ದೀನ-ದಲಿತರು, ಬಡವರಿಗೆ ಸ್ಥಿತಿವಂತರು ದಾನದ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸಮಾಜದಲ್ಲಿ ಮೇಲು-ಕೀಳು ಎಂಬುವುದನ್ನು ದೂರ ಮಾಡುವುದೇ ರಂಜಾನ್ ಮಾಸದ ಉದ್ದೇಶವಾಗಿದೆ.

ಕೊಪ್ಪಳ:

ಪಂಚೇಂದ್ರಿಯಗಳ ನಿಗ್ರಹವೇ ರಂಜಾನ್ ಮಾಸದ ಉಪವಾಸ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ನಗರದ ವಿವಿಧ ಜಾಮೀಯಾ ಮಸೀದಿಗಳಲ್ಲಿ ನಡೆದ ಇಫ್ತಿಯಾರ್‌ ಸೌಹಾರ್ದತೆ ಕೂಟದಲ್ಲಿ ಭಾಗವಹಿಸಿ ಬಳಿಕ ಮಾತನಾಡಿದರು.

ದೀನ-ದಲಿತರು, ಬಡವರಿಗೆ ಸ್ಥಿತಿವಂತರು ದಾನದ ಮೂಲಕ ಆರ್ಥಿಕವಾಗಿ ಸಬಲರನ್ನಾಗಿ ಮಾಡಿ ಸಮಾಜದಲ್ಲಿ ಮೇಲು-ಕೀಳು ಎಂಬುವುದನ್ನು ದೂರ ಮಾಡುವುದೇ ರಂಜಾನ್ ಮಾಸದ ಉದ್ದೇಶವಾಗಿದೆ. ಇಸ್ಲಾಂ ಧರ್ಮದಲ್ಲಿ “ಜಕಾತ್” ಪದ್ಧತಿಯು ಕಡ್ಡಾಯವಾಗಿದ್ದು, ಪ್ರತಿಯೊಬ್ಬ ಮುಸಲ್ಮಾನರು ತಾವು ಸಂಪಾದಿಸುವ ಹಣದಲ್ಲಿ ಬಡವರ ಪಾಲನ್ನು ಕಡ್ಡಾಯವಾಗಿ ಕೊಟ್ಟಾಗ ಮಾತ್ರ ಆ ಸೃಷ್ಟಿಕರ್ತನ ಕೃಪೆಗೆ ಪಾತ್ರರಾಗುತ್ತಾರೆ ಎಂದರು.

ಬಡಜನತೆ ಹಸಿವಿನಿಂದ ಪರಿತಪ್ಪಿಸುವ ಅನುಭವ ರಂಜಾನ್ ಉಪವಾಸ ಮಾಡುವವರಿಗೆ ಅರಿವು ಮೂಡಿಸುತ್ತದೆ. ಕೇವಲ ಉದರದ ಭಕ್ಷ-ಭೋಜನ ನಿಯಂತ್ರಿಸುವುದಲ್ಲದೇ ಪಂಚೇಂದ್ರಿಯ ನಿಗ್ರಹಿಸಿ ಸೃಷ್ಟಿಕರ್ತನಿಗೆ ಶರಣಾಗುವುದೇ ರಂಜಾನ್ ಮಾಸದ ಧೇಯ್ಯವಾಗಿದೆ ಎಂದು ಹೇಳಿದರು.

ಈ ವೇಳೆ ಮಾಜಿ ಶಾಸಕರಾದ ಕೆ. ಬಸವರಾಜ ಹಿಟ್ನಾಳ, ಧರ್ಮ ಗುರುಗಳಾದ ಮುಪ್ತಿ ನಜೀರ್ ಅಹಮ್ಮದ್ ತಸ್ಕಿನ್ ಖಾದ್ರಿ, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್‌ ಪಾಷ ಪಲ್ಟನ್, ಮುಖಂಡರಾದ ವಿಶ್ವನಾಥ ರಾಜು, ಬಾಷು ಸಾಬ್‌ ಖತ್ತಿಬ್, ಕಾಟನ್ ಪಾಷ, ಕೆ.ಎಂ. ಸೈಯದ್, ಇಬ್ರಾಯಿಂ ಅಡ್ಡೆವಾಲೆ, ಅಜುಮುದ್ದಿನ್ ಅತ್ತಾರ, ಇಕ್ಬಾಲ್‌ ಸಿದ್ದಿಕಿ, ಮುನೀರ್ ಪಾಷಾ, ಬಾಬ ಅರಗಂಜಿ, ಮಾನ್ವಿ ಪಾಷ ಹುಸೇನ, ಪೀರಾ ಮುಜಾವರ್, ಜಾಫರ್ ಸಂಗಟಿ, ಮೌಲಾಹುಸೇನ ಜಮೇದಾರ, ಗೈಬುಸಾಬ, ವಕೀಲ್ ಸಿರಾಜ್ ಮನಿಯಾರ ಪಾಷ ತಳಕಲ್ಲ್ ಉಪಸ್ಥಿತರಿದ್ದರು.