ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಚ್‌ಡಿಕೆ ಬೆಂಬಲಿಸಿ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ

| Published : Apr 13 2024, 01:11 AM IST / Updated: Apr 13 2024, 11:34 AM IST

ನೀರಾವರಿ ಯೋಜನೆಗಳ ಅನುಷ್ಠಾನಕ್ಕೆ ಎಚ್‌ಡಿಕೆ ಬೆಂಬಲಿಸಿ: ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ
Share this Article
  • FB
  • TW
  • Linkdin
  • Email

ಸಾರಾಂಶ

ಯಾರೋ ಹಣವುಳ್ಳವರು, ಕಂಟ್ರ್ಯಾಕ್ಟರ್‌ಗಳನ್ನು ತಂದು ಕಾಂಗ್ರೆಸ್ಸಿಗರು ಜಿಲ್ಲೆಯ ರಾಜಕಾರಣಕ್ಕೆ ಬಿಡುತ್ತಿದ್ದಾರೆ. ಅವರಿಗೆ ಇಲ್ಲಿನ ರೈತರ ಸಂಕಷ್ಟವೇನು ಎಂದು ಗೊತ್ತಿಲ್ಲ. ರಾಜ್ಯದ ನೀರಾವರಿ ಯೋಜನೆಗಳಲ್ಲಿ ಸೂಕ್ತ ನ್ಯಾಯ ಒದಗಿಸಲು ಜೆಡಿಎಸ್ ಎನ್‌ಡಿಎ ಜೊತೆ ಮೈತ್ರಿಗೆ ಮುಂದಾಗಿದೆ

 ಶ್ರೀರಂಗಪಟ್ಟಣ :  ರಾಜ್ಯದ ಕೃಷ್ಣ, ಕಾವೇರಿ ಹಾಗೂ ಮೇಕೆದಾಟು ನೀರಾವರಿ ಯೋಜನೆಗಳ ಪ್ರಗತಿ, ಅನುಷ್ಠಾನಕ್ಕೆ ಜೆಡಿಎಸ್ - ಬಿಜೆಪಿ ಮೈತ್ರಿ ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿಯನ್ನು ಬೆಂಬಲಿಸಬೇಕು ಎಂದು ಮಾಜಿ ಶಾಸಕ ರವೀಂದ್ರ ಶ್ರೀಕಂಠಯ್ಯ ಮನವಿ ಮಾಡಿದರು.

ತಾಲೂಕಿನ ವಿವಿಧ ಗ್ರಾಮಗಳಲ್ಲಿ ಜೆಡಿಎಸ್ ಹಾಗೂ ಬಿಜೆಪಿ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರೊಂದಿಗೆ ಎಚ್ ಡಿ.ಕುಮಾರಸ್ವಾಮಿ ಪರ ಮತಯಾಚಿಸಿ ಮಾತನಾಡಿ, ಕೃಷಿ ಪ್ರಧಾನ ಮಂಡ್ಯ ಜಿಲ್ಲೆಯಲ್ಲಿ ರೈತರ ಪರ ಯೋಜನೆಗಳ ಅನುಷ್ಠಾನಕ್ಕಾಗಿ ಎನ್‌ಡಿಎ ಮೈತ್ರಿ ಅಭ್ಯರ್ಥಿಯನ್ನು ಬೆಂಬಲಿಸಿ ಕುಮಾರಸ್ವಾಮಿ ಅವರ ನಾಯಕತ್ವವನ್ನು ಬಲಗೊಳಿಸಬೇಕು ಎಂದು ಮನವಿ ಮಾಡಿದರು.

ರಾಜ್ಯದ ನೀರಾವರಿ ಹಾಗೂ ಕೃಷಿ ಕ್ಷೇತ್ರದ ಸಮಸ್ಯೆಗಳ ನಿವಾರಣೆಗಾಗಿ ಹಲವು ದಶಕಗಳ ಕಾಲ ಹೋರಾಟ ನಡೆಸಿರುವ ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡರಿಗೆ ಶಕ್ತಿ ತುಂಬಲು ಎನ್‌ಡಿಎ ಅಭ್ಯರ್ಥಿಯಾಗಿರುವ ಕುಮಾರಸ್ವಾಮಿಯವರನ್ನು ಬೆಂಬಲಿಸುವಂತೆ ಒತ್ತಾಯಿಸಿದರು.

ಯಾರೋ ಹಣವುಳ್ಳವರು, ಕಂಟ್ರ್ಯಾಕ್ಟರ್‌ಗಳನ್ನು ತಂದು ಕಾಂಗ್ರೆಸ್ಸಿಗರು ಜಿಲ್ಲೆಯ ರಾಜಕಾರಣಕ್ಕೆ ಬಿಡುತ್ತಿದ್ದಾರೆ. ಅವರಿಗೆ ಇಲ್ಲಿನ ರೈತರ ಸಂಕಷ್ಟವೇನು ಎಂದು ಗೊತ್ತಿಲ್ಲ. ರಾಜ್ಯದ ನೀರಾವರಿ ಯೋಜನೆಗಳಲ್ಲಿ ಸೂಕ್ತ ನ್ಯಾಯ ಒದಗಿಸಲು ಜೆಡಿಎಸ್ ಎನ್‌ಡಿಎ ಜೊತೆ ಮೈತ್ರಿಗೆ ಮುಂದಾಗಿದೆ ಎಂದು ಹೇಳಿದರು.

ಇದಕ್ಕೂ ಮುನ್ನ ಸ್ವಗ್ರಾಮ ಅರಕೆರೆ ಗ್ರಾಮದ ಪ್ರಮುಖ ದೇವಾಲಯಗಳಲ್ಲಿ ಪೂಜೆ ಸಲ್ಲಿಸಿ ಬಳಿಕ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಮನೆ-ಮನೆಗೆ ತೆರಳಿ ಮತಯಾಚಿಸಿದರು. ನೀರಿಲ್ಲದೆ ಬರದಿಂದ ರೈತರು ಸಂಕಷ್ಟದಲ್ಲಿದ್ದಾರೆ. ರೈತ ಹಾಗೂ ಜಾನುವಾರುಗಳ ಸಂಕಷ್ಟಕ್ಕೆ ನೆರವಾಗಬೇಕಾದ ರಾಜ್ಯ ಸರ್ಕಾರ, ಕನ್ನಂಬಾಡಿ ನದಿ ಪಾತ್ರದ ನಾಲೆಗಳಿಗೆ ನೀರು ಹರಿಸದೇ ತಮಿಳುನಾಡಿಗೆ ನೀರು ಹರಿಸಲು ಆಸಕ್ತಿ ತೋರುತ್ತಿರುವುದು ವಿಪರ್ಯಾಸದ ಸಂಗತಿ ಎಂದು ವಿಷಾಧಿಸಿದರು.

ಜಿಲ್ಲೆಯವರೇ ಕೃಷಿ ಸಚಿವರು. ಆದರೆ, ರೈತರ ಬಗ್ಗೆ ಯೋಚಿಸದೆ ಜನ, ಜಾನುವಾರುಗಳಿಗೆ ನೀರಿಲ್ಲದೆ ಬಳಲುತ್ತಿದ್ದರೂ ಏನು ಆಗಿಲ್ಲವೇನೋ ಎಂಬಂತೆ ವರ್ತಿಸುತ್ತಿದ್ದಾರೆ ಎಂದು ಉಸ್ತುವಾರಿ ಸಚಿವರ ವಿರುದ್ಧ ಕಿಡಿಕಾರಿದರು.

 ಇದೇ ವೇಳೆ ಅಪಾರ ಬೆಂಬಲಿಗರು ಹಾಗೂ ಮುಖಂಡರು ಪ್ರತಿ ಮನೆ-ಮನೆಗೆ ತೆರಳಿ ಮತಯಾಚಿಸಿ ಕುಮಾರಸ್ವಾಮಿ ಅವರನ್ನು ಹೆಚ್ಚು ಮತಗಳ ಬಹುಮತದಿಂದ ಲೋಕಸಭೆಗೆ ಆಯ್ಕೆ ಮಾಡಬೇಕೆಂದು ಮತಯಾಚಿಸಿದರು.

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯ ಅರಕೆರೆ, ಚಿಂದೇಗೌಡನ ಕೊಪ್ಪಲು, ಮಂಡ್ಯ ಕೊಪ್ಪಲು, ಗೆಂಡೆ ಹೊಸಹಳ್ಳಿ, ಮಣಿಗೌಡನ ಹುಂಡಿ, ಮಾಡ್ರಹಳ್ಳಿ, ಬಳ್ಳೇಕೆರೆ, ನೇರಳೆಕೆರೆ, ಬೆಟ್ಟಹಳ್ಳಿ, ಆಲದಹಳ್ಳಿ, ಪೀಹಳ್ಳಿ, ಕೊಡಿಯಾಲ, ಹುಣಸನಹಳ್ಳಿ ಸೇರಿ ಮುಂತಾದ ಗ್ರಾಮಗಳಲ್ಲಿ ಮತಯಾಚಿಸಿದರು.

21 ರಂದು ಬೃಹತ್ ಸಭೆ:

ಪಟ್ಟಣದಲ್ಲಿ ಏ.21 ರಂದು ಜೆಡಿಎಸ್ - ಬಿಜೆಪಿ ಪ್ರಚಾರದ ಬೃಹತ್ ಸಭೆ ನಡೆಯಲಿದೆ. ಮಾಜಿ ಪ್ರಧಾನಿ ದೇವೇಗೌಡರು, ಮಾಜಿ ಮುಖ್ಯಮಂತ್ರಿಗಳಾದ ಯಡಿಯೂರಪ್ಪ, ಅಭ್ಯರ್ಥಿ ಎಚ್.ಡಿ ಕುಮಾರಸ್ವಾಮಿ, ಬಿಜೆಪಿ ನಾಯಕರಾದ ಆರ್.ಅಶೋಕ್, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸೇರಿ ಇತರ ಎಲ್ಲ ಮುಖಂಡರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.ತಾಲೂಕು ಜೆಡಿಎಸ್ ಘಟಕದ ಅಧ್ಯಕ್ಷ ದಶರಥ, ಕಾರ್ಯಾಧ್ಯಕ್ಷ ದೇವೇಗೌಡ, ಜಿಪಂ ಮಾಜಿ ಸದಸ್ಯ ಅರಕೆರೆ ಮರೀಗೌಡ, ಮುಖಂಡರಾದ ಗಾಮನಹಳ್ಳಿ ಚಿಕ್ಕಣ್ಣ, ರಜತ್, ನೆಲಮನೆ ಗುರುಪ್ರಸಾದ್, ಅನಿಲ್, ಕಿರಣ್ ಸೇರಿ ಇತರರು ಇದ್ದರು.