ವಾರದಲ್ಲಿ ಹೆಜ್ಜಾಲ ಯೋಜನೆ ಜಾರಿ ಸರ್ವೆ ಶುರು

| Published : Apr 08 2025, 12:33 AM IST

ಸಾರಾಂಶ

ಕೊಳ್ಳೇಗಾಲಕ್ಕೆ ಆಗಮಿಸಿದ ಕೇಂದ್ರ ಸಚಿವ ವಿ.ಸೋಮಣ್ಣರಿಗೆ ಮಾನಸ ಶಿಕ್ಷಣ ಸಂಸ್ಥೆಯ ಕಾಯದರ್ಶಿ ಡಾ.ದತ್ತೇಶ್ ಕುಮಾರ್ ಮನವಿ ಸಲ್ಲಿಸಿದರು. ಪುಟ್ಟಣ್ಣ, ನಾಗರಾಜು, ಬಾಬು, ಬಸವರಾಜು ಇನ್ನಿತರರು ಇದ್ದರು.

ಕನ್ನಡಪ್ರಭ ವಾರ್ತೆ ಕೊಳ್ಳೇಗಾಲ

ಹೆಜ್ಜಾಲದಿಂದ ಚಾಮರಾಜನಗರವರೆಗಿನ ರೈಲ್ವೆ ಯೋಜನೆಯನ್ನು ಅನುಷ್ಠಾನಗೊಳಿಸಬೇಕೆಂಬುದು ನಮ್ಮೆಲ್ಲರ ಬಹು ವರ್ಷಗಳ ಬೇಡಿಕೆಯಾಗಿದೆ. ಈ ನಿಟ್ಟಿನಲ್ಲಿ ಶತಾಯಗತಾಯ ಪ್ರಯತ್ನಿಸುವೆ ಎಂದು ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಹೇಳಿದರು.

ಕೊಳ್ಳೇಗಾಲ ಪಟ್ಟಣದ ಮಾನಸ ಶಿಕ್ಷಣ ಸಂಸ್ಥೆಯ ಸಂಸ್ಥಾಪಕ ಕಾರ್ಯದರ್ಶಿ ಡಾ.ದತ್ತೇಶ್ ಕುಮಾರ್‌ರಿಂದ ಮನವಿ ಸ್ವೀಕರಿಸಿ ಮಾತನಾಡಿ, ಬೆಂಗಳೂರಿನ ಹೆಜ್ಜಾಲದಿಂದ ಹಾರೋಹಳ್ಳಿ ಕನಕಪುರ-ಮಳವಳ್ಳಿ-ಕೊಳ್ಳೇಗಾಲ-ಯಳಂದೂರು ಮಾರ್ಗವಾಗಿ ಚಾಮರಾಜನಗರದವರೆಗಿನ ಈ ಯೋಜನೆ ಕಾಯಗತಗೊಳಿಸಬೇಕು ಎಂದು ಚಿಂತಿಸಿದ್ದು ಈ ಸಂಬಂಧ ಸಂಸದ ಸುನೀಲ್ ಬೋಸ್ ಅವರಿಗೂ ಹಿಂದಿನ ಸರ್ವೇ ಮಾಹಿತಿ ನೀಡುವಂತೆ ಕೋರಿದ್ದೇನೆ.

ಈ ಯೋಜನೆ ಕಾಯಗತವಾಗಬೇಕು ಎಂಬುದು ಮಾಜಿ ಸಂಸದ ಧ್ರುವನಾರಾಯಣ ಅವರ ಕನಸಾಗಿತ್ತು, ಈ ನಿಟ್ಟಿನಲ್ಲಿ ನಾನು ಪ್ರಯತ್ನಿಸುವೆ. ಐದಾರು ದಿನಗಳಲ್ಲಿ ಈ ಕುರಿತು ಸರ್ವೆ ಕಾರ್ಯ ಪ್ರಾರಂಭವಾಗಲಿದೆ ಎಂದರು. ಮಲೆಮಹದೇಶ್ವರ ನನ್ನ ಮನೆ ದೇವರು, ನಾನು ಮಂತ್ರಿಯಾದ ತಕ್ಷಣ ಮಾದಪ್ಪನ ದರುಶನ ಪಡೆದಿದ್ದೆ, ಇಂದು ರಾಮಾಪುರದಲ್ಲಿ ದೇಗುಲ ಉದ್ಘಾಟಿಸಿ ಮಾದಪ್ಪನ ಸನ್ನಿಧಿಗೆ ತೆರಳಿ ಬಂದಿರುವೆ. ರಾಜ್ಯ ಸರ್ಕಾರ ಹಲವು ಯೋಜನೆಗಳಿಗೆ ಸಹಕಾರ ನೀಡಿದರೆ ಎಲ್ಲವೂ ಸಾಧ್ಯ ಎಂದರು.

ಎನ್‌ಡಿಎ ನೇತೃತ್ವದ ಕೇಂದ್ರ ಸರ್ಕಾರ ಹಲವು ಯೋಜನೆಗಳನ್ನು ಕಾಯಗತಗೊಳಿಸುವ ಕೆಲಸ ಮಾಡುತ್ತಿದೆ. ರೈಲ್ವೆ ಯೋಜನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತದಲ್ಲಿ ಟ್ರ್ಯಾಕ್ ಅಳವಡಿಸುವ ಕೆಲಸ ಮಾಡುತ್ತಿದ್ದೇವೆ ಎಂದರು. ಈ ವೇಳೆ ಮಾಜಿ ಶಾಸಕ ಬಾಲರಾಜು, ಬಸಪ್ಪನದೊಡ್ಡಿ ಬಸವರಾಜು, ನಾಗರಾಜು, ಬಾಬು, ತಿಮ್ಮರಾಜಿಪುರ ಪುಟ್ಟಣ್ಣ ಇನ್ನಿತರಿದ್ದರು.