದರು.