ಸಾರಾಂಶ
ಕಾರಟಗಿಯ ಭೂ ದಾಖಲೆಗಳ ಪರವಾನಗಿ ಸರ್ವೆಯರ್ ವಿಜಯ ಚೌವ್ಹಾಣ ತತ್ಕಾಲ್ ಫೋಡಿ ಮಾಡುವುದಕ್ಕಾಗಿ ₹ 50 ಸಾವಿರ ಬೇಡಿಕೆ ಇಟ್ಟಿದ್ದ. ಈ ಪೈಕಿ ₹ 30 ಸಾವಿರ ಪಡೆಯುವಾಗಲೇ ಕ್ಯಾಂಪಿನಲ್ಲಿಯೇ ಬಲೆಗೆ ಬಿದ್ದಿದ್ದಾನೆ.
ಕಾರಟಗಿ:
ತಾಲೂಕಿನ ಸಿದ್ದಾಪುರ ಸಮೀಪದ ಅರುಣೋದಯ ಕ್ಯಾಂಪ್ನಲ್ಲಿ ಭೂಮಾಪಕ ವಿಜಯ್ ಚೌವ್ಹಾಣ್ ಲಂಚ ಸ್ವೀಕರಿಸುವ ವೇಳೆ ಸೋಮವಾರ ತಡರಾತ್ರಿ ಲೋಕಾಯುಕ್ತ ಬಲೆಗೆ ಬಿದ್ದಿದ್ದಾನೆ.ಈ ನಡುವೆ ದಾಳಿ ವೇಳೆ ಕ್ಯಾಂಪಿನ 50 ಜನರು ಅಡ್ಡಿಪಡಿಸಿದ್ದರಿಂದ ಅವರ ವಿರುದ್ಧ ಲೋಕಾಯುಕ್ತರು ಕಾರಟಗಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಸದ್ಯ ಬಂಧನಕ್ಕೊಳಗಾಗಿರುವ ವಿಜಯ್ ಮೇ 26ರ ವರೆಗೆ ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಸುಮಾರು 6 ಎಕರೆ ಜಮೀನನ್ನು ತತ್ಕಾಲ ಪೋಡಿ ಮಾಡಿಕೊಳ್ಳಲು ಭೂಮಾಪಕ ವಿಜಯ್ ₹ 50 ಸಾವಿರ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಜಿಲ್ಲಾ ಲೋಕಾಯುಕ್ತ ಠಾಣೆಗೆ ರೈತ ಸಂತೋಷ ದೂರು ನೀಡಿದ್ದರು. ಅಲ್ಲದೇ, ಮುಂಗಡವಾಗಿ ₹ 30 ಸಾವಿರ ಲಂಚದ ಹಣವನ್ನು ಅರುಣೋದಯ ಕ್ಯಾಂಪ್ನಲ್ಲಿ ಪಡೆಯುವ ವೇಳೆ ಲೋಕಾಯುಕ್ತ ಪೊಲೀಸರು ದಾಳಿ ನಡೆಸಿದ್ದಾರೆ. ಈ ವೇಳೆ ಭೂಮಾಪಕ ಹೈಡ್ರಾಮ ನಡೆಸಿದ್ದಾನೆ. ಊರಿನ ಗ್ರಾಮಸ್ಥರು ವಿಜಯ್ ಬಂಧನಕ್ಕೆ ತಡೆಯೊಡ್ಡಿದ್ದರು. ಸೋಮವಾರ ತಡರಾತ್ರಿ ಭೂಮಾಪಕ ವಿಜಯ ಬಂಧನ ವೇಳೆ ಲೋಕಾಯುಕ್ತ ಅಧಿಕಾರಿಗಳ ಕರ್ತವ್ಯಕ್ಕೆ ಅಡ್ಡಿಪಡಿಸಿ ಗಲಾಟೆ ಮಾಡಿದ್ದರು. ಈ ಸಂಬಂಧ ಕಾರಟಗಿ ಠಾಣೆಯಲ್ಲಿ 50 ಜನರ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.