ಇಲ್ಲಿನ ಮಂಡಿಪೇಟೆಯಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಸ್ವಸ್ತಿಕ್ ಗ್ರೂಪ್ ಆಯೋಜಿಸಿದ 53ನೇ ವರ್ಷದ ಶ್ರೀ ವಿನಾಯಕ ಮಹೋತ್ಸ ಅಂಗವಾಗಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ ಗಣಪತಿ ಉತ್ಸವದಲ್ಲಿ "ಸಮುದ್ರ ಮಂಥನ 3ಡಿ ವಿಶೇಷ ಪ್ರದರ್ಶನ " ಹಮ್ಮಿಕೊಳ್ಳಲಾಗಿದೆ ಎಂದು ಗ್ರೂಪ್ನ ಅಧ್ಯಕ್ಷ ಪ್ರವೀಣ್ ತಿಳಿಸಿದರು.
ಕನ್ನಡಪ್ರಭ ವಾರ್ತೆ ದಾವಣಗೆರೆ
ಇಲ್ಲಿನ ಮಂಡಿಪೇಟೆಯಲ್ಲಿರುವ ಶ್ರೀ ಕೋದಂಡರಾಮಸ್ವಾಮಿ ದೇವಸ್ಥಾನದಲ್ಲಿ ಸ್ವಸ್ತಿಕ್ ಗ್ರೂಪ್ ಆಯೋಜಿಸಿದ 53ನೇ ವರ್ಷದ ಶ್ರೀ ವಿನಾಯಕ ಮಹೋತ್ಸ ಅಂಗವಾಗಿ ಈ ಬಾರಿ ವಿಶೇಷ ಆಕರ್ಷಣೆಯಾಗಿ ಕರ್ನಾಟಕದಲ್ಲೇ ಮೊಟ್ಟಮೊದಲ ಬಾರಿಗೆ ಗಣಪತಿ ಉತ್ಸವದಲ್ಲಿ "ಸಮುದ್ರ ಮಂಥನ 3ಡಿ ವಿಶೇಷ ಪ್ರದರ್ಶನ " ಹಮ್ಮಿಕೊಳ್ಳಲಾಗಿದೆ ಎಂದು ಗ್ರೂಪ್ನ ಅಧ್ಯಕ್ಷ ಪ್ರವೀಣ್ ತಿಳಿಸಿದರು.ಬುಧವಾರ ಸುದ್ದಿಗೋಷ್ಟಿಯಲ್ಲಿ ಮಾಹಿತಿ ನೀಡಿದ ಅವರು, ವಿನಾಯಕ ಮಹೋತ್ಸವವು ಸೆ.25ರ ತನಕ ಜರುಗಲಿದೆ. ಸಮುದ್ರ ಮಂಥನ 3ಡಿ ಪ್ರದರ್ಶನವು ಸೆ.24ರವರೆಗೆ ಮಾತ್ರ ಇರಲಿದೆ. ಸೆ.25ರಂದು ಗಣೇಶ ಮೂರ್ತಿ ವಿಸರ್ಜನೆ ಮಾಡಲಾಗುವುದು ಎಂದರು. 3ಡಿ ಪ್ರದರ್ಶನದಲ್ಲಿ ದೇವರಾಜ ಇಂದ್ರ, ಮಹಾವಿಷ್ಣು ಹಾಗೂ ದೈತ್ಯರ ಸಹಾಯದಿಂದ ಜರುಗಿದ ಸಮುದ್ರ ಮಂಥನ, ಕೂರ್ಮಾವತಾರ, ಮೋಹಿನಿ ಅವತಾರ, ಕಲ್ಪವೃಕ್ಷ, ಕಾಮಧೇನು ಮತ್ತು ಅಮೃತ ಉತ್ಪತ್ತಿಯ ರೋಮಾಂಚಕಾರಿ ದೃಶ್ಯಗಳು 3ಡಿ ಎಫೆಕ್ಟ್ ಮೂಲಕ ಸಾರ್ವಜನಿಕರಿಗೆ ಪ್ರದರ್ಶಿಸಲ್ಪಡಲಿವೆ. ಪ್ರತಿದಿನ ಸಂಜೆ 6 ರಿಂದ 10ರ ತನಕ ಪ್ರದರ್ಶನ ನಡೆಯಲಿದೆ. ಒಟ್ಟು 12 ಸನ್ನಿವೇಶಗಳು ಇರಲಿದ್ದು, ಪ್ರತಿ 11ನಿಮಿಷಗಳ ಪ್ರದರ್ಶನ ನಡೆಯಲಿದೆ ಎಂದು ಮಾಹಿತಿ ನೀಡಿದರು.ಸೆ.25ರಂದು ಶ್ರೀ ವಿನಾಯಕ ಸ್ವಾಮಿಯ ವಿಸರ್ಜನೆ ಕಾರ್ಯಕ್ರಮ ನಡೆಯಲಿದ್ದು, ಅಂದು ಮಧ್ಯಾಹ್ನ ಸಾರ್ವಜನಿಕರಿಗಾಗಿ ವಿಶೇಷ ಮಹಾಪ್ರಸಾದ ವ್ಯವಸ್ಥೆ ಮಾಡಲಾಗಿದೆ. 45 ವರ್ಷಗಳ ಕಾಲ ಬೊಂಬೆಗಳ ಪ್ರದರ್ಶನ ನಡೆಸಲಾಗುತ್ತಿತ್ತು. ಇದೀಗ ಕಾಲಕ್ಕೆ ತಕ್ಕಂತೆ ಪ್ರದರ್ಶನಗಳನ್ನು ಬದಲಾವಣೆ ಮಾಡುತ್ತಾ ಬರಲಾಗುತ್ತಿದೆ ಎಂದು ತಿಳಿಸಿದರು.ಸುದ್ದಿಗೋಷ್ಠಿಯಲ್ಲಿ ಎ.ಎ.ಕೃಷ್ಣಪ್ಪ, ಎಂ.ವಿ.ಮಾಲತೇಶ್, ಕೆ.ಎಂ.ಮಹೇಶ್, ಪಿ.ಆರ್.ತಿಲಕ್, ಎನ್.ಕೆ.ರವಿ, ಎಸ್.ವಿ.ವಿನಯ್, ಜೈಶಾಹ ಇದ್ದರು.
