ಸಾರಾಂಶ
ಕನ್ನಡಪ್ರಭ ವಾರ್ತೆ ಬಾಗೇಪಲ್ಲಿ
ಶಾಲಾ ಸಮಯದಲ್ಲಿ ಶಾಲೆಗೆ ಗೈರುಹಾಜರಾಗಿ ಖಾಸಗಿ ಕೆಲಸಗಳಲ್ಲಿ ತೊಡಗಿಸಿಕೊಂಡಿರುವ ಶಿಕ್ಷಕರ ವಿರುದ್ಧ ನೋಟಿಸ್ ಜಾರಿಗೊಳಿಸಿ, ನೋಟಿಸ್ಗೂ ಬಗ್ಗದ ಶಿಕ್ಷಕರನ್ನು ಅಮಾನತು ಮಾಡುವಂತೆ ಸರ್ಕಾರಕ್ಕೆ ಶಿಫಾರಸು ಮಾಡುವಂತೆ ಬಿಇಒಗೆ ಶಾಸಕ ಎಸ್.ಎನ್.ಸುಬ್ಬಾರೆಡ್ಡಿ ಸೂಚಿಸಿದರು.ಪಟ್ಟಣದ ತಾ.ಪಂ ಸಭಾಂಗಣದಲ್ಲಿ ನಡೆದ ತ್ರೈಮಾಸಿಕ ಕೆಡಿಪಿ ಸಭೆಯಲ್ಲಿ ಮಾತನಾಡಿದ ಅವರು, ಇಲ್ಲದಿದ್ದರೆ ಬಿಇಒ ಅವರನ್ನೇ ಹೊಣೆಗಾರರನ್ನಾಗಿಸಿ ನಿಮ್ಮ ವಿರುದ್ದ ಸೂಕ್ತ ಕಾನೂನು ಕ್ರಮಕ್ಕೆ ಮುಂದಾಗಬೇಕಾಗುತ್ತೆ ಎಂದು ಬಿಇಒ ವೆಂಕಟೇಶಪ್ಪ ರವರನ್ನು ತರಾಟೆಗೆ ತೆಗೆದುಕೊಂಡರು.
ಸೌಲಭ್ಯವಿದ್ದರೂ ಪ್ರಗತಿ ಶೂನ್ಯಬಹುತೇಕ ಬಡವರ ಮಕ್ಕಳು ಸರ್ಕಾರಿ ಶಾಲೆಗಳಿಗೆ ಬರುತ್ತಾರೆ. ಬಡ ವಿದ್ಯಾರ್ಥಿಗಳ ಶೈಕ್ಷಣಿಕ ಅಭಿವೃದ್ದಿಗಾಗಿ ಸರ್ಕಾರ ಅನೇಕ ಸೌಲಭ್ಯಗಳನ್ನು ನೀಡುತ್ತಿದೆ. ಶಾಲೆಯ ಶಿಕ್ಷಕರಿಗೆ ಲಕ್ಷಾಂತರ ರೂ.ಗಳ ಸಂಬಳ ನೀಡಲಾಗುತ್ತಿದೆ. ಆದರೆ ಶಿಕ್ಷಣದ ಪ್ರಗತಿ ಮಾತ್ರ ಶೂನ್ಯ. ಹಲವು ಶಿಕ್ಷಕರು ಶಾಲಾ ಸಮಯದಲ್ಲಿ ಶಾಲೆಗೆ ಚಕ್ಕರ್ ಹೊಡೆದು ಜಾತ್ರೆ, ರಿಯಲ್ ಎಸ್ಟೇಟ್, ಬಡ್ಡಿ ವ್ಯವಹಾರ ಇತ್ಯಾಥಿಗಳಲ್ಲಿ ತೊಡಗಿಸಿಕೊಳ್ಳುತ್ತಿದ್ದರೂ ಅಧಿಕಾರಿಗಳು ಕ್ರಮ ಕೈಗೊಳ್ಳುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಅಧಿಕಾರಿಗಳಿಗೆ ತರಾಟೆಇದನ್ನೆಲ್ಲ ಗಮನಿಸಿದರೆ ಅಧಿಕಾರಿಗಲೂ ಶಿಕ್ಷಕರ ಜೊತೆ ಶಾಮೀಲಾಗಿದ್ದಿರಾ ಎನ್ನುವ ಸಂಶಯ ಬರುತ್ತೆ. ಅಧಿಕಾರಿಗಳಿಗೆ ಶಿಕ್ಷಕರ ಮೇಲೆ ಹಿಡಿತವಿಲ್ಲ. ತಾವು ಕ್ಷೇತ್ರಕ್ಕೆ ಭೇಟಿ ನೀಡಿದ ಸಂದರ್ಭದಲ್ಲಿ ಶೇ.50 ರಷ್ಟು ಶಿಕ್ಷಕರು ಶಾಲಾ ಸಮಯದಲ್ಲಿ ಇರಲೇ ಇಲ್ಲ. ತಾಲೂಕಿನ ಬಿಳ್ಳೂರು ಶಾಲೆಯ ಶಿಕ್ಷಕರೊಬ್ಬರು 10.30 ಶಾಲೆಗೆ ಬಂದಿರಲಿಲ್ಲ. ಇನ್ನೊಬ್ಬ ಶಿಕ್ಷಕ ಸರ್ಕಾರಿ ಸಂಬಳ ಪಡೆದು ಖಾಸಗಿ ಕಾರು ಚಾಲಕನಾಗಿ ಕೆಲಸಕ್ಕೆ ಹೋಗುತ್ತಾನೆ. ಇದೇ ರೀತಿಯಲ್ಲಿ ಬಹುತೇಕ ಶಿಕ್ಷಕರು ಶಾಲೆಗೆ ಹೋಗದೆ ಓಡಿಕೊಂಡಿರುತ್ತಾರೆ ಇಲ್ಲಿ ಏನು ನಡೆಯುತ್ತಿದೆ ಎಂದು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.
ಶಾಲೆಗೆ ಚಕ್ಕರ್ ಹೊಡೆದು ಸರ್ಕಾರ ನೀಡುವ ಸಂಬಳಕ್ಕೆ ಹಾಜರಾಗುವ ಎಷ್ಟು ಶಿಕ್ಷಕರ ವಿರುದ್ಧ ನೀವು ಕ್ರಮ ತೆಗೆದುಕೊಂಡಿದ್ದಿರೀ, ಇಂತಹ ಶಿಕ್ಷಕರ ವಿರುದ್ದ ಏಕೆ ಕ್ರಮಕ್ಕೆ ಮುಂದಾಗುತ್ತಿಲ್ಲ. ನಿಮ್ಮ ಮತ್ತು ಶಿಕ್ಷಕರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತದಿಂದ ಬಡವರ ಮಕ್ಕಳು ಶಿಕ್ಷಣದಿಂದ ವಂಚಿತರಾಗುತ್ತಿದ್ದಾರೆ. ಅಲ್ಲದೆ ಬಹುತೇಕರು ಸರ್ಕಾರಿ ಶಾಲೆಗಳನ್ನು ತೊರೆದು ಖಾಸಗಿ ಶಾಲೆಗಳತ್ತ ಪೋಷಕರು ಒಲವುತೋರಿಸುತ್ತಿರುವುದರಿಂದ ಸರ್ಕಾರಿ ಶಾಲೆಗಳನ್ನು ಮುಚ್ಚುವ ಕೆಲಸ ಆಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.ಅರಣ್ಯಾಧಿಕಾರಿಗಳಿಗೆ ಎಚ್ಚರಿಕೆ
ರೈತರನ್ನು ಅರಣ್ಯ ಇಲಾಖೆಯ ಅಧಿಕಾರಿಗಳು ತಮ್ಮ ಶತೃಗಳಂತೆ ನೋಡುತ್ತಿದ್ದಾರೆ. ಹಲವು ವರ್ಷಗಳಿಂದ ಸಾಗುವಳಿ ಮಾಡುತ್ತಿರುವರಿಗೆ ತಹಸೀಲ್ದಾರ್ ನೀಡಿರುವ ಸಾಗುವಳಿ ಚೀಟಿ ಮಾನ್ಯತೆ ಮಾಡದಿದ್ದರೆ ಹೇಗೆ ಎಂದು ಪ್ರಶ್ನಿಸಿದ ಅವರು ರೈತರಿಗೆ ತೊಂದರೆ ಮಾಡಿದರೆ ನಿಮ್ಮ ಕಚೇರಿ ಮುಂದೆ ಖುದ್ದಾಗಿ ನಾನೇ ಪ್ರತಿಭಟನೆಗೆ ಮುಂದಾಗಬೇಕಾಗುತ್ತೆ ಎಂದು ಅರಣ್ಯ ಇಲಾಖೆ ಅಧಿಕಾರಿ ವಾಸುದೇವ ರಾವ್ಗೆ ಸೂಚನೆ ನೀಡಿದರು.ಕಳೆದ 3 ವರ್ಷಗಳಲ್ಲಿ 140 ಕೋಟಿ ರು.ಗಳ ಅನುದಾನ ರಸ್ತೆ ಅಭಿವೃದ್ದಿಗಾಗಿ ಬಿಡುಗಡೆಯಾಗಿದೆ. ಆದರೆ ರಸ್ತೆಗಳು ಮಾತ್ರ ಸರಿಯಾಗಿಲ್ಲ, ನಿಮ್ಮ ಇಲಾಖೆಗೆ ಎಷ್ಟು ಹಣ ಬಂದಿದೆ ಎನ್ನುವ ಮಾಹಿತಿ ಸಹ ನಿಮಗೆ ಇಲ್ಲ, ಕೋಟ್ಯತರ ರು.ಗಳ ವೆಚ್ಚದಲ್ಲಿ ನಿರ್ಮಿಸಿರುವ ರಸ್ತೆಗಳಲ್ಲಿ ಕೆಲವರು ರಸ್ತೆ ಅಗೆದು ಹಾಳು ಮಾಡಿದ್ದಾರೆ ಆದರೆ ನೀವು ಅವರ ವಿರುದ್ದ ಏಕೆ ಕ್ರಮಕೈಗೊಂಡಿಲ್ಲ ಎಂದು ಲೋಕೋಪಯೋಗಿ ಇಲಾಖೆ ಎಇಇ ಪ್ರದೀಪ್ ರವರನ್ನು ಪ್ರಶ್ನಿಸಿದ ಶಾಸಕರು, ರಸ್ತೆ ಹಾಳು ಮಾಡುವವರ ವಿರುದ್ದ ಕೇಸ್ ಹಾಕುವಂತೆ ಸೂಚಿಸಿದರು.
ಈ ಸಂದರ್ಭದಲ್ಲಿ ಪುರಸಭೆ ಅಧ್ಯಕ್ಷ ಎ.ಶ್ರೀನಿವಾಸ್, ಸದಸ್ಯ ಶ್ರೀನಿವಾಸರೆಡ್ಡಿ, ಕೆಡಿಪಿ ಸದಸ್ಯರಾದ ಪಿ.ಮಂಜುನಾಥರೆಡ್ಡಿ, ರಾಮಕೃಷ್ಣ, ರಿಜ್ವಾನ್, ಬಿ.ವಿ.ವೆಂಕಟರವಣ, ಜಿ.ಪಂ ಉಪಕಾರ್ಯದರ್ಶಿ ಹತೀಕ್ ಬಾಷಾ, ತಹಸೀಲ್ದಾರ್ ಮನೀಷಾ ಎನ್ ಪತ್ರಿ, ತಾ.ಪಂ.ಇಒ ರಮೇಶ್ ಮತ್ತಿತರರು ಇದ್ದರು..