ಬಿ.ಸಿ.ರೋಡ್‌-ಪಡೀಲ್ ನಡುವೆ ತ್ಯಾಜ್ಯ ಎಸೆಯದಂತೆ ‘ಕಣ್ಗಾವಲು’!

| Published : Jun 10 2025, 07:23 AM IST

ಬಿ.ಸಿ.ರೋಡ್‌-ಪಡೀಲ್ ನಡುವೆ ತ್ಯಾಜ್ಯ ಎಸೆಯದಂತೆ ‘ಕಣ್ಗಾವಲು’!
Share this Article
  • FB
  • TW
  • Linkdin
  • Email

ಸಾರಾಂಶ

‘ಸ್ವಚ್ಛತೆಗಾಗಿ ನಮ್ಮೊಂದಿಗೆ ನೀವು, ನಿಮ್ಮೊಂದಿಗೆ ನಾವು’ ಎಂಬ ಅಭಿಯಾನಕ್ಕೆ ವಿಶ್ವಪರಿಸರ ದಿನದಂದು ಪುದು ಗ್ರಾಮ ಪಂಚಾಯಿತಿಯಲ್ಲಿ ಚಾಲನೆ ನೀಡಲಾಗಿದೆ. ರಾಷ್ಟ್ರೀಯ ಹೆದ್ದಾರಿಯಲ್ಲಿ ಕಸ ಎಸೆಯುವ ಸಮಸ್ಯೆ ಪರಿಹಾರಕ್ಕೆ ಇದು ಪ್ರಯತ್ನವಾಗಿದೆ.

ಮೌನೇಶ ವಿಶ್ವಕರ್ಮ

ಕನ್ನಡಪ್ರಭ ವಾರ್ತೆ ಬಂಟ್ವಾಳಬಿ.ಸಿ.ರೋಡಿನಿಂದ ಪಡೀಲ್‌ ವರೆಗಿನ ರಾಷ್ಟ್ರೀಯ ಹೆದ್ದಾರಿಯ ಇಕ್ಕೆಲಗಳಲ್ಲಿ ಹೆಚ್ಚುತ್ತಿರುವ ತ್ಯಾಜ್ಯ ಎಸೆದು ಹಾಕುವ ಸಮಸ್ಯೆಗೆ ಕಡಿವಾಣ ಹಾಕಲು ಸ್ವಯಂ ಸೇವಕರ ತಂಡವೊಂದು ವಿಶಿಷ್ಟ ಪ್ರಯತ್ನ ನಡೆಸುತ್ತಿದೆ. ‘ಸ್ವಚ್ಛತೆಗಾಗಿ ನಮ್ಮೊಂದಿಗೆ ನೀವು, ನಿಮ್ಮೊಂದಿಗೆ ನಾವು’ ಎಂಬ ಅಭಿಯಾನಕ್ಕೆ ವಿಶ್ವಪರಿಸರ ದಿನದಂದು ಪುದು ಗ್ರಾಮ ಪಂಚಾಯಿತಿಯಲ್ಲಿ ಚಾಲನೆ ನೀಡಲಾಗಿದೆ.ದಕ್ಷಿಣ ಕನ್ನಡ ಜಿಲ್ಲಾ ಆಡಳಿತ, ಜಿಲ್ಲಾ ಪಂಚಾಯಿತಿ, ಸ್ವಚ್ಛ ಭಾರತ್ ಮಿಷನ್ (ಗ್ರಾಮೀಣ),ಅಡ್ಯಾರ್, ಪುದು, ತುಂಬೆ, ಮತ್ತು ಕಳ್ಳಿಗೆ ಗ್ರಾಮ ಪಂಚಾಯಿತಿಗಳು ಹಾಗೂ ಹಸಿರು ದಳ ಎಂಬ ಸಮಾಜಮುಖಿ ಸಂಘಟನೆಗಳು ಈ ಅಭಿಯಾನದಲ್ಲಿ ಸಹಯೋಗ ನೀಡುತ್ತಿದೆ.ನಿಯಂತ್ರಣ ಪಡೆ: ರಾಷ್ಟ್ರೀಯ ಹೆದ್ದಾರಿಯ ಅಕ್ಕಪಕ್ಕ ಸೇರಿದಂತೆ ಎಲ್ಲೆಂದರಲ್ಲಿ ಕಸದ ತೋರಣಗಳೇ ಕಾಣಸಿಗುತ್ತಿದೆ. ಪ್ರಜ್ಞಾವಂತರು, ವಿದ್ಯಾವಂತರು ತಮ್ಮ ತಮ್ಮ ವಾಹನಗಳಲ್ಲಿ ಮನೆಗಳಿಂದ ತಂದ ಕಸಗಳನ್ನು ರಸ್ತೆಪಕ್ಕದಲ್ಲಿ ಎಸೆದು ಹೋಗುತ್ತಿರುವುದರಿಂದ ಹೆದ್ದಾರಿಯ ಸೌಂದರ್ಯವೂ ಹಾಳಾಗುತ್ತಿದೆ. ರಾಷ್ಟ್ರೀಯ ಹೆದ್ದಾರಿ ಮಾತ್ರವಲ್ಲದೆ, ಗ್ರಾಮೀಣ ಪ್ರದೇಶದ ರಸ್ತೆಗಳ ಇಕ್ಕೆಲಗಳಲ್ಲಿಯೂ ಇದೇ ತೆರನಾದ ವಾತಾವರಣವಿದೆ.ರಸ್ತೆ ಪಕ್ಕ ತ್ಯಾಜ್ಯ ಎಸೆದು ಹಾಕದಂತೆ ಜಾಗೃತಿ ಮೂಡಿಸಲು ಹಸಿರು ದಳದ ಮುಖ್ಯಸ್ಥ ನಾಗರಾಜ್ ಅವರು ಕಳೆದ ವರ್ಷ 3 ತಿಂಗಳಿಗೂ ಹೆಚ್ಚು ಕಾಲ ಪ್ರತಿ ದಿನ ಬೆಳಗ್ಗೆ 5.30 ರಿಂದ 9.30ರ ವರೆಗೆ ಅಡ್ಯಾರ್‌ನಲ್ಲಿ ಫಲಕ ಹಿಡಿದು ನಿಂತು ಜನರಿಗೆ ಒತ್ತಾಯಿಸಿದ್ದರು. 2021ರಲ್ಲೂ ಅವರು ಜಪ್ಪಿನಮೊಗೇರು ನೇತ್ರಾವತಿ ಸೇತುವೆಯ ಬಳಿಯ ಕಲ್ಲಾಪು ಭಾಗದಲ್ಲಿ 3 ಗಂಟೆ ಹೆಚ್ಚು ನಿಂತು ಇದೇ ಮಾದರಿಯ ಜಾಗೃತಿಯ ಕಾರ್ಯ ಮಾಡಿದ್ದರು.ಈ ಎಲ್ಲ ಪ್ರಯತ್ನಗಳ ನಡುವೆಯೂ ಪಡೀಲ್‌ ನಿಂದ ತೊಡಗಿ ಬಿ.ಸಿರೋಡ್‌ ವರೆಗೆ ಹೆದ್ದಾರಿ ಇಕ್ಕೆಲಗಳಲ್ಲಿ ತ್ಯಾಜ್ಯ ಎಸೆದು ಹಾಕುವ ಪ್ರಮಾಣ ಹೆಚ್ಚಾಗುತ್ತಲೇ ಇತ್ತು. ಸುಮಾರು 20-30 ಬ್ಲಾಕ್ ಸ್ಪಾಟ್‌ಗಳನ್ನು ಗುರುತಿಸಿದ ನಾಗರಾಜ್‌ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಜಯಲಕ್ಷ್ಮಿ ರಾಯ್ಕೋಡ್ ಅವರನ್ನು ಸಂಪರ್ಕಿಸಿದಾಗ ಹುಟ್ಟಿಕೊಂಡ ತಂಡವೇ ತ್ಯಾಜ್ಯ ಎಸೆಯುವಿಕೆ ನಿಯಂತ್ರಣ ಪಡೆ.ಈ ತಂಡಗಳಲ್ಲಿ ಗ್ರಾಮ ಪಂಚಾಯಿತಿ ಸದಸ್ಯರು ಮತ್ತು ಹಸಿರು ದಳದ ಸ್ವಯಂಸೇವಕರು ಸೇರಿದ್ದಾರೆ. ಅವರು ಪ್ರತಿದಿನ ಬೆಳಗ್ಗೆ 5ರಿಂದ 9ರವರೆಗೆ ಹಾಗೂ ಸಂಜೆ 6ರಿಂದ ರಾತ್ರಿ 10ರ ವರೆಗೆ ತ್ಯಾಜ್ಯ ಎಸೆಯುವ ಪ್ರದೇಶಗಳಲ್ಲಿ ಫಲಕ ಹಿಡಿದು ನಿಂತು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಈಗಾಗಲೇ ಸುಮಾರು 20ಕ್ಕೂ ಹೆಚ್ಚು ತಂಡಗಳನ್ನು ಗ್ರಾಮ ಪಂಚಾಯಿತಿಗಳ ಸಹಯೋಗದಿಂದ ರಚಿಸಲಾಗಿದೆ. ಹಸಿರು ದಳದ ಒಂದು ವಿಶೇಷ ತಂಡವೂ ಇದೆ. ಈ ಅಭಿಯಾನಕ್ಕೆ ಶಾಲೆಗಳು, ಯುವಕ ಮಂಡಲಗಳು ಮತ್ತು ಸಮುದಾಯ ಸಂಘಟನೆಗಳನ್ನೂ ತೊಡಗಿಸಿಕೊಳ್ಳುವ ಯೋಜನೆಯಿದೆ. ಪ್ರತಿಯೊಬ್ಬರೂ ಕನಿಷ್ಠ ಒಂದು ದಿನ ಈ ಕಾರ್ಯದಲ್ಲಿ ಭಾಗವಹಿಸುವಂತೆ ಪ್ರೋತ್ಸಾಹಿಸಲಾಗಿದೆ. ಮುಂದಿನ 3 ತಿಂಗಳ ವರೆಗೆ ಈ ಅಭಿಯಾನ ನಡೆಯಲಿದೆ.ನಾಗರಾಜ್ ಈ ಕುರಿತು ಮಾತನಾಡಿ, ‘ತ್ಯಾಜ್ಯ ಎಸೆದು ಹಾಕುವವರಿಂದ ನಾವು ಏನೆಲ್ಲಾ ಕಾರಣಗಳನ್ನು ಕೇಳುತ್ತೇವೆ ಎಂಬುದನ್ನು ದಾಖಲಿಸುತ್ತಿದ್ದೇವೆ. ಮುಂದಿನ ಹಂತದಲ್ಲಿ ಅವರು ಪಾಠ ಕಲಿಯದಿದ್ದರೆ, ಪಂಚಾಯಿತಿಗಳು ದಂಡ ವಿಧಿಸುವ ಪ್ರಕ್ರಿಯೆ ಆರಂಭಿಸುತ್ತವೆ’ ಎಂದರು. ರಾತ್ರಿಯ 8 ರಿಂದ 11ರ ವರೆಗೆ ತ್ಯಾಜ್ಯ ಎಸೆದು ಹಾಕುವ ಪ್ರಮಾಣ ಹೆಚ್ಚು ಎಂಬ ಮಾಹಿತಿ ಹಿನ್ನೆಲೆಯಲ್ಲಿ ಈ ಸಮಯದಲ್ಲೂ ಸ್ವಯಂಸೇವಕರನ್ನು ನಿಯೋಜಿಸುವ ಯೋಜನೆಯಿದೆ.ದಕ್ಷಿಣ ಕನ್ನಡ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟ ಅವರು ಹೆದ್ದಾರಿ ಪಕ್ಕ ಫಲಕ ಹಿಡಿದು ನಿಂತಿದ್ದ ನಾಗರಾಜ್ ಅವರನ್ನು ನೋಡಿದ್ದು, ಈ ಅಭಿಯಾನ ಮತ್ತಷ್ಟು ಗಮನಸೆಳೆದಿದೆ. ಅವರು ಎಕ್ಸ್‌ ಹಾಗೂ ಇನ್‌ಸ್ಟ್ರಾಗ್ರಾಮ್‌ ನಲ್ಲಿ ಈ ಬಗ್ಗೆ ಉಲ್ಲೇಖಿಸಿದ್ದು, ಪ್ರಯತ್ನಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. .....................................................................

ಇಂತಹಾ ಕಾರ್ಯಗಳಿಂದ ಪ್ರಜ್ಞಾವಂತ ನಾಗರಿಕರಿಗೆ ಹೆಚ್ಚು ಶಕ್ತಿ ಸಿಗಲಿ. ಪ್ರಧಾನಿ ನರೇಂದ್ರ ಮೋದಿ ಕನಸಿನ ಸ್ವಚ್ಛ ಭಾರತ ಸಾದ್ಯವಾಗಲು ಶ್ರಮಿಸುತ್ತಿರುವ ಇವರು ಎಲ್ಲರಿಗೂ ಮಾದರಿ.

-ಕ್ಯಾ.ಬ್ರಿಜೇಶ್‌ ಚೌಟ, ದ.ಕ. ಸಂಸದ.