ಚುನಾವಣಾ ಜನಸಂಖ್ಯೆ ಅನುಪಾತ ತಗ್ಗಿಸಲು ಕ್ರಮ ಕೈಗೊಳ್ಳಿ

| Published : Nov 25 2024, 01:01 AM IST

ಚುನಾವಣಾ ಜನಸಂಖ್ಯೆ ಅನುಪಾತ ತಗ್ಗಿಸಲು ಕ್ರಮ ಕೈಗೊಳ್ಳಿ
Share this Article
  • FB
  • TW
  • Linkdin
  • Email

ಸಾರಾಂಶ

ಶಿವಮೊಗ್ಗದ ಡಿಸಿ ಕಚೇರಿ ಸಭಾಂಗಣದಲ್ಲಿ ನಡೆದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿದರು.

ಕನ್ನಡಪ್ರಭ ವಾರ್ತೆ ಶಿವಮೊಗ್ಗ

ಜಿಲ್ಲೆಯಲ್ಲಿ ಚುನಾವಣಾ ಜನಸಂಖ್ಯೆ ಅನುಪಾತ (ಇಪಿ ರೇಷಿಯೋ) ರಾಜ್ಯ ಸರಾಸರಿಗಿಂತ ಹೆಚ್ಚಿದ್ದು, ಇದನ್ನು ತಗ್ಗಿಸಲು ಅಗತ್ಯವಾದ ಕ್ರಮ ಕೈಗೊಳ್ಳಬೇಕು ಎಂದು ಶಿವಮೊಗ್ಗ ಜಿಲ್ಲೆಯ ಮತದಾರರ ಪಟ್ಟಿಯ ವೀಕ್ಷಕರಾದ ಡಾ.ಕೆ.ವಿ.ತ್ರಿಲೋಕ್ ಚಂದ್ರ ಚುನಾವಣಾ ಅಧಿಕಾರಿಗಳಿಗೆ ಸೂಚನೆ ನೀಡಿದರು. ಜಿಲ್ಲಾಡಳಿತ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ನಡೆದ ಮತದಾರರ ಪಟ್ಟಿಯ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ 2025ಕ್ಕೆ ಕುರಿತಾದ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿದ ಅವರು, ಜಿಲ್ಲೆಯಲ್ಲಿ ಸರಾಸರಿ 68 ರಿಂದ 69 ಇರಬೇಕಾದ ಇಪಿ ರೇಷಿಯೋ 78 ಇದೆ. ಆದ್ದರಿಂದ ಎಲ್ಲ ಕ್ಷೇತ್ರವಾರು ಅಗತ್ಯವಾದ ವಿಶ್ಲೇಷಣೆ ನಡೆಸಿ ಹಾಗೂ ಇ-ಜನ್ಮ ಪೋರ್ಟಲ್‌ನಿಂದ ಮಾಹಿತಿ ಪಡೆದು ಕಡಿಮೆ ಮಾಡಬೇಕು ಎಂದು ತಿಳಿಸಿದರು.

ಮರಣ ಹೊಂದಿದ ಹಾಗೂ ಇತರೆಡೆ ವರ್ಗಾವಣೆಯಾದ ಮತದಾರರನ್ನು ಪಟ್ಟಿಯಿಂದ ತೆಗೆದುಹಾಕುವುದರ ಜೊತೆಗೆ ಫಾರಂ ಸಂಖ್ಯೆ 7 ಅಪ್‌ಡೇಟ್ ಆಗಬೇಕು. ಪಾಲಿಕೆ ವ್ಯಾಪ್ತಿಯಲೂ ಈ ಬಗ್ಗೆ ಹೆಚ್ಚಿನ ಗಮನ ಹರಿಸಬೇಕು ಹಾಗೂ ಯುವ ಮತದಾರರು ಸೇರಿದಂತೆ ಮತದಾರರ ನೋಂದಣಿಯನ್ನು ಪರಿಣಾಮಕಾರಿಯಾಗಿ ಮಾಡಬೇಕು ಎಂದು ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಗುರುದತ್ತ ಹೆಗಡೆ ಮಾತನಾಡಿ, ಜಿಲ್ಲೆಯಲ್ಲಿ ಕ್ಷೇತ್ರವಾರು ಇಆರ್‌ಒ ಮತ್ತು ಎಇಆರ್‌ಒಗಳನ್ನು ನೇಮಿಸಿ, ತರಬೇತಿ ನೀಡಲಾಗಿದೆ. ಒಟ್ಟು 1,793 ಮತಗಟ್ಟೆಗಳಿದ್ದು, ಎಲ್ಲ ಮತಗಟ್ಟೆಗಳಿಗೆ ಬಿಎಲ್‌ಒಗಳ ನೇಮಕ ಮಾಡಲಾಗಿದೆ. ಕಳೆದ ಅ.29 ರಂದು ಸಮಗ್ರ ಕರಡು ಮತದಾರರ ಪಟ್ಟಿಯನ್ನು ಪ್ರಕಟಿಸಿದ್ದು,

ನ.28ರವರೆಗೆ ಹಕ್ಕು ಮತ್ತು ಆಕ್ಷೇಪಣೆಗಳನ್ನು ಕರೆಯಲಾಗಿದೆ. ಜ.1ರಂದು ಮತದಾರರ ಅಂತಿಮ ಪಟ್ಟಿ ಪ್ರಕಟಕ್ಕೆ ಕ್ರಮ ವಹಿಸಲಾಗುವುದು. ಜ.6ರಂದು ಅಂತಿಮ ಮತದಾರರ ಪಟ್ಟಿಯನ್ನು ಪ್ರಕಟಿಸಲಾಗುವುದು ಎಂದು ಮಾಹಿತಿ ನೀಡಿದರು.

ಜಿಲ್ಲೆಯಲ್ಲಿ ಕರಡು ಮತದಾರರ ಪಟ್ಟಿ ಪ್ರಕಾರ ಪ್ರಸ್ತುತ 15,2,0326 ಮತದಾರರು ಇದ್ದಾರೆ. 2024ರ ಅಂತಿಮ ಪಟ್ಟಿ ಪ್ರಕಾರ 14,82,938 ಮತದಾರರು ಇದ್ದರು. ಅ.29ರಂದು ಲಿಂಗಾನುಪಾತ 1,031 ಇದೆ. ಕಳೆದ ಬಾರಿ 1022 ಇತ್ತು. ಜನವರಿಯಿಂದ ಜೂನ್‌ವರೆಗೆ 18 ರಿಂದ 19 ವಯಸ್ಸಿನ 18,222 ಮತದಾರರು ನೋಂದಣಿಯಾಗಿದ್ದಾರೆ. 80 ವರ್ಷದವರೆಗೆ ಒಟ್ಟಾರೆ 15,20,326 ಜನ ಮತದಾರರ ಪಟ್ಟಿಯಲ್ಲಿದ್ದಾರೆ.

ಇಪಿ ರೇಷಿಯೋ ಪುರುಷ 78.87 ಮತ್ತು 79.07 ಒಟ್ಟು 78.99 ಇದ್ದು ಇದನ್ನು ಕಡಿತಗೊಳಿಸಲು ಫಾರಂ ನಂ 7, ವರ್ಗಾವಣೆ, ಮರಣ ಗೈರು ಮತದಾರರ ಡಿಲೀಷನ್ ಕೆಲಸ ಮಾಡಲಾಗುತ್ತಿದೆ. ಇದನ್ನು ಎಲ್ಲ ಕ್ಷೇತ್ರವಾರು ಪರಿಣಾಮಗೊಳಿಸಲಾಗುವುದು ಎಂದು ತಿಳಿಸಿದರು.

ಈ ಸಂಸರ್ಭದಲ್ಲಿ ಜಿಪಂ ಸಿಇಒ ಎನ್.ಹೇಮಂತ್, ಐಎಎಸ್ ಪ್ರೊಬೇಷನರಿ ಅಧಿಕಾರಿ ದೃಷ್ಟಿ ಜೈಸ್ವಾಲ್, ಪಾಲಿಕೆ ಆಯುಕ್ತೆ ಡಾ.ಕವಿತಾ ಯೋಗಪ್ಪನವರ್, ಅಪರ ಜಿಲ್ಲಾಧಿಕಾರಿ ಸಿದ್ದಲಿಂಗ ರೆಡ್ಡಿ, ಎಸಿ ಸತ್ಯನಾರಾಯಣ್, ಚುನಾವಣಾ ತಹಸೀಲ್ದಾರ್ ಪ್ರದೀಪ್, ತಾಲೂಕುಗಳ ತಹಸೀಲ್ದಾರರು, ತಾಪಂ ಇಒ ಮತ್ತು ಚುನಾವಣೆಗೆ ಸಂಬಂಧಿಸಿದ ಇತರೆ ಅಧಿಕಾರಿಗಳು ಭಾಗವಹಿಸಿದ್ದರು