ಶ್ರೀಚೆಲುವನಾರಾಯಣಸ್ವಾಮಿಗೆ ಸಾಂಕೇತಿಕ ಉತ್ಸವ, ಕೃಷಿ ಸಚಿವರ ಪತ್ನಿ ಭಾಗಿ

| Published : Jul 20 2025, 01:15 AM IST

ಶ್ರೀಚೆಲುವನಾರಾಯಣಸ್ವಾಮಿಗೆ ಸಾಂಕೇತಿಕ ಉತ್ಸವ, ಕೃಷಿ ಸಚಿವರ ಪತ್ನಿ ಭಾಗಿ
Share this Article
  • FB
  • TW
  • Linkdin
  • Email

ಸಾರಾಂಶ

ಕೃಷ್ಣರಾಜ ಒಡೆಯರ್ ಆರಂಭಿಸಿದ ರಥೋತ್ಸವದ ಅನೂಚಾನ ಸಂಪ್ರದಾಯದಂತೆ ಘಂಟಾವತಾರ ಪರಕಾಲ ಮಠದ ಶ್ರೀಗಳ ಪ್ರತಿನಿಧಿಗೆ ದೇವಾಲಯದ ಪರವಾಗಿ ಪಾರು ಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಿದರು.

ಮೇಲುಕೋಟೆ:

ಕೃಷ್ಣರಾಜ ಮುಡಿ ಜಾತ್ರಾ ಮಹೋತ್ಸವದ ಅಂಗವಾಗಿ ಶ್ರೀಚೆಲುವನಾರಾಯಣಸ್ವಾಮಿಗೆ ಮಹಾ ರಥೋತ್ಸವದ ಸಾಂಕೇತಿಕ ಉತ್ಸವ ಶನಿವಾರ ನೆರವೇರಿತು.

ಶ್ರೀದೇವಿ ಭೂದೇವಿ ಕಲ್ಯಾಣ ನಾಯಕಿ ಅಮ್ಮನವರೊಂದಿಗೆ ವಜ್ರಕಚಿತ ಶ್ರೀಕೃಷ್ಣರಾಜಮಣಿ ಕಿರೀಟದೊಂದಿಗೆ ಅಲಂಕೃತನಾದ ಸ್ವಾಮಿಗೆ ಯಾತ್ರಾ ದಾನ ನೆರವೇರಿಸಿ ರಥೋತ್ಸವದ ಸಾಂಕೇತಿಕ ಉತ್ಸವಕ್ಕೆ ಚಾಲನೆ ನೀಡಲಾಯಿತು. ವಾಹನೋತ್ಸವ ಮಂಟಪದಲ್ಲಿ ವಿಶೇಷ ಪಾರಾಯಣಗಳು ನಡೆದವು.

ಜಿಲ್ಲಾ ಉಸ್ತುವಾರಿ ಸಚಿವ ಎನ್.ಚಲುವರಾಯಸ್ವಾಮಿ ಅವರ ಧರ್ಮಪತ್ನಿ ಧನಲಕ್ಷ್ಮಿ ಅವರು ರಥೋತ್ಸವದಲ್ಲಿ ಪಾಲ್ಗೊಂಡು ಚೆಲುವನಾರಾಯಣನ ದರ್ಶನ ಮಾಡಿದರು. ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಗುರೂಜಿ ಮಾರ್ಗದರ್ಶನದಲ್ಲಿ ವಿಶೇಷ ಪಾರಾಯಣ ನಡೆಯಿತು.

ತಮಿಳುನಾಡಿನ ತಿರುವಲ್ಲಿ ಕೇಣಿ ಪಾರ್ಥಸಾರಥಿ ಮತ್ತು ಶ್ರೀಪೆರಂಬದೂರು ದೇವಾಲಯ ಹಾಗೂ ಮೇಲುಕೋಟೆ ದೇವಾಲಯದ ಐವತ್ತಕ್ಕೂ ಹೆಚ್ಚು ಕೈಂಕರ್ಯ ಪರರಿಗೆ ವೈಯುಕ್ತಿಕವಾಗಿ ವಿಶೇಷ ದಕ್ಷಿಣೆಯನ್ನು ನೀಡಿ ಗೌರವಿಸಿದರು.

ಕೃಷ್ಣರಾಜ ಒಡೆಯರ್ ಆರಂಭಿಸಿದ ರಥೋತ್ಸವದ ಅನೂಚಾನ ಸಂಪ್ರದಾಯದಂತೆ ಘಂಟಾವತಾರ ಪರಕಾಲ ಮಠದ ಶ್ರೀಗಳ ಪ್ರತಿನಿಧಿಗೆ ದೇವಾಲಯದ ಪರವಾಗಿ ಪಾರು ಪತ್ತೇಗಾರ್ ಸ್ಥಾನಾಚಾರ್ಯ ಶ್ರೀನಿವಾಸ ನರಸಿಂಹನ್ ಶಾಲು ಹೊದಿಸಿ ಫಲತಾಂಬೂಲ ನೀಡಿ ಸನ್ಮಾನಿಸಿದರು. ತುಂತುರು ಮಳೆಯ ನಡುವೆಯೂ ಮೇಲುಕೋಟೆಗೆ ಆಗಮಿಸಿಷ ಸಹಸ್ರಾರು ಭಕ್ತರು.

ಶ್ರೀಬಾಲಸುಬ್ರಹ್ಮಣ್ಯೇಶ್ವರ ಸ್ವಾಮಿ ಮಹೋತ್ಸವ ಇಂದು

ಮಂಡ್ಯ:

ನಗರದ ರೈಲು ನಿಲ್ದಾಣದ ಬಳಿಯ ಶ್ರೀಬಾಲಸುಬ್ರಹ್ಮಣೇಶ್ವರಸ್ವಾಮಿ ದೇವಸ್ಥಾನದಲ್ಲಿ ಭಾನುವಾರ (ಜು.20) ಶ್ರೀ ಬಾಲಸುಬ್ರಹ್ಮಣ್ಯೇಶ್ವರಸ್ವಾಮಿ ಪೂಜಾ ಮಹೋತ್ಸವ ನಡೆಯಲಿದೆ. ಬೆಳಗ್ಗೆ 6 ರಿಂದ 9 ಗಂಟೆಯವರೆಗೆ ಶ್ರೀ ಸ್ಕಂದ ಹೋಮ (ಸುಬ್ರಹ್ಮಣ್ಯ ಹೋಮ) ಹಾಗೂ ಶ್ರೀಬಾಲ ಸುಬ್ರಹ್ಮಣ್ಯೇಶ್ವರ ಸ್ವಾಮಿಗೆ ಫಲಪಂಚಾಮೃತಾಭಿಷೇಕ ಸಹಿತ ಮಹಾಪೂಜೆ ಮತ್ತು ಮಹಾ ಮಂಗಳಾರತಿ ನಂತರ ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಪ್ರಸಾದ ವಿನಿಯೋಗ ನಡೆಯಲಿದೆ. ಭಕ್ತಾದಿಗಳು ಹೆಚ್ಚಿನ ಸಂಖ್ಯೆಯಲ್ಲಿ ದೇವಾಲಯಕ್ಕೆ ಭೇಟಿ ನೀಡಿ ಸ್ವಾಮಿಯ ದರ್ಶನ ಪಡೆಯುವಂತೆ ದೇವಾಲಯ ವ್ಯವಸ್ಥಾಪನಾ ಮಂಡಳಿ ತಿಳಿಸಿದೆ.